ದೀಪಾವಳಿ ಹಬ್ಬದ ವೇಳೆ ರಾತ್ರಿ ಹೊತ್ತು ನಿಗದಿತ ಅವಧಿ ಮೀರಿ ಪಟಾಕಿ ಸಿಡಿಸುವುದನ್ನು ನಿಯಮಾನುಸಾರ ಕಟ್ಟುನಿಟ್ಟಾಗಿ ಸಂಪೂರ್ಣ ನಿಯಂತ್ರಿಸಬೇಕು ಎಂದು ಪ್ರಾಣಿ ಕಲ್ಯಾಣ ಸಾಮಾಜಿಕ ಕಾರ್ಯಕರ್ತೆ ಜೆನಿ ಲಿಯಾನ್ ಲೋಪೆಜ್ ಒತ್ತಾಯಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸರಕಾರ ರಾತ್ರಿ 8 ರಿಂದ 10 ಗಂಟೆಯವರೆಗೂ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಆದರೂ ಕೆಲವು ಕಡೆಗಳಲ್ಲಿ ಯುವಜನತೆ ಸರಕಾರದ ಆದೇಶವನ್ನು ಉಲ್ಲಂಘಿಸಿ ರಸ್ತೆಗಳಲ್ಲಿ ತಡರಾತ್ರಿವರೆಗೂ ಹೆಚ್ಚು ಶಬ್ದದ ಪಟಾಕಿ ಸಿಡಿಸಿ ಮಾಲಿನ್ಯ ಉಂಟು ಮಾಡುವುದರ ಜೊತೆಗೆ ಸ್ಥಳೀಯ ನಿವಾಸಿಗಳಿಗೂ ತೊಂದರೆ ನೀಡುವ ಘಟನೆಗಳಾಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬೆಂಗಳೂರು | ಆದ್ಯತೆ ಮೇಲೆ ರಸ್ತೆ ಕಾಮಗಾರಿ ಕೈಗೊಳ್ಳಿ: ರಾಜೇಂದ್ರ ಚೋಳನ್
“ರಾತ್ರಿಯಲ್ಲಿ ಹೆಚ್ಚು ಶಬ್ದದ ಪಟಾಕಿ ಸಿಡಿಸುವುದು ಪರಿಸರ ಸಂರಕ್ಷಣಾ ಕಾಯ್ದೆ-1986 ಅಡಿ ದಂಡನೀಯ ಅಪರಾಧ. ಮುಖ್ಯವಾಗಿ ಪ್ರಾಣಿ, ಪಕ್ಷಿಗಳು, ವೃದ್ಧರು, ಮಕ್ಕಳಿಗೆ ಇದರಿಂದ ತೀವ್ರ ಆಘಾತವಾಗಲಿದೆ. ಮಾಲಿನ್ಯದಿಂದಾಗಿ ಉಸಿರಾಟ, ಅಸ್ತಮಾ, ಹೃದಯ ಸಂಬAಧಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಹಾಗಾಗಿ ದೀಪಾವಳಿಯನ್ನು ಪರಿಸರ ಸ್ನೇಹಿ ಬೆಳಕಿನ ಹಬ್ಬವಾಗಿ ಆಚರಿಸಬೇಕು. ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ ತೊಂದರೆ ನೀಡುವವರ ವಿರುದ್ಧ ಕ್ರಮಕ್ಕೆ ಸಹಾಯವಾಣಿ ತೆರೆದು ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.





