ಆರು ದಿನಗಳ ಹಿಂದೆ ರೈಲ್ವೆ ಇಲಾಖೆಯ ಏಕಾಏಕಿ ಡೆಮಾಲಿಷನ್ ಕಾರ್ಯದಿಂದ ಬೆಂಗಳೂರಿನ ಕೆಜೆ ಹಳ್ಳಿಯ 30ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ.
ಒಂದು ದಿನದ ಮುಂಚೆಯಾದರೂ ನೋಟಿಸ್ ನೀಡಿದ್ದರೆ, ಮನೆಯಲ್ಲಿ ಇದ್ದ ವಸ್ತುಗಳನ್ನಾದರೂ ತೆಗೆದುಕೊಳ್ಳಬಹುದಿತ್ತು, ಆದರೆ ಒಂದು ದಿನವೂ ಸಮಯ ಕೊಡಲಿಲ್ಲ. ಬಡವರ ಮೇಲೆ ದರ್ಪ ತೋರಿಸಲು 700 ಪೊಲೀಸರು ಬೇಕಾ? ನಮಗೆ ಬಟ್ಟೆ ಬದಲಾಯಿಸಲು ಜಾಗವಿಲ್ಲ, ಮಕ್ಕಳಿಗೆ ಕುಡಿಯಲು ನೀರಿಲ್ಲ. ವಾರದಿಂದ ರೈಲ್ವೇ ಹಳಿಯ ಪಕ್ಕದಲ್ಲೇ ಬದುಕುವಂತಾಗಿದೆ ಎಂದು ಸೂರು ಕಳೆದುಕೊಂಡ ಸಂತ್ರಸ್ತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೆಮಾಲಿಷನ್ ದಿನ ಮಹಿಳೆಯರ ಮೇಲೂ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಮ್ಮ ಮನೆಯು ತಾತನ ಕಾಲದಿಂದಲೂ ಇಲ್ಲಿದೆ, ನಾವು ವಾಸಕ್ಕೆ ಬಂದಾಗ ರೈಲ್ವೆ ಗೇಟ್ ಕೂಡ ಇರಲಿಲ್ಲ. ಆದರೆ ಇಂದು ಹೊಸ ರೈಲ್ವೆ ಹಳಿ ಹೆಸರಿನಲ್ಲಿ ನಮ್ಮ ಸೂರುಗಳನ್ನು ನೆಲಸಮ ಮಾಡಲಾಗಿದೆ. ನಮಗೆ ರೈಲ್ವೆ ಇಲಾಖೆಯ ಮೇಲೆ ಬೇಸರ ಇಲ್ಲ, ಆದರೆ ಜನಪ್ರತಿನಿಧಿಗಳ ಮೌನವೇ ನೋವು. ನಮ್ಮ ವಿಷಯ ಯಾರಿಗೂ ಗೊತ್ತಿಲ್ಲದಂತೆ ಮಾಡಲಾಗಿದೆ” ಎಂದು ನಿವಾಸಿಗಳು ವಿಷಾದಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ
ಕೆ.ಜೆ.ಹಳ್ಳಿ ನಿವಾಸಿಗಳ ಪ್ರಕಾರ, ಒಂದು ತಿಂಗಳ ಹಿಂದೆ ಹೊಸ ಟ್ರ್ಯಾಕ್ ನಿರ್ಮಾಣದ ನೋಟಿಸ್ ನೀಡಲಾಗಿತ್ತು. ಅದಾದ ಬಳಿಕ ಏಕಾಏಕಿ 25ಕ್ಕೂ ಹೆಚ್ಚು ಮನೆಗಳನ್ನ ನೆಲಸಮಗೊಳಿಸಲಾಗಿದೆ. ಈಗ ಟ್ರ್ಯಾಕ್ ಪಕ್ಕದ ಚಿಕ್ಕ ಗುಡಾರಗಳೇ ಇವರ ಮನೆಗಳು. ಮಕ್ಕಳು ಶಾಲೆ ಬಿಟ್ಟಿದ್ದಾರೆ, ವೃದ್ಧರಿಗೆ ಔಷಧಿ ಸಿಗುತ್ತಿಲ್ಲ. ರೈಲ್ವೆ ಇಲಾಖೆಯ ಕ್ರಮದ ವಿರುದ್ಧ ನಿವಾಸಿಗಳು ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.





