ಕರ್ನಾಟಕದ ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಗುರಿಯೊಂದಿಗೆ ಉಬರ್ ಇಂಡಿಯಾ ಹೊಸದೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯಡಿ ಯುವಕರಿಗೆ ಚಾಲನೆ ತರಬೇತಿ ನೀಡುವುದರ ಜೊತೆಗೆ ಪ್ರಮಾಣೀಕೃತ ಪ್ರವಾಸಿ-ಮಾರ್ಗದರ್ಶಿ ಕೌಶಲ್ಯ ಒದಗಿಸುವ ಉದ್ದೇಶ ಹೊಂದಿದೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರೊಂದಿಗೆ ಉಬರ್ನ ಏಷ್ಯಾ ಪೆಸಿಫಿಕ್ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ಮಾತುಕತೆ ನಡೆಸಿದರು.
ಪ್ರ”ವಾಸೋದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳೊಂದಿಗೆ ಚಾಲಕರನ್ನು ಸಜ್ಜುಗೊಳಿಸುವುದು ವಿಶೇಷವಾಗಿ ತಳ ಸಮುದಾಯದ ಯುವಕರಿಗೆ ಆದಾಯದ ಅವಕಾಶಗಳನ್ನು ಒದಗಿಸುವುದು ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಇದಾಗಿದೆ” ಎಂದು ಹೇಳಿದರು.
“ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ಡಿಸಿ) ಪ್ರಸ್ತುತ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನ ಚಾಲನೆ ತರಬೇತಿ ನೀಡುತ್ತದೆ. 100ಕ್ಕೂ ಹೆಚ್ಚು ತರಬೇತಿ ಪಡೆದ ಚಾಲಕರು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಬರ್ ಸಂಸ್ಥೆ ಗಳಿಕೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು “ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ” ಮಾದರಿಯನ್ನು ಪ್ರಸ್ತಾಪಿಸಿದೆ.
“ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಾದ್ಯಂತ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ವಿವಿಧ ಕೌಶಲ್ಯ ಯೋಜನೆಗಳನ್ನು ನಾವು ಚರ್ಚಿಸಿದ್ದೇವೆ, ಕರ್ನಾಟಕದಲ್ಲಿ ಹೇರಳ ಪ್ರವಾಸೋದ್ಯಮ ತಾಣಗಳಿವೆ. ಅಲ್ಲಿ ಉತ್ತಮ ತರಬೇತಿ ಪಡೆದ ಕ್ಯಾಬ್ ಚಾಲಕರು ಇದ್ದರೆ ಪ್ರವಾಸಿ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸಬಹುದು” ಎಂದು ಆರ್ಗಿಲ್ ಹೇಳಿದರು.
ನಂತರ ಸಚಿವ ಡಾ. ಪಾಟೀಲ್ ಮಾತನಾಡಿ, “ಚಾಲಕ ತರಬೇತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಸಂಯೋಜಿಸುವುದು ಪ್ರಯೋಜನಕಾರಿ. ಇದೊಂದು ಉತ್ತಮ ಯೋಜನೆ ಎಂದು ಸ್ವಾಗತಿಸಿದರು ಮತ್ತು ಮಂಡಳಿಯ ಮುಂದಿನ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು” ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಬೆಂಗಳೂರು | ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು
ಹೈವಿಷನ್ ಇಂಡಿಯಾ, ಸುಧಾರಿತ ತಾಂತ್ರಿಕ ತರಬೇತಿಗಾಗಿ ಜಿಟಿಟಿಸಿ ಜೊತೆ ಒಪ್ಪಂದ: ಮತ್ತೊಂದು ಸಭೆಯಲ್ಲಿ, ಐಫೋನ್ ತಯಾರಕ ಫಾಕ್ಸ್ಕಾನ್ಗೆ ಕ್ಯಾಮೆರಾ ಪರಿಕರಗಳನ್ನು ಒದಗಿಸುವ ಕೊರಿಯನ್ ಸಂಸ್ಥೆಯಾದ ಹೈವಿಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಚಿವ ಡಾ. ಪಾಟೀಲ್ ಸಮ್ಮುಖದಲ್ಲಿ ಜಿಟಿಟಿಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
ತಾಂತ್ರಿಕ ತರಬೇತಿ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಯಾಂತ್ರೀಕೃತತೆ, ನಿಖರ ಯಂತ್ರೋಪಕರಣ ಮತ್ತು ಸಲಕರಣೆಗಳ ಜೋಡಣೆಯಂತಹ ಕ್ಷೇತ್ರಗಳಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಸಹಕಾರಕ್ಕಾಗಿ ಈ ಒಪ್ಪಂದವು ಅವಕಾಶವನ್ನು ಒದಗಿಸುತ್ತದೆ.
ಒಪ್ಪಂದಕ್ಕೆ ಹೈವಿಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲೀ ಯುನ್ಹೋ ಮತ್ತು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸಹಿ ಹಾಕಿದರು. ಎರಡೂ ಸಂಸ್ಥೆಗಳು ಅರ್ಹ ಜಿಟಿಟಿಸಿ ಪ್ರಶಿಕ್ಷಣಾರ್ಥಿಗಳಿಗೆ ಕೈಗಾರಿಕಾ ಮಾನ್ಯತೆ, ಇಂಟರ್ನ್ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸಮ್ಮತಿಸಿವೆ. ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕೈಗಾರಿಕಾ ಸೌಲಭ್ಯಗಳು ಮತ್ತು ಪ್ರಾತ್ಯಕ್ಷಿಕೆ ಸಲಕರಣೆಗಳನ್ನು ಪೂರೈಸಲಿವೆ.





