ಗುರಾಯಿಸಿ ನೋಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 22 ವರ್ಷದ ಯುವಕನಿಗೆ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಭಾನುವಾರ ನಡೆದಿದೆ.
ಮೃತ ಯುವಕನನ್ನು ಹೊಯ್ಸಳನಗರದ ಮನೋಜ್ ಎಂದು ಗುರುತಿಸಲಾಗಿದೆ. ಮನೋಜ್ ಮತ್ತು ಆತನ ಸ್ನೇಹಿತ ಆಂಟನಿ ಮನೆಗೆ ಹಿಂದಿರುಗುತ್ತಿದ್ದಾಗ ರಾಮಮೂರ್ತಿನಗರದ ರಸ್ತೆಯೊಂದರಲ್ಲಿ ಗುಂಪೊಂದು ಸೇರಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟೊಂದು ಜನರ ಗುಂಪು ಯಾಕಾಗಿ ಸೇರಿದೆ ಎಂಬ ಕುತೂಹಲದಲ್ಲಿ ಮನೋಜ್ ನಿಂತು ಆ ಗುಂಪಿನತ್ತ ನೋಡಿದ್ದಾನೆ. ಈ ವೇಳೆ ಮನೋಜ್ ತಮ್ಮನ್ನು ಗುರಾಯಿಸಿ ನೋಡಿದ್ದಾನೆ ಎಂದು ಗುಂಪಿನಲ್ಲಿದ್ದವರು ಆಕ್ರೋಶಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಚಾಕುವಿನಿಂದ ಇರಿದು ಅಡುಗೆ ಭಟ್ಟನ ಕೊಲೆ
ಅಪರಿಚಿತ ಗುಂಪು ಮತ್ತು ಮನೋಜ್, ಆಂಟನಿ ನಡುವೆ ವಾಗ್ವಾದ ನಡೆದಿದ್ದು, ದುಷ್ಕರ್ಮಿಗಳು ಮನೋಜ್ ಮತ್ತು ಆಂಟನಿಗೆ ಇರಿದಿದ್ದಾರೆ.
ಮನೋಜ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆಂಟನಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.




