ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ತಮ್ಮ 38 ತಿಂಗಳ ಹಿಂಬಾಕಿ ಮತ್ತು 2024ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಿಂದ ಸಾರಿಗೆ ನೌಕರರು ಆಗಮಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ.
ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದ್ದಾರೆ. ಇಂದು ಸಂಜೆ 4 ಗಂಟೆಯವರೆಗೆ ಗಡುವು ನೀಡುತ್ತೇವೆ. ತಮ್ಮ ಬೇಡಿಕೆಗಳು ಈಡೇರಿಕೆಯಾಗದಿದ್ದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ ಮತ್ತು ಇತರ ನಿಗಮಗಳ ಬಸ್ ಸಂಚಾರ ಸೇವೆ ನಡೆಯುತ್ತಿದೆ.
ಇದರ ನಡುವೆಯೇ ರಾಜ್ಯ ಸರ್ಕಾರವು ನೌಕರರ 26 ತಿಂಗಳ ಹಿಂಬಾಕಿ ನೀಡಲು ಸಿದ್ದವಾಗಿದೆ. ಆದರೆ ಈ ಪ್ರಸ್ತಾವನೆಯನ್ನು ಸಾರಿಗೆ ನೌಕರರು ತಿರಸ್ಕರಿಸಿದ್ದು, “ನಮಗೆ 38 ತಿಂಗಳ ಬಾಕಿಯನ್ನೂ ಕೊಡಲೇಬೇಕು. ಇಂದು ಸಂಜೆಯೊಳಗೆ ರಾಜ್ಯ ಸರ್ಕಾರ ತಮ್ಮ ಎರಡೂ ಬೇಡಿಕೆಗಳ ಈಡೇರಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಜೆ ಸಭೆ ನಡೆಸಿ ಶುಕ್ರವಾರದಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ತೀವ್ರ ತರದ ಹೋರಾಟ ನಡೆಸಲು ಮುಂದಾಗುತ್ತೇವೆ” ಎಂಬ ಎಚ್ಚರಿಕೆ ನೀಡಿದ್ದಾರೆ.
“ಸರ್ಕಾರ 28 ತಿಂಗಳ ಹಿಂಬಾಕಿ ನೀಡುವುದಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ನೌಕರರೊಂದಿಗಾಗಲೀ ಅಥವಾ ಮುಖಂಡರೊಂದಿಗಾಗಲೀ ಸಭೆ ನಡೆಸಿ ನಿರ್ಧರಿಸಿಲ್ಲ. ನಮ್ಮ ಎರಡು ಬೇಡಿಕೆಗಳನ್ನೂ ಈಡೇರಿಸಲು ಸಮ್ಮತಿಸಲೇಬೇಕು. ನಾವು ಕಷ್ಟದಲ್ಲಿ ದುಡಿಯುವ ವರ್ಗ, ನಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಜಂಟಿ ಕ್ರಿಯಾ ಸಮಿತಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನೌಕರರು ಪಟ್ಟು ಹಿಡಿದಿರುವುದರಿಂದ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವ ಸಾಧ್ಯತೆಗಳಿವೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. ನೌಕರರು ಇದರಿಂದ ಸಂತೋಷಪಡಬೇಕು ಮತ್ತು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. 38 ತಿಂಗಳು ಕೇಳಿದ್ದರು, 26 ತಿಂಗಳು ಕೊಟ್ಟಿದ್ದೇವೆ. ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಎಂದು ಸಂತೋಷಪಡಬೇಕು. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅನ್ಯಜಾತಿ ಯುವಕನೊಂದಿಗೆ ಮದುವೆ : 4 ತಿಂಗಳ ಸಹೋದರಿಯ ಹತ್ಯೆಗೆ ಯತ್ನಿಸಿದ ಅಣ್ಣ!
ಆದರೆ, ಸಾರಿಗೆ ನೌಕರರ ಸಂಘವು ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಇಂದಿನ ಸಂಜೆ ಸಭೆಯ ನಂತರ ಬಸ್ ಸಂಚಾರದ ಭವಿಷ್ಯ ನಿರ್ಧಾರವಾಗಲಿದೆ.
ಕೆಎಸ್ಆರ್ಟಿಸಿ ನಿರ್ವಾಹಕ ಎ ಕೆ ಸುರೇಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಹಾಸನ ಜಿಲ್ಲೆಯ ಸಾರಿಗೆ ಡಿಪೋದಲ್ಲಿ 1700 ಮಂದಿ ನೌಕರರಿದ್ದು, ದಿನಕ್ಕೆ 200 ಮಂದಿ ವಾರದ ರಜೆಯಲ್ಲಿರುತ್ತಾರೆ. ಅಂತೆಯೇ ಇಂದು ವಾರದ ರಜೆಯಲ್ಲಿರುವವರನ್ನು ಹೊರತುಪಡಿಸಿ, ಪ್ರತಿಯೊಬ್ಬರೂ ಸೇವೆಗೆ ಹಾಜರಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಯಾರೂ ಕೂಡ ಪ್ರತಿಭಟನೆಗೆ ಹೋಗಿಲ್ಲ. ಜಿಲ್ಲೆಯಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಎಲ್ಲ ಬಸ್ ಸೇವೆ ಕಾರ್ಯ ನಿರ್ವಹಿಸುತ್ತಿದೆ. ವಾರದ ರಜೆ ಹೊರತುಪಡಿಸಿ ಬೇರೆ ಯಾರೂ ರಜೆ ತೆಗೆದುಕೊಳ್ಳುವಂತಿಲ್ಲ ಎಂಬ ಆದೇಶದ ಮೇರೆಗೆ ಯಾರಿಗೂ ರಜೆ ನೀಡಿಲ್ಲ” ಎಂದು ಹೇಳಿದರು.





