ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಮಿತಿ’ಯ ಪದಾಧಿಕಾರಿಗಳು ಪಾಸ್ ವಿಥೌಟ್ ಹಿಂದಿ ಕಾನೂನು ತರಬೇಕು. ಇಲ್ಲದಿದ್ದರೆ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಡೆಸದಂತೆ ತಡೆಯಲಾಗುವುದು ಎಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಿಗೆ ಎಚ್ಚರಿಕೆಯ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ, “ಬಿಹಾರ ರಾಜ್ಯದಲ್ಲಿ ‘ಪಾಸ್ ವಿಥೌಟ್ ಇಂಗ್ಲಿಷ್’ (PWE) ಕಾನೂನು ಜಾರಿಯಲ್ಲಿರುವಂತೆ, ಕರ್ನಾಟಕದಲ್ಲೂ ಈ ಕೂಡಲೇ ‘ಪಾಸ್ ವಿಥೌಟ್ ಹಿಂದಿ'(PWH) ಕಾನೂನು ಜಾರಿಗೆ ಬರಬೇಕು. ಈ ಕುರಿತು ಮಂಡಳಿಯು ಒಂದು ವಾರದೊಳಗೆ ಲಿಖಿತ ಉತ್ತರ ನೀಡಬೇಕು” ಎಂದು ಗಡುವು ನೀಡಿದರು.
“ಒಂದು ವೇಳೆ ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದರೆ, ಬರುವ 2026ರ ಮಾರ್ಚ್ 30ರಂದು ನಡೆಯಲಿರುವ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಯನ್ನು ರಾಜ್ಯಾದ್ಯಂತ ತಡೆಯಲಾಗುವುದು. ಪರೀಕ್ಷಾ ಕೊಠಡಿಗಳಿಗೆ ನುಗ್ಗಿ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕುವ ಮೂಲಕ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ಕದಂಬ ಪಡೆಯ ಚೇತನ್ ಮಾತನಾಡಿ, “ಎರಡು ನುಡಿ ನೀತಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ವರ್ಷ ಕಳೆದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಪರೀಕ್ಷಾ ಸಮಯದಲ್ಲಿ ಉಂಟಾಗಬಹುದಾದ ಯಾವುದೇ ಅಹಿತಕರ ಘಟನೆಗಳಿಗೆ ನೇರವಾಗಿ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ: ನಾಳೆ ಬೆಂಗಳೂರು ಚಲೋ
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಉಳಿವಿಗೆ ಹಿಂದಿ ಹೇರಿಕೆ ಮಾರಕವಾಗಿದ್ದು, ಕನ್ನಡಿಗರ ಹಿತದೃಷ್ಟಿಯಿಂದ ಈ ಕೂಡಲೇ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬೇಕೆಂದು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಪ್ರಕಾಶ್ ಹೆಬ್ಬಳ್ಳಿ, ನಾಗೇಶ್ ಅರಳಕುಪ್ಪೆ, ಮಂಜು ಗಣಪತಿಪುರ, ರಘುನಂದನ್, ಸಚಿನ್ ಸೇರಿದಂತೆ ಹಲವು ಮುಖಂಡರು ಇದ್ದರು.





