ʼಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣʼ ಪರಿಕಲ್ಪನೆಯಡಿ ರೈತರನ್ನು ಉದ್ಯಮಿಗಳನ್ನಾಗಿಸುವ ಆಶಯದಡಿ ಕೃಷಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ʼಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ʼಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.06 ರಂದು ಚಾಲನೆ ನೀಡಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 104 ಸಾಧಕರಿಗೆ ಕೃಷಿ ಪ್ರಶಸ್ತಿ ಹಾಗೂ 18 ಸಾಧಕರಿಗೆ ಕೃಷಿ ಪಂಡಿತ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಅನೇಕ ಸಾವಯವ ಕೃಷಿಕರು ಮಳಿಗೆಗಳನ್ನು ಹಾಕಿದ್ದರು. ಕೃಷಿಕರನ್ನು ಉದ್ಯಮಿಗಳನ್ನಾಗಿ ಹಾಗೂ ರೈತರಿಂದ ನೇರವಾಗಿ ಮಾರಾಟ ಮಾಡುವ ಉದ್ದೇಶವೇ ಈ ಮೇಳದ ಪ್ರಮುಖ ಗುರಿಯಾಗಿದೆ. ಸುಮಾರು 250 ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿವೆ.
ತುಮಕೂರು ಜಿಲ್ಲಾ ಪ್ರಾದೇಶಿಕ ಸಹಕಾರಿ ಸಾವಯವ ಕೃಷಿಕರ ಸಂಘದ ಫೆಡರೇಶನ್, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಾಂತಿಯ ಸಹಕಾರ ಸಾವಯವ ಕೃಷಿ ಸಂಘಗಳ ಒಕ್ಕೂಟ, ವಿಜಯಪುರ ಜಿಲ್ಲಾ ಪ್ರಾದೇಶಿಕ ಸಹಕಾರಿ ಸಾವಯವ ಕೃಷಿಕರ ಸಂಘದ ಫೆಡರೇಶನ್, ಹುನಗುಂದ ತೋಟಗಾರಿಕಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ಹೀಗೆ 50 ಕ್ಕೂ ಹೆಚ್ಚು ಸರ್ಕಾರಿ ಮಳಿಗೆಗಳನ್ನು ಮೇಳದಲ್ಲಿ ಹಾಕಲಾಗಿತ್ತು.

ಅದೇ ರೀತಿಯಲ್ಲಿ ಸರ್ಕಾರೇತರ ಉದ್ಯಮಿಗಳಾದ ಮೈಸೂರಿನ ಸಹಜ ಆರ್ಗ್ಯಾನಿಕ್ಸ್, ತುಮಕೂರಿನ ಕಲ್ಪ ಆಗ್ರೋ ಉತ್ಪನ್ನಗಳು, ಮಂಡ್ಯದ ಸಂಪೂರ್ಣ ಸಾವಯವ ಕೃಷಿಕರ ಸಂಘ, ಬೆಂಗಳೂರಿನ ನ್ಯೂಟ್ರಿಯೋ ಕಂಪನಿ, ಹಾವೇರಿ ಜಿಲ್ಲೆಯ ಕುರಿ ಉಣ್ಣೆಯ ಉತ್ಪಾದನ ಕೇಂದ್ರ ಸೇರಿದಂತೆ 200ಕ್ಕೂ ಹೆಚ್ಚು ಮಳಿಗೆಗಳನ್ನು ನಿಯೋಜನೆ ಮಾಡಲಾಗಿತ್ತು.
50ಕ್ಕೂ ಹೆಚ್ಚು ದೇಶಿ ತಳಿಗಳನ್ನು ಸಂರಕ್ಷಣೆ ಮಾಡಿದ್ದಕ್ಕಾಗಿ 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕಿನಿಂದ ʼಪಾಪಮ್ಮʼ ಬಂದಿದ್ದರು. ʼಈದಿನʼ ಜೊತೆ ಮಾತನಾಡಿದ ಅವರು “ಅವರೆ ಬೀಜ, ತೊಗರಿ ಬೀಜ, ಪಡವಲಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಹೀರೆಕಾಯಿ, ಕಡ್ಡಿರಾಗಿ, ಮುದ್ದುರಾಗಿ, ಬಿಳಿ ನವಣೆ, ಹಾಲುಸಾಮೆ, ಕೆಂಪುರಾಗಿ, ಗಿಡ್ಡರಾಗಿ, ಕರಿರಾಗಿ, ನಾಟಿ ಹಾರಕ ಸೇರಿದಂತೆ ಅನೇಕ ದೇಶಿ ತಳಿಗಳನ್ನು ಸಂರಕ್ಷಣೆ ಮಾಡುತ್ತ ಬಂದಿದ್ದೇವೆ. ಇವೆಲ್ಲವನ್ನು ಸಾವಯವ ಕೃಷಿಯ ಮೂಲಕವೇ ಉಳಿಸಿಕೊಂಡಿದ್ದೇವೆ. ನಮ್ಮ ದೇಶಿ ತಳಿಗಳು ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಮೇಳದಲ್ಲಿ ಮಳಿಗೆಯನ್ನು ಹಾಕಿದ್ದ ಬೆಟ್ಟಸ್ವಾಮಿ ʼಈದಿನʼ ಜೊತೆ ಮಾತನಾಡಿ “ನಮ್ಮ ಸಂಪೂರ್ಣ ಸಾವಯವ ಕೃಷಿಕರ ಸಂಘವಿದೆ. ಅದರಲ್ಲಿ 236 ರೈತರಿದ್ದೀವಿ. ನಾವು ಬೆಳೆದಿರುವಂತ ಪದಾರ್ಥಗಳನ್ನು ನೇರವಾಗಿ ಮಾರುಕಟ್ಟೆ ಮಾಡಲು ಮೇಳಕ್ಕೆ ಬಂದಿದ್ದೇವೆ. ನಮ್ಮ ಸಂಘದಿಂದ ಸಾವಯವ ಕೃಷಿಯ ಬಗ್ಗೆ ತರಬೇತಿ ಸಹ ನೀಡುತ್ತೇವೆ. ನಮ್ಮ ಭೂಮಿ ಉಳಿದರೆ ನಮ್ಮ ಮುಂದಿನ ಬದುಕು ಉಳಿಯುತ್ತದೆ. ಹೊಸದಾಗಿ ಸಾವಯವ ಕೃಷಿ ಮಾಡಲು ಬಯಸುವ ರೈತರು ನಮಗೆ ಸಂಪರ್ಕ ಮಾಡಬಹುದು” ಎಂದರು. ಅವರ ಮೊಬೈಲ್ ಸಂಖ್ಯೆ – 9844608835
ಫೆ 06 ರಿಂದ 08 ರ ತನಕ ನಡೆಯುವ ಮೇಳದಲ್ಲಿ ಸಾವಿರಾರು ರೈತರು, ಕೃಷಿ ತಜ್ಞರು, ಉದ್ಯಮಿಗಳು, ಕೃಷಿ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ.





