ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ ಹೊಸದಾಗಿ ರಚನೆಯಾಗಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶಿ ಶುಕ್ರವಾರ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಎಲ್ಲ ಚುನಾವಣೆಗಳಿಗೂ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಮತ್ತು ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ (SEC) ವಹಿಸಲು ರಾಜ್ಯ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಸಂಗ್ರೇಶಿ, “ಐದು ಜಿಬಿಎ ಪಾಲಿಕೆಗಳ ಚುನಾವಣೆಗೆ ಎಸ್ಇಸಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದು, ಬ್ಯಾಲೆಟ್ ಪೇಪರ್ಗಳನ್ನು ಬಳಸಲಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.
2015ರಲ್ಲಿ ಕೊನೆಯ ಬಾರಿಗೆ ನಡೆದಿದ್ದ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಹಲವು ವರ್ಷಗಳಿಂದ ವಿಳಂಬವಾಗಿದೆ. ರದ್ದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಚುನಾವಣೆ 2020ರಲ್ಲಿ ನಡೆಯಬೇಕಿತ್ತು.
ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ನವೆಂಬರ್ 1ರೊಳಗೆ ಕ್ಷೇತ್ರಗಳ ಮರುವಿಂಗಡಣೆ ಮತ್ತು ನವೆಂಬರ್ 30ರೊಳಗೆ ವಾರ್ಡ್-ವಾರು ಮೀಸಲಾತಿ ಪಟ್ಟಿ ಪ್ರಕಟಿಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಸಂಗ್ರೇಶಿ ಮಾಹಿತಿ ನೀಡಿದರು.
ಇದಲ್ಲದೆ, 2021ರ ಮೇ-ಜೂನ್ನಲ್ಲಿ ನಡೆಯಬೇಕಿದ್ದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಸಹ ಬಾಕಿ ಉಳಿದಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಬ್ಯಾಲೆಟ್ ಪೇಪರ್ ಬಳಸಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಲು ಎಸ್ಇಸಿ ಸಿದ್ಧವಾಗಿದೆ ಎಂದು ಸಂಗ್ರೇಶಿ ಒತ್ತಿ ಹೇಳಿದರು. ಈ ವಿಷಯವಾಗಿ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆಯುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಎಸ್ಇಸಿ ಒಂದು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗದಷ್ಟೇ ಅಧಿಕಾರವನ್ನು ಹೊಂದಿದೆ” ಎಂದು ಅವರು ಹೇಳಿದರು.
“ನಮ್ಮಲ್ಲಿರುವ ಇವಿಎಂಗಳು 15 ವರ್ಷಗಳಷ್ಟು ಹಳೆಯದಾಗಿವೆ. ಅವುಗಳನ್ನು ವಿಲೇವಾರಿ ಮಾಡಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಈ ಪ್ರಕ್ರಿಯೆಯ ಬಗ್ಗೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಜೊತೆ ಚರ್ಚಿಸಲು ನಾವು ಆಂತರಿಕ ತಜ್ಞರ ಸಮಿತಿಯನ್ನು ರಚಿಸುತ್ತಿದ್ದೇವೆ” ಎಂದು ಸಂಗ್ರೇಶಿ ತಿಳಿಸಿದರು.
ಬ್ಯಾಲೆಟ್ ಪೇಪರ್ಗೆ ಬದಲಾಯಿಸುವುದು ಸವಾಲಾಗಬಾರದು ಎಂದು ಸಂಗ್ರೇಶಿ ಅಭಿಪ್ರಾಯಪಟ್ಟರು. “ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಇನ್ನೂ ಬ್ಯಾಲೆಟ್ ಪೇಪರ್ಗಳನ್ನೇ ಬಳಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮತದಾರರಿಗೆ ಬ್ಯಾಲೆಟ್ ಪೇಪರ್ಗಳ ಬಗ್ಗೆ ಈಗಾಗಲೇ ಅರಿವಿದೆ. ಬ್ಯಾಲೆಟ್ ಪೇಪರ್ಗೆ ಬದಲಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಅಸಾಂವಿಧಾನಿಕವಲ್ಲ” ಎಂದು ಅವರು ಹೇಳಿದರು.
ಮತದಾರರ ಪಟ್ಟಿಯನ್ನು “ಪಾರದರ್ಶಕ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ” ಸಿದ್ಧಪಡಿಸಲಾಗುವುದು ಎಂದು ಸಂಗ್ರೇಶಿ ಭರವಸೆ ನೀಡಿದರು.





