“ಕಾವೇರಿ ಒಪ್ಪಂದದಲ್ಲಿ ಅನ್ಯಾಯವಾಗಿದೆ, ನ್ಯಾಯ ಮಂಡಳಿ ಸದಸ್ಯರ ಆಯ್ಕೆಯಲ್ಲೂ ಅನ್ಯಾಯವಾಗಿದೆ, ಕೇಂದ್ರ ಸರ್ಕಾರವೂ ನ್ಯಾಯ ನೀಡುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.
ಭಾನುವಾರ ನಗರದ ಗಾಂಧಿ ಭವನದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಅಭಿರುಚಿ ಪ್ರಕಾಶನ ಹೊರ ತಂದಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರ ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ ಮಾಡಿ ವಿ. ಗೋಪಾಲಗೌಡ ಅವರು ಮಾತನಾಡಿದರು.
“ಜನಸಂಖ್ಯೆ ಏರಿಕೆ, ಮಳೆ ಪ್ರಮಾಣ, ಹವಾಮಾನ ಬದಲಾವಣೆ, ಕೃಷಿಗೆ ಅಗತ್ಯವಿರುವ ನೀರಿನ ಪ್ರಮಾಣ, ರಾಜ್ಯದ ಆರ್ಥಿಕ ಸ್ಥಿತಿ ಹೀಗೆ ಹಲವಾರು ವಿಚಾರಗಳಲ್ಲಿ ವಾದವನ್ನು ಮಂಡಿಸಲಾಗಿಲ್ಲ. ಕೇಂದ್ರ ಸರ್ಕಾರವೂ ನಮ್ಮ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ” ಎಂದು ಆರೋಪಿಸಿದರು.
“ಕಾವೇರಿ ನ್ಯಾಯಮಂಡಳಿ ತೀರ್ಪಿನ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡ ಬಳಿಕ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಕಾನೂನು ಸಚಿವರು, ಕಾನೂನು ಕಾರ್ಯದರ್ಶಿಗಳು ನನ್ನನ್ನು ಭೇಟಿಯಾಗಲು ಬಂದಿದ್ದರು. ನಾನು ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ರಕ್ಷಣೆಯ ಪ್ರಯತ್ನ ಮಾಡುವುದಾಗಿ, ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದೆ. ಕಾವೇರಿ ವಿವಾದದ ವಿಷಯವನ್ನು ಸರಿಯಾಗಿ ಅರ್ಥೈಸಿಕೊಂಡು ಕೂಲಂಕಷವಾಗಿ ಪರಿಶೀಲಿಸುವಂತೆ ನಾನು ನಮ್ಮ ನ್ಯಾಯಮೂರ್ತಿಗಳಿಗೆ ಸಲಹೆ ನೀಡಿದೆ” ಎಂದು ಸ್ಮರಿಸಿದರು.
“ನಾನು ನನ್ನ ಜೀವಮಾನದಲ್ಲಿ ಯಾವತ್ತೂ ಕೂಡಾ ಲಾಭದ ಉದ್ದೇಶವನ್ನು ಇಟ್ಟುಕೊಂಡು ತೀರ್ಪು ನೀಡಿಲ್ಲ. ನಾನು ಸದಾ ಕಾಲ ರೈತರು, ಬಡವರು, ಶ್ರಮಿಕರ ಪರವಾಗಿ ನಿಂತಿದ್ದೇನೆ. ಆದರೆ ಇಂದು ಸ್ಥಿತಿ ಬೇರೆಯೇ ಇದೆ. ನ್ಯಾಯಮೂರ್ತಿಗಳು ಸರ್ಕಾರದ ಪರವಾಗಿ ತೀರ್ಪು ನೀಡಿದ ಬಳಿಕ ಲೋಕಾಯುಕ್ತರು, ರಾಜ್ಯಪಾಲರು ಆಗುತ್ತಿದ್ದಾರೆ. ಇದು ದೇಶದ ಜನರಿಗೆ ತಿಳಿದಿದೆ” ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
“ನಾವೀಗ ಇಡ್ಲಿ ತಿಂದರೂ ಕೂಡಾ ಜಿಎಸ್ಟಿ ಪಾವತಿ ಮಾಡಬೇಕಾದಂತಹ ಸ್ಥಿತಿಯಿದೆ. ರಾಜ್ಯದಲ್ಲಿ ಬರಗಾಲ ಬಂದಾಗ ಕೇಂದ್ರ ಸರ್ಕಾರವು ಸಕಾಲಕ್ಕೆ ನಮಗೆ ಹಣ ನೀಡಿಲ್ಲ. ಆದರೆ ಭಾರತ ಅಭಿವೃದ್ಧಿಯಾಗಿದೆ ಎಂದು ಬೇರೆ ದೇಶಗಳಲ್ಲಿ ಹೋಗಿ ಕೊಚ್ಚಿಕೊಳ್ಳಲಾಗುತ್ತಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲೇ ಮಾತನಾಡಿದ ಹಿರಿಯ ಪತ್ರಕರ್ತನ ದಿನೇಶ್ ಅಮಿನ್ಮಟ್ಟು, “ರಾಜಕಾರಣಿಗಳಿಗೆ ನೆಲ, ಜಲ, ಭಾಷೆಯ ಸಮಸ್ಯೆ ಬಗೆಹರಿಸುವ ಹೊರೆ ನೀಡಿರುವುದರಿಂದ ಕಾವೇರಿ ವಿವಾದ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಕಾವೇರಿ ವಿವಾದದಲ್ಲಿ ಹೋರಾಟಗಾರರು, ಕಲಾವಿದರು, ಸಾಹಿತಿಗಳು, ಚಿಂತಕರು ಸೇರಿ ಹೋರಾಡಬೇಕಿದೆ, ಬರೀ ಆಯಾ ಕ್ಷೇತ್ರದ ಹೋರಾಟಗಾರರಿಗೆ ಇದನ್ನು ಮೀಸಲಿಡಬಾರದು” ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಬೋರಯ್ಯ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಮ್, ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್, ಪ್ರಕಾಶಕ ಅಭಿರುಚಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.





