ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ನಡೆಯಲಿದ್ದು, ಕೆಎಸ್ಆರ್ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಜನವರಿ 29ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಸರ್ಕಾರದೊಂದಿಗೆ ಪದೇ ಪದೆ ಮಾತುಕತೆ ನಡೆಸಿದರೂ ಯಾವುದೇ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ.
“ಈಗಾಗಲೇ ಬೆಂಗಳೂರು ಚಲೋ ಚಳವಳಿ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದೆ. ಕಳೆದ 38 ತಿಂಗಳಿನಿಂದ ವೇತನ ಹಿಂಬಾಕಿ ಬಂದಿಲ್ಲ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ” ಎಂದು ಕ್ರಿಯಾಸಮಿತಿ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಸಾರಿಗೆ ನೌಕರ ಸುರೇಶ್ ಎ ಕೆ ಅವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸಾರಿಗೆ ನೌಕರರಿಗೆ ಕಳೆದ 38 ತಿಂಗಳಿನಿಂದ ಬಾಕಿ ವೇತನ ಬಂದಿಲ್ಲ. ಇದಲ್ಲದೆ, 2024ರ ಜನವರಿ 1ರಿಂದ ಬರಬೇಕಿದ್ದ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬಂದಿಲ್ಲ. ರಾಜ್ಯಾದ್ಯಂತ ದೈನಂದಿನ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಖಚಿತಪಡಿಸಿಕೊಳ್ಳುವ ನೌಕರರಿಗೆ ವೇತನ ಪರಿಷ್ಕರಣೆ ವಿಳಂಬವಾಗುತ್ತಿರುವುದರಿಂದ ಆರ್ಥಿಕ ಒತ್ತಡ ಹೆಚ್ಚಾಗುತ್ತಿದೆ. ಕುಟುಂಬ ನಿರ್ವಣೆ ಮಾಡಲು ಸಾಧ್ಯವಾಗದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿಎ. ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾಗಿ ಶಾಲೆ ಕಾಲೇಜಿಗೆ ಶುಲ್ಕ ಪಾವತಿಸಲಾಗುತ್ತಿಲ್ಲ. ತುಂಬಾ ಹೀನಾಯ ಸ್ಥಿತಿಯಲ್ಲಿ ಬದುಕು ದೂಡುವಂತ ದುಂಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನವರಿ 29ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ಸಂಹಿತೆಗಳು ಹಕ್ಕುಗಳ ಮೇಲಿನ ದಾಳಿ: ಎಐಯುಟಿಯುಸಿ ಎನ್.ಎಸ್. ವೀರೇಶ್
ಈ ಪ್ರತಿಭಟನೆ ಶಾಂತಿಯುತವಾಗಿರುತ್ತದೆಂದು ಒಕ್ಕೂಟಗಳು ತಿಳಿಸಿದ್ದು, ಸಮಿತಿ ಸದಸ್ಯರಾದ ಎಚ್ ವಿ ಅನಂತಸುಬ್ಬ ರಾವ್, ಬಿ ಜಯದೇವ ಅರಸು, ಎಚ್ ಡಿ ರೇವಪ್ಪ, ಜಗದೀಶ್ ಎಚ್ ಆರ್ ಮತ್ತು ರಾಜೇಂದ್ರ ಗೌಡ ಜಿ ಕೆ ಅವರು, ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.





