ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಭಾರತಿ ಓಂಪ್ರಕಾಶ ರೊಟ್ಟೆ ಅವರನ್ನು ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿ, ಶಿಕ್ಷಕರು ಸನ್ಮಾನಿಸಿ ಬೀಳ್ಕೊಟ್ಟರು.
ಶಿಕ್ಷಕಿ ಭಾರತಿ ರೊಟ್ಟೆ ಅವರು ಮೂಲತಃ ಕಮಲನಗರ ತಾಲೂಕಿನ ಮದನೂರು ಗ್ರಾಮದವರು. 1992ರಲ್ಲಿ ಭಾಲ್ಕಿ ತಾಲೂಕಿನ ಬೀರಿ(ಬಿ) ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ವೃತ್ತಿ ಆರಂಭಿಸಿದರು. ಬಳಿಕ ಭಾಲ್ಕಿ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಸುಮಾರು 15 ವರ್ಷ ಸೇರಿ ಇತರೆ ಕಡೆ ಸೇವೆ ಸಲ್ಲಿಸಿ ಬಡ್ತಿ ಮೇಲೆ ಬಾಳೂರು ಶಾಲೆಗೆ 2021ರಲ್ಲಿ ಸೇವೆಗೆ ಸೇರಿ ಈಗ ನಿವೃತ್ತಿಯಾದರು.
ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ವಿಶ್ವಕ್ರಾಂತಿ ದಿವ್ಯಪೀಠ ವತಿಯಿಂದ ಆಯೋಜಿಸಿದ ಶಿಕ್ಷಕಿ ಭಾರತಿ ರೊಟ್ಟೆ ಅವರ ವಯೋನಿವೃತ್ತಿ ಹಾಗೂ ಸಂವಿಧಾನ ಅಂಗೀಕಾರ ವರ್ಷಾಚರಣೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಜರುಗಿತು.
ನಿವೃತ್ತ ಉಪನ್ಯಾಸಕ ಚಂದ್ರಶೇಖರ ಬಿರಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ʼಭಾರತದ ಸಂವಿಧಾನ ಪೀಠಿಕೆಯು ಸಂವಿಧಾನದ ಆತ್ಮ ಮತ್ತು ದಿಕ್ಸೂಚಿಯಾಗಿದೆ. ಇದು ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಗುರಿಗಳಾದ ಸಾರ್ವಭೌಮತೆ, ಸಮಾಜವಾದ, ಜಾತ್ಯತೀತತೆ, ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ವಿವರಿಸುತ್ತದೆ. ನಾವೆಲ್ಲರೂ ಸಂವಿಧಾನ ಪೀಠಿಕೆಯನ್ನು ಅರ್ಥೈಸಿಕೊಂಡು ಬದುಕುವುದು ಅಗತ್ಯವಿದೆʼ ಎಂದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಾತನಾಡಿ, ʼಉತ್ತಮ ಸಮಾಜ ರೂಪಿಸುವುದಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವವಾದುದು. ಶಿಕ್ಷಕಿ ಭಾರತಿ ರೊಟ್ಟೆ ಅವರು ತಮ್ಮ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಸೇವೆಗೈದಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಕರು ಸದಾ ಶ್ರಮಿಸಬೇಕುʼ ಎಂದು ಹೇಳಿದರು.
ʼಜ್ಞಾನ ಸಂಪಾದನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ, ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದು ಅಷ್ಟೇ ಮುಖ್ಯ. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ. ಯಾವುದೇ ಕೆಲಸ ಮಾಡುವುದಕ್ಕೂ ಏಕಾಗ್ರತೆ ಅತೀ ಮುಖ್ಯ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಣ್ಣ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯʼ ಎಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕ, ಗ್ರಾಮ ಮುಖಂಡರಾದ ಡಾ.ಕಾಶಿನಾಥ ಚೆಲವಾ ಮಾತನಾಡಿ, ʼಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿ ಎಲ್ಲ ರಂಗದಲ್ಲಿ ದೇಶದ ಪ್ರಗತಿ ಕಾಣಬೇಕಾದರೆ ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕಿದೆ. ಯಾವುದೇ ಜಾತಿ, ಮತ, ಭೇದವಿಲ್ಲದ ಸಮಾನತೆ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಯುವ ಜನಾಂಗ ಯೋಚಿಸಬೇಕು. ವಿದ್ಯಾರ್ಥಿಗಳು ಅನೇಕ ಮಹಾತ್ಮರ ತತ್ವಾದರ್ಶಗಳು ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕುʼ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ದತ್ತಾತ್ರಿ ಬಿರಾದರ್ ಮಾತನಾಡಿ, ʼಶಿಕ್ಷಕಿ ಭಾರತಿ ರೊಟ್ಟೆ ಅವರು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಜೊತೆಗೆ ಸಾಹಿತ್ಯ, ಸಂಸ್ಕೃತಿ ಮನೋಭಾವ ಬೆಳೆಸಿ ಮಕ್ಕಳ ಅಚ್ಚುಮೆಚ್ಚಿನ ಗುರುಗಳಾದವರು. ಅವರೊಂದಿಗೆ ಸೇವೆ ಸಲ್ಲಿಸಿದ ನನಗೂ ಸಂತೃಪ್ತಿಇದೆ. ಇಷ್ಟು ವರ್ಷಗಳ ಕಾಲ ನಿಷ್ಠೆಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆʼ ಎಂದರು.
ದಿಶಾ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಕುಮಾರ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪತ್ರಕರ್ತ ಬಾಲಾಜಿ ಕುಂಬಾರ, ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದರ್ ಮತ್ತಿತರರು ಮಾತನಾಡಿದರು.
ಇದನ್ನೂ ಓದಿ : ಬೀದರ್ | 29 ಮಕ್ಕಳು ಶಾಲೆಯಿಂದ ಹೊರಗೆ, ವರದಿಗೆ ಸೂಚನೆ
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಾಬುರಾವ್, ವೆಂಕಟರಾವ್, ನಾಗನಾಥ ಘನ್ನಾಳೆ, ಸುವರ್ಣಾ, ಸಂಜು, ನೈನಾ, ಜ್ಯೋತಿ ಸೇರಿದಂತೆ ಪ್ರಮುಖರಾದ ಶರದ್ ಗೌಡ, ನವೀನಕುಮಾರ್, ನಾರಾಯಣ ಚೆಲವಾ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದರು.





