ಉತ್ತರ ಕರ್ನಾಟಕದ 14 ಜಿಲ್ಲೆಯ ಸಾರ್ವಜನಿಕರು ತಮ್ಮ ವಿವಿಧ ಇಲಾಖೆಯ ಕೆಲಸಗಳನ್ನು ಮಾಡಿಸಿಕೊಳ್ಳಲು ಬೆಂಗಳೂರಿಗೆ ಹೋಗಿ ಬರಬೇಕಾದರೆ ಊಟ, ವಸತಿ, ವಾಹನಕ್ಕೆ ಸಾಕಷ್ಟು ಪ್ರಮಾಣದ ಹಣ ಹಾಗೂ ಸಮಯ ವ್ಯರ್ಥವಾಗುತ್ತಿತ್ತು. ಇದನ್ನು ತಪ್ಪಿಸಲು ಈಗಾಗಲೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿ ಪ್ರತಿ ವರ್ಷ ಚಳಿಗಾಲ ಅಧಿವೇಶನ ನಡೆಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗಾವಿಯನ್ನು 2ನೇ ರಾಜಧಾನಿ ಸ್ಥಾನಮಾನ ನೀಡಬೇಕೆಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ರರ ಪ್ರಾಂತ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೀಳಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಿದರೆ ಜನರ ಹಣ ಮತ್ತು ಸಮಯ ಉಳಿಯುತ್ತದೆ. ಅದಕ್ಕಾಗಿ ಸುವರ್ಣ ಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಇಲಾಖೆಯ ಆಡಳಿತಾತ್ಮಕ ಕಚೇರಿಗಳನ್ನು ತೆರೆದು ಸಚಿವ ಸಂಪುಟ ಬೆಳಗಾವಿಯಲ್ಲಿ 3 ದಿನ, ಬೆಂಗಳೂರಿನಲ್ಲಿ 3 ದಿನ ಕಾರ್ಯನಿರ್ವಹಿಸುವಂತಾಗಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
“ಬೆಳಗಾವಿಯ ಅಧಿವೇಶನ ನೆಪಮಾತ್ರಕ್ಕೆ ನಡೆಯುತ್ತದೆ. ಪ್ರತಿವರ್ಷ ಜನರ ತೆರಿಗೆ ಹಣ ಪೋಲಾಗುತ್ತದೆ. ಉತ್ತರ ಕರ್ನಾಟಕದ ಜನರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಧರಣಿ ನಡೆಸಬೇಕೆಂಬುದಕ್ಕೂ ಪೊಲೀಸ್ ಇಲಾಖೆ ಸಮಯ ನಿಗದಿ ಪಡಿಸಿದೆ. ಆ ಸಮಯದವರೆಗೆ ಮಾತ್ರ ಧರಣಿ ನಡೆಸುವಂತಾಗಿದೆ. ಬೇಡಿಕೆಗೆ ಸಂಭಂದಿಸಿದ ಇಲಾಖೆಯ ಸಚಿವರನ್ನು ಕಳುಹಿಸದೆ ಬೇರೆ ಯಾವುದೋ ಇಲಾಖೆ ಸಚಿವರನ್ನು ಕಳುಹಿಸಿ ಮನವಿ ಕೊಡುವಂತೆ ಪೊಲೀಸ್ ಇಲಾಖೆಯವರು ಒತ್ತಾಯಿಸಿತ್ತಾರೆ. ʼನಮ್ಮ ಬೇಡಿಕೆಗೆ ಸಂಬಂಧಪಟ್ಟ ಸಚಿವರು ಬಂದರೆ ಮಾತ್ರ ಮನವಿ ಕೊಡುತ್ತೇವೆ. ಇಲ್ಲದಿದ್ದರೆ ನಮ್ಮ ಧರಣಿ ನಿರಂತರ ಇರುತ್ತದೆʼ ಎಂದು ಭಾರತೀಯ ಕಿಸಾನ್ ಸಂಘದ ಸದಸ್ಯರು ಪೊಲೀಸರಿಗೆ ತಿಳಿಸಿದರೂ ಅವರು 135 ಜನರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಿ ಬ್ರಿಟಿಷ್ರಂತೆ ವರ್ತಿಸಿ ರೈತರಿಗೆ ಅವಮಾನ ಮಾಡಿರುವುದು ಖಂಡನೀಯ” ಎಂದು ಆಕ್ರೋಶ ಹೊರಹಾಕಿದರು.
“ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಅಣೆಕಟ್ಟೆಯನ್ನು 524ಕ್ಕೆ ಏರಿಸಿ ಶ್ರೀಘ ಅನುಷ್ಠಾನ ತರಲು ಪ್ರತಿ ವರ್ಷ 40 ಸಾವಿರ ಕೋಟಿ ರೂಪಾಯಿ ಹಣ ಮೀಸಲಿಡಬೇಕು. ಆಲಮಟ್ಟಿ ಯೋಜನೆಯ ಹಿನ್ನೀರಿನಿಂದ ರೈತರ ಜಮೀನುಗಳು ಸವಳು ಜವಳು ಆಗಿದ್ದು, ಭೂಮಿ ಬರಡಾಗಿದೆ. ಸರ್ಕಾರ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮನರೇಗಾ ಯೋಜನೆಯಡಿ ಸವಳು ಜವಳು ನಿಯಂತ್ರಣಕ್ಕೆ ತರಬೇಕು. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಬೆಳೆನಷ್ಟ ಪರಿಹಾರ ವಿತರಣೆಯನ್ನು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮಾರ್ಗ ಸೂಚಿ ಉಲ್ಲಂಘನೆ ಮಾಡಿ ಸರ್ಕಾರ ತನ್ನ ಮನಸ್ಸಿಗೆ ಬಂದಷ್ಟು ಹೆಕ್ಟೇರ್ಗೆ 2000/3000 ರೂಪಾಯಿಯಂತೆ ಬೇಕಾಬಿಟ್ಟಿ ಪರಿಹಾರ ನೀಡಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖರೀದಿ ಕೇಂದ್ರ ತೆರೆದು ಬೆಳೆ ಪರಿಹಾರ ಬಿಡುಗಡೆಗೆ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ
“3 ತಿಂಗಳಾದರೂ ಬೆಳೆವಿಮೆ ವಿತರಿಸದೇ ಇರುವುದರಿಂದ ರೈತರಿಗೆ ತೊಂದರೆಯಾಗಿದೆ, ಶೀಘ್ರವೇ ಕ್ಲೇಮ್ ವಿತರಿಸಬೇಕು. ಮರು ಪರಿಶೀಲನೆ ಮಾಡಿ ನ್ಯಾಯಯುತ ಪರಿಹಾರ ವಿತರಿಸಬೇಕು. ಮುಳುಗಡೆ ಸಂತ್ರಸ್ತರ ಮಕ್ಕಳಿಗೆ ಎ ಬಿ ಗ್ರೇಡ್ ಹುದ್ದೆಗಳಿಗೆ ನೇಮಕಾತಿಯಲ್ಲಿ ಪ್ರಾಶಸ್ತ್ಯ ಕೊಡಬೇಕು. ಪಿಜಿಯವಗೆ ಶಿಕ್ಷಣ ಕಲಿಯಲು ಅವಕಾಶ ನೀಡಬೇಕು. ಸಂತ್ರಸ್ತರು ನೌಕರಾಗಿದ್ದರೆ ಅವರಿಗೆ ಬಡ್ತಿ ಸೌಲಭ್ಯ ಒದಗಿಸಬೇಕು, ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಬೇಕು” ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉ.ಪ್ರಾ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಮಂತ್ರಿ ಇದ್ದರು.





