ಭಟ್ಕಳ: ಮದುವೆಗೆಂದು ವಿದೇಶದಿಂದ ಊರಿಗೆ ಬಂದು, ಚಿನ್ನ ಖರೀದಿಸಲು ಹೋದವನು ಮಸೀದಿಯಿಂದ ನಾಪತ್ತೆಯಾದ ರೋಚಕ ಪ್ರಕರಣವೊಂದನ್ನು ಭಟ್ಕಳ ಪೊಲೀಸರು ಭೇದಿಸಿದ್ದಾರೆ.
ಕಳೆದ ಮೂರೂವರೆ ತಿಂಗಳಿನಿಂದ ಪೊಲೀಸರಿಗೆ ಸವಾಲಾಗಿದ್ದ ಕುಮಟಾ ಮೂಲದ ಯುವಕ ಜಾಕೀರ್ ಬೇಗ (33) ಎಂಬುವವರು ತುಮಕೂರಿನ ಫ್ಯಾಕ್ಟರಿಯೊಂದರಲ್ಲಿ ಪತ್ತೆಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಾಕೀರ್ ಬೇಗ ಅವರಿಗೆ ಕೆಲವೇ ದಿನಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 18, 2025 ರಂದು ತಮ್ಮ ಅತ್ತಿಗೆ ಹಾಗೂ ಸಂಬಂಧಿಕರೊಂದಿಗೆ ಮದುವೆಗೆ ಚಿನ್ನಾಭರಣ ಖರೀದಿಸಲು ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದರು.
ಮಧ್ಯಾಹ್ನ 1:15ರ ಸುಮಾರಿಗೆ ಇಲ್ಲಿನ ನೂರಪಳ್ಳಿ ಮಸೀದಿಗೆ ನಮಾಜ್ಗೆಂದು ಹೋದವರು ಮರಳಿ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಭಟ್ಕಳ ಶಹರ ಪೊಲೀಸರು ಪ್ರಕರಣದ ತನಿಖೆಯನ್ನು ತಾಂತ್ರಿಕ ಹಂತದಲ್ಲಿ ತೀವ್ರಗೊಳಿಸಿದಾಗ, ಜಾಕೀರ್ ತನ್ನ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸುಳಿವನ್ನೇ ಬೆನ್ನತ್ತಿದ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಹಾಗೂ ಪಿ.ಎಸ್.ಐ ನವೀನ ನಾಯ್ಕ ನೇತೃತ್ವದ ವಿಶೇಷ ತಂಡಕ್ಕೆ ಜಾಕೀರ್ ತುಮಕೂರಿನಲ್ಲಿರುವ ಮಾಹಿತಿ ಲಭ್ಯವಾಯಿತು.
ಈ ಸುದ್ದಿ ಓದಿದ್ದೀರಾ ? ಕಾರವಾರ | ಸರಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತೆಯ ಆತ್ಮಹತ್ಯೆ ಯತ್ನ; ಆಸ್ಪತ್ರೆಗೆ ದಾಖಲು
ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ, ವಿದೇಶದಲ್ಲಿ ಕೈತುಂಬಾ ಸಂಪಾದಿಸುತ್ತಿದ್ದ ಯುವಕ ಮದುವೆ ಸಂಭ್ರಮವನ್ನು ಬಿಟ್ಟು ಅಲ್ಲಿನ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿರುವುದು ಪತ್ತೆಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ನಾಯ್ಕ್ ಮತ್ತು ಸಿಬ್ಬಂದಿಗಳಾದ ರವಿ ಪಟಗಾರ, ದೇವು ನಾಯ್ಕ್, ಕಾಶಿನಾಥ ಹಾಗೂ ಟೆಕ್ನಿಕಲ್ ಸೆಲ್ನ ಉದಯ್ ಮತ್ತು ಬಬನ್ ಕದಂ ಪಾಲ್ಗೊಂಡಿದ್ದರು.
ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.





