ಭಟ್ಕಳ: ಮುಂಬೈಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನ ಸಾಗಾಟವಾಗುತ್ತಿರುವುದು ಪತ್ತೆಯಾಗಿದ್ದು, ಭಟ್ಕಳ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಳವಾರ ಸಂಜೆ ಭಟ್ಕಳ ನಗರ ಪೊಲೀಸ್ ಠಾಣೆಯ ವಲಯ ನಿರೀಕ್ಷಕ ದಿವಾಕರ್ ಅವರ ನೇತೃತ್ವದ ತಂಡ ಶಮ್ಸುದ್ದೀನ್ ವೃತ್ತದ ಬಳಿ ತಪಾಸಣೆ ನಡೆಸಿ, ಮುಂಬೈ ಮೂಲದ ಖಾಸಗಿ ಬಸ್ವೊಂದನ್ನು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಸ್ನಲ್ಲಿ ಸಾಗಿಸುತ್ತಿದ್ದ ನೀಲಿ ಬಣ್ಣದ ಸೂಟ್ಕೇಸ ಕುರಿತು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಅದನ್ನು ತೆರೆದಿದ್ದು. ಪರಿಶೀಲನೆಯ ವೇಳೆ ಚೀಲದೊಳಗೆ ₹49,98,400 ನಗದು, 32 ಚಿನ್ನದ ಬಳೆಗಳು (ಒಟ್ಟು 401.04 ಗ್ರಾಂ), ಒಂದು ಮೊಬೈಲ್ ಫೋನ್ ಮತ್ತು ಪೆನ್ಡ್ರೈವ್ ಪತ್ತೆಯಾಗಿದ್ದವು. ಹಣ ಮತ್ತು ಚಿನ್ನಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ತನಿಖೆಯಲ್ಲಿ ಈ ಸೂಟ್ಕೇಸ ಮುಂಬೈಯಿಂದ ಕಳುಹಿಸಲ್ಪಟ್ಟಿದ್ದು, ಭಟ್ಕಳದಲ್ಲಿ “ಇರ್ಫಾನ್” ಎಂಬಾತ ಅದನ್ನು ಸ್ವೀಕರಿಸಬೇಕೆಂದು ಬಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಉಸ್ಮಾನನಗರದ ಮೊಹಮ್ಮದ್ ಇರ್ಫಾನ್ ಮತ್ತು ಪೋರ್ಟ್ ರೋಡ್ನ ಬಾಬಾನಂದ ದಾಮೋದರ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಚೀಲವನ್ನು ಸ್ವೀಕರಿಸಲು ಬಂದವರಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಹಣ ಮತ್ತು ಚಿನ್ನ ಹವಾಲಾ ವ್ಯವಹಾರ ಅಥವಾ ಅನಧಿಕೃತ ಆನ್ಲೈನ್ ವಹಿವಾಟಿಗೆ ಸಂಬಂಧಿತವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಪೆನ್ಡ್ರೈವ್ ಅನ್ನು ತನಿಖೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ – ಏಜೆಂಟ್ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚೀಲ ಕಳುಹಿಸಿದ ವ್ಯಕ್ತಿಯ ಪತ್ತೆ ಹಾಗೂ ಅದರ ಹಿಂದಿರುವ ದೊಡ್ಡ ಜಾಲವನ್ನು ಬಯಲಿಗೆಳೆಯುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸರು ಸೀಲ್ ಮಾಡಿ, ಮುಂಬೈ ಪೊಲೀಸರ ಸಹಯೋಗದೊಂದಿಗೆ ಪ್ರಕರಣ ಭೇದಿಸಲು ಮುಂದಾಗಿದ್ದಾರೆ.





