ಚಿತ್ರದುರ್ಗ ಜಿಲ್ಲೆಯ ಗೋರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಸೀಬರ್ಡ್ ಖಾಸಗಿ ಬಸ್ನ ಭೀಕರ ಅಪಘಾತದ ನಂತರ ಪ್ರಯಾಣಿಕರ ಸ್ಥಿತಿಗತಿಗಳ ಕುರಿತು ಗೊಂದಲ ಮತ್ತು ಆತಂಕ ಮುಂದುವರಿದಿದೆ. ಈ ದುರ್ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಯುವತಿ ಹಾಗೂ ಕುಮಟಾದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಕುಟುಂಬಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಟ್ಕಳ ತಾಲೂಕಿನ ಶಿರಾಲಿಯ ರಶ್ಮಿ ಮಹಾಲೆ ಅವರು ಈ ಅಪಘಾತದ ನಂತರ ಪತ್ತೆಯಾಗುತ್ತಿಲ್ಲ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ತನ್ನಿಬ್ಬರು ಗೆಳತಿಯರೊಂದಿಗೆ ಗೋಕರ್ಣ ಮತ್ತು ಮುರುಡೇಶ್ವರ ಪ್ರವಾಸಕ್ಕೆಂದು ರಶ್ಮಿ ಹೊರಟಿದ್ದರು.
ಕಚೇರಿಯಲ್ಲಿ ಮ್ಯಾನೇಜರ್ ಒತ್ತಾಯಿಸಿ ರಜೆ ಪಡೆದಿದ್ದ ರಶ್ಮಿ, ಬುಧವಾರ ಕೆಲಸ ಮುಗಿಸಿ ಬಸ್ ಏರಿದ್ದರು. ಅಪಘಾತದ ಸಮಯದಲ್ಲಿ ಅವರ ಜೊತೆಗಿದ್ದ ಗೆಳತಿಯರಾದ ಗಗನ ಮತ್ತು ರಕ್ಷಿತಾ ಪ್ರಾಣಾಪಾಯದಿಂದ ಪಾರಾಗಿದ್ದರೂ, ರಶ್ಮಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮಗಳನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದ ಕುಟುಂಬಸ್ಥರು ಈ ಸುದ್ದಿ ಕೇಳಿ ಈಗ ಚಿತ್ರದುರ್ಗದತ್ತ ಧಾವಿಸಿದ್ದಾರೆ.
ಇದೇ ಬಸ್ನಲ್ಲಿ ಕುಮಟಾಕ್ಕೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರ ಬಗ್ಗೆಯೂ ವರದಿಯಾಗಿದೆ. 9U ಸೀಟ್ನಲ್ಲಿ ಪ್ರಯಾಣಿಸುತ್ತಿದ್ದ ವಿಜಯ್ ಭಂಡಾರಿ ಎಂಬುವವರು ಅಪಘಾತದ ಬಳಿಕ ಸುರಕ್ಷಿತವಾಗಿದ್ದಾರೆ. ಅವರು ಬೇರೊಬ್ಬರ ಮೊಬೈಲ್ ಮೂಲಕ ಕರೆ ಮಾಡಿ ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ, ಚಾಲಕನ ಹಿಂಭಾಗದ ಸೀಟಿನಲ್ಲಿ (1U) ಕುಳಿತಿದ್ದ ಮೇಘರಾಜ್ ಅವರ ಪತ್ತೆಯಾಗಿಲ್ಲ. ಅಪಘಾತ ನಡೆದ ಸಮಯದಿಂದ ಮೇಘರಾಜ್ ಅವರ ಯಾವುದೇ ಸುಳಿವು ಸಿಗದ ಕಾರಣ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಪೊಲೀಸರಿಗೆ ಅಧಿಕೃತ ಮಾಹಿತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ಘಟನಾ ಸ್ಥಳದಲ್ಲಿ ಮತ್ತು ಆಸ್ಪತ್ರೆಗಳಲ್ಲಿ ನಾಪತ್ತೆಯಾದವರಿಗಾಗಿ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ. ಬಸ್ ದುರಂತದ ತೀವ್ರತೆಯಿಂದಾಗಿ ಪ್ರಯಾಣಿಕರ ಮಾಹಿತಿ ಸಂಗ್ರಹಿಸುವಲ್ಲಿ ಆರಂಭಿಕ ಗೊಂದಲಗಳು ಉಂಟಾಗಿದ್ದು, ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.





