ಭಟ್ಕಳ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಭೀತಿಯ ಬೆನ್ನಲ್ಲೇ, ಭಟ್ಕಳ ತಾಲೂಕಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ಸುಳ್ಳು ಸುದ್ದಿಯನ್ನು ನಂಬಿದ ನೂರಾರು ವಾಹನ ಸವಾರರು ಏಕಾಏಕಿ ಪೆಟ್ರೋಲ್ ಬಂಕ್ಗಳ ಮುಂದೆ ಜಮಾಯಿಸಿದ್ದರಿಂದ ಪಟ್ಟಣದಲ್ಲಿ ಅಸ್ತವ್ಯಸ್ತ ವಾತಾವರಣ ನಿರ್ಮಾಣವಾಗಿತ್ತು.
ಜಾಗತಿಕ ಮಟ್ಟದ ಯುದ್ಧದ ಪರಿಸ್ಥಿತಿಯಿಂದಾಗಿ ತೈಲ ಪೂರೈಕೆ ಸ್ಥಗಿತಗೊಳ್ಳಬಹುದು ಅಥವಾ ಇಂಧನ ಬೆಲೆ ಗಗನಕ್ಕೇರಬಹುದು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೇ ಈ ಗೊಂದಲಕ್ಕೆ ಮೂಲ ಕಾರಣ.
ಇದರಿಂದ ಗಾಬರಿಗೊಂಡ ಜನರು ಮುಂಜಾಗ್ರತಾ ಕ್ರಮವಾಗಿ ತಮ್ಮ ವಾಹನಗಳ ಟ್ಯಾಂಕ್ಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾದರು. ಪರಿಣಾಮವಾಗಿ, ಭಟ್ಕಳದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳ ಸಾಲು ಕಂಡುಬಂತು.
ಜನರು ಕೇವಲ ವಾಹನಗಳಿಗೆ ಇಂಧನ ತುಂಬಿಸುವುದಷ್ಟೇ ಅಲ್ಲದೆ, ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಪೆಟ್ರೋಲ್ ಸಂಗ್ರಹಿಸಲು ಶುರು ಮಾಡಿದರು. ಈ ದಿಢೀರ್ ಬೇಡಿಕೆಯಿಂದಾಗಿ ಪಟ್ಟಣದ ಮೂರ್ನಾಲ್ಕು ಬಂಕ್ಗಳಲ್ಲಿ ಇಂಧನ ಖಾಲಿಯಾಗಿ ‘ನೋ ಸ್ಟಾಕ್’ ಬೋರ್ಡ್ಗಳು ಪ್ರತ್ಯಕ್ಷವಾದವು.
ಭಟ್ಕಳದಲ್ಲಿ ಪೆಟ್ರೋಲ್ ಸಿಗದಿದ್ದಾಗ ಜನರು ಅನಿವಾರ್ಯವಾಗಿ ಪಕ್ಕದ ಹೊನ್ನಾವರ ಮತ್ತು ಕುಂದಾಪುರ ತಾಲೂಕುಗಳತ್ತ ಧಾವಿಸಿದರು, ಇದು ನೆರೆಯ ಪ್ರದೇಶಗಳಲ್ಲೂ ವಾಹನ ದಟ್ಟಣೆಗೆ ಕಾರಣವಾಯಿತು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಕ್ಷುಲ್ಲಕ ಕಾರಣಕ್ಕೆ ಪರಿಶಿಷ್ಟ ಜಾತಿ ವ್ಯಕ್ತಿ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಈ ಬೆಳವಣಿಗೆಯನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಿದ್ದಾರೆ. “ದೇಶದಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಹಾಗೂ ಸದ್ಯಕ್ಕೆ ಬೆಲೆ ಏರಿಕೆಯ ಸೂಚನೆಯೂ ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು,” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಗತ್ಯವಾಗಿ ಇಂಧನ ಸಂಗ್ರಹಿಸುವುದರಿಂದ ಕೃತಕ ಅಭಾವ ಸೃಷ್ಟಿಯಾಗುತ್ತದೆ, ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.





