ಬಳ್ಳಾರಿ ನಗರದ ಕೌಲ್ಬಜಾರಿನ ದಾನಪ್ಪಬೀದಿ, ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ ಸೇರಿದ ಭೂಮಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಪ್ರತಾಪ ರೆಡ್ಡಿ ದೌರ್ಜನ್ಯ ನಡೆಸುತ್ತಿದ್ದು, ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕುಮಾರ್ ಸಮತಳ ಆಗ್ರಹಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಲ್ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ 1970ರ ದಶಕದಲ್ಲಿ 715ಎ ಸರ್ವೆ ನಂಬರ್ನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕೆ ಮಾಡಿತ್ತು. ಈ ಭೂಮಿಯು ಇದಕ್ಕೂ ಮೊದಲು ದಿವಂಗತ ರಾಜರಾಜೇಶ್ವರಿ ಶಾಸ್ತ್ರಿ ಮತ್ತು ಇವರ ಮಗ ಬ್ರಹ್ಮ ಶಾಸ್ತ್ರಿ ಇವರಿಗೆ ಸೇರಿದ ಇನಾಂ ಭೂಮಿಯಾಗಿತ್ತು ಎಂದರು.
ಇನಾಂ ಭೂಮಿ ರದ್ದತಿ ಕಾನೂನು ಜಾರಿಯಾದ ನಂತರ ಇದೇ ಭೂಮಿಯಲ್ಲಿದ್ದ ಟೆನೆಂಟ್ ಆಗಿ ದುಡಿಯುತ್ತಿದ್ದ ಏಳು ಮಾದಿಗ ಸಮುದಾಯದ ಕುಟುಂಬಕ್ಕೆ, ನಾಲ್ಕು ಕುರುಬ ಸಮುದಾಯಕ್ಕೆ, ಮಡಿವಾಳ ಸಮುದಾಯದ ಐದು ಕುಟುಂಬಕ್ಕೆ ಹಾಗೂ ಈಡಿಗರ ಒಂದು ಕುಟುಂಬಕ್ಕೆ ಭೂ ನ್ಯಾಯ ಮಂಡಳಿಯು ಫಾರಂ ನಂ.10 ನೀಡಿದೆಯಲ್ಲದೆ ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿತು. ಅಂದಿನಿಂದ ಈ ಮೇಲಿನ ಎಲ್ಲ ಕುಟುಂಬಗಳು ಭೂಮಿಯನ್ನು ಆದರಿಸಿ ಬದುಕುತ್ತಿದ್ದರು ಎಂದು ಕುಮಾರ್ ಸಮತಳ ಮಾಹಿತಿ ನೀಡಿದರು.
2006ರಿಂದ ಪ್ರತಾಪರೆಡ್ಡಿಯ ಕಣ್ಣು ಈ ಭೂಮಿಯ ಮೇಲೆ ಬಿದ್ದ ನಂತರ ಗೂಂಡಾಗಿರಿ, ಬೆದರಿಕೆಗಳಿಗೆ ಬಡವರ ಬದುಕು ದಿವಾಳಿಯಾಗುತ್ತಾ ಸಾಗಿದೆ. ಭೂ ಒಡೆಯರಾಗಿರುವ ಮಾದಿಗ ಸಮುದಾಯದ ಕುಟುಂಬಗಳು ಬಳ್ಳಾರಿ ನಗರದ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರಕಾರ್ಮಿಕರಾಗಿ ಜೀವನ ಸಾಗಿಸುವಂತೆ ಮಾಡಲಾಗಿದೆ. ಮಡಿವಾಳರು ಭಯದಿಂದ ಊರು ಬಿಟ್ಟಿದ್ದರೆ, ಈ ಭೂಮಿಯ ಸಹವಾಸವೇ ಬೇಡವೆಂದು ಜೀವ ಉಳಿಸಿಕೊಂಡು ಬದುಕುವ ಪರಿಸ್ಥಿತಿ ಕೆಲವರದಾಗಿದೆ. ಇನ್ನು ಕೆಲವರು ಜೀವ ಹೋದರು ಪರವಾಗಿಲ್ಲ ನ್ಯಾಯ ಪಡೆದೇ ತೀರುತ್ತೇವೆಂದು ಸ್ವಾಭಿಮಾನದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ನುಡಿದರು.
ಸರಕಾರವೇ ಕೊಟ್ಟ ಎಲ್ಲ ದಾಖಲೆ ಪತ್ರಗಳು ಇದ್ದಾಗ್ಯು ಸ್ಥಳೀಯ ಜಿಲ್ಲಾಡಳಿತ ಬಡವರ ಪರವಾಗಿ ನಿಂತು ಗೊಂದಲವನ್ನು ಬಗೆ ಹರಿಸಬಹುದಾದ ವಿಷಯವಾಗಿದ್ದರೂ, ಕೆಲ ಅಧಿಕಾರಿಗಳು ಮಾಡಿದ ತಪ್ಪು ಮತ್ತು ಬೇಜವಾಬ್ದಾರಿತನಗಳು ಕಗ್ಗಂಟಾಗಲು ಕಾರಣವಾಗಿದೆ. ಇದಕ್ಕೆ ಎನ್.ಪ್ರತಾಪರೆಡ್ಡಿಯ ಅಧಿಕಾರ ಹಣ ಕೆಲಸ ಮಾಡಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳೂ ದಾಖಲಾಗಿವೆ. ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ, ಈ ವಿಚಾರವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಜನರಿಗಾಗಿರುವ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಕುಮಾರ್ ಸಮತಳ ಒತ್ತಾಯಿಸಿದರು.
ಹೋರಾಟಗಾರ ಮರಿಯಪ್ಪ ಕೆ. ಮಾತನಾಡಿ, ಬಡವರ ಪರ ಎಂದು ಹೇಳುವ ಸರ್ಕಾರ, ಸ್ಥಳೀಯ ರಾಜಕಾರಣಿಗಳು ಭೂಮಾಫಿಯಾದಲ್ಲಿ ತೊಡಗಿರುವ ಪ್ರತಾಪರೆಡ್ಡಿ ಪರವಾಗಿ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಬಡವರು ನೆಮ್ಮದಿಯಿಂದ ಬದುಕಬಾರದೆ? ಇಷ್ಟೆಲ್ಲಾ ದೌರ್ಜನ್ಯ ಮಾಡುತ್ತಿದ್ದರೂ ಜಿಲ್ಲಾ ಪೊಲೀಸ್, ಕಂದಾಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ? ಕಂದಾಯ ಇಲಾಖೆಯು ಅತ್ಯಂತ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಬಡವರಿಗೆ ತೊಂದರೆ ಆಗುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕೆಂದು, ಈ ವಿಚಾರಕ್ಕೆ ಸರಕಾರ ಮಧ್ಯಪ್ರವೇಶ ಮಾಡಿ, ಬಡ ಜನರಿಗೆ ಆಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿ ಕಾವೇರಿ, ಭೂಮಿಯಿಂದ ವಂಚನೆಗೊಳಗಾಗುತ್ತಿರುವ ಕೆ.ಮೋಹನ್, ಕೆ.ಎಸ್.ರಘು, ಈ.ಈರೇಶ್, ಕಾಂತರಾಜ್ ಉಪಸ್ಥಿತರಿದ್ದರು.





