ಬೀದರ್ ತಾಲೂಕಿನ ಆಣದೂರಿನಲ್ಲಿ ಬೌದ್ಧ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹10 ಕೋಟಿ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಆಣದೂರಿನ ಬೌದ್ಧ ವಿಹಾರದಲ್ಲಿ ಭಾನುವಾರ ನಡೆದ ಬೌದ್ಧ ಸಮ್ಮೇಳನ ಹಾಗೂ ಆನಂದ ಬೋಧಿ ಬೌದ್ಧ ಮಹಾ ಸ್ತೂಪದ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೊಂದಿಗೆ ಚರ್ಚಿಸಿ ಕಲಬುರಗಿ ಅಥವಾ ಉದಗಿರ ಮಾದರಿಯಲ್ಲಿ ಭವನ ನಿರ್ಮಾಣ ಮಾಡಲಾಗುವುದು. ಬೌದ್ಧ ವಿಹಾರದ ಅಭಿವೃದ್ಧಿಗೆ ಸಾಧ್ಯವಾದ ಎಲ್ಲ ನೆರವು ನೀಡಲಾಗುವುದು. ಗೌತಮ ಬುದ್ಧರ ತತ್ವಗಳ ಪಾಲನೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಜಮೆಯಾಗದ ಬೆಳೆ ಹಾನಿ ಪರಿಹಾರ : ತಪ್ಪದ ರೈತರ ಸಂಕಷ್ಟ
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಮಾತನಾಡಿದರು. ಭಂತೆ ಧಮ್ಮಾನಂದ ಸಾನಿಧ್ಯ ವಹಿಸಿದ್ದರು. ಭಂತೆ ಜ್ಞಾನಸಾಗರ್, ಭಂತೆ ಸಂಘ ರಖ್ಖಿತ, ಭಂತೆ ಜ್ಞಾನಪ್ರಕಾಶ್, ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಹಾಗೂ ಗಣ್ಯರು ಹಾಜರಿದ್ದರು. ಬೌದ್ಧ ಉಪಾಸಕ, ಉಪಾಸಕಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.





