ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಫಲಿತಾಂಶ ದಾಖಲಿಸಿ ಕೊನೆಯ ಸ್ಥಾನದಲ್ಲಿ ಉಳಿಯುತ್ತಿವೆ. ಅದಕ್ಕೆ ಈ ಭಾಗದ ಜಿಲ್ಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಮಾಡದಿರುವುದು ಪ್ರಮುಖ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಆಸಕ್ತಿ ತೋರದ ಕಾರಣ ಬಹುತೇಕ ಶಾಲೆಗಳು ಅತಿಥಿಗಳನ್ನೇ ನೆಚ್ಚಿಕೊಂಡಿವೆ. ಅದರಲ್ಲೂ ಪ್ರೌಢ ಶಾಲಾ ಮಕ್ಕಳ ಬೋಧನೆಗೂ ಅತಿಥಿಗಳೇ ಆಧಾರ. ಫಲಿತಾಂಶ ಕುಸಿತಕ್ಕೆ ಬೇರೆ ಅಂಶಗಳ ಕಾರಣ ಇದ್ದರೂ ಸಹ ಶಿಕ್ಷಕರ ಕೊರತೆಯೇ ಮುಖ್ಯ ಕಾರಣ ಎನ್ನುವುದು ಜನಜನಿತವಾಗಿದೆ.
ಕಲ್ಯಾಣದ ಏಳು ಜಿಲ್ಲೆಗಳಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕಾಯಂ ಶಿಕ್ಷಕರ ಕೊರತೆ ಎದುರಿಸುತ್ತಿರುವುದನ್ನು ಶಿಕ್ಷಣ ಇಲಾಖೆ ಅಂಕಿ–ಅಂಶಗಳು ಪ್ರತಿಫಲಿಸುತ್ತವೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಮಾಹಿತಿ ಇಲ್ಲಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 7,539 ಪ್ರಾಥಮಿಕ ಹಾಗೂ 1,294 ಪ್ರೌಢ ಶಾಲೆಗಳಿವೆ. ಈ ಏಳು ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿ ಬರೋಬ್ಬರಿ 16,381 ಶಿಕ್ಷಕರ ಹುದ್ದೆ ಖಾಲಿ ಇವೆ. ಇನ್ನು ಪ್ರೌಢ ಶಾಲೆಯ ವಿವಿಧ ವಿಷಯಗಳ 40,80 ಶಿಕ್ಷಕರ ಹುದ್ದೆ ಖಾಲಿ ಇವೆ. ಪ್ರೌಢ ಶಾಲೆಗೆ ಒಟ್ಟು 11,518 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 7,518 ಕಾರ್ಯನಿರತ ಶಿಕ್ಷಕರಿದ್ದಾರೆ.
ರಾಯಚೂರು ಜಿಲ್ಲೆಗೆ ಪ್ರೌಢ ಶಾಲಾ ಶಿಕ್ಷಕರ 2,235 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 1,060 ಹುದ್ದೆ ಖಾಲಿ ಇವೆ. ಕಲಬುರಗಿ ಜಿಲ್ಲೆಗೆ 2,479 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 577 ಹುದ್ದೆಗಳು ಖಾಲಿ ಇವೆ. ಯಾದಗಿರಿ ಜಿಲ್ಲೆಗೆ ಮಂಜೂರಾದ 1,308 ಹುದ್ದೆಗಳಲ್ಲಿ 605 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಕೊಪ್ಪಳದಲ್ಲಿ 621, ಬಳ್ಳಾರಿಯಲ್ಲಿ 540, ಬೀದರ್ನಲ್ಲಿ 433 ಹಾಗೂ ವಿಜಯನಗರದಲ್ಲಿ 244 ಹುದ್ದೆಗಳು ಖಾಲಿ ಇವೆ.
ಭಾಷಾ ಶಿಕ್ಷಕರ ಹುದ್ದೆ ಖಾಲಿ ಖಾಲಿ!
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರೌಢ ಶಾಲೆಗಳು ಶಿಕ್ಷಕರ ಕೊರತೆ ದೊಡ್ಡ ಮಟ್ಟದಲ್ಲಿ ಎದುರಿಸುತ್ತಿವೆ. ಈ ಕಾರಣಕ್ಕಾಗಿಯೇ ಈ ಭಾಗದ ಶೈಕ್ಷಣಿಕ ಗುಣಮಟ್ಟ ಹಾಗೂ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣ ಎಂಬುವುದರಲ್ಲಿ ಎರಡು ಮಾತಿಲ್ಲ. ಅಧಿಕ ಪ್ರಮಾಣ ಶಿಕ್ಷಕರ ಕೊರತೆ ಇಟ್ಟುಕೊಂಡು ಎಸ್ಎಸ್ಎಸ್ಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಬೇಕೆಂದರೆ ಅದು ಸಾಧ್ಯವೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲಿಷ್ ʼಕಬ್ಬಿಣದ ಕಡಲೆʼ ಎಂಬ ಮಾತುಗಳು ಆಗಾಗ ಕೇಳುತ್ತೇವೆ. ಆದರೆ ಈ ಭಾಗದ ವಿದ್ಯಾರ್ಥಿಗಳಿಗೆ ಕನ್ನಡವೂ ‘ಕಬ್ಬಿಣದ ಕಡಲೆ’ಯಂತಾಗಿದೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಉದ್ಭವಿಸಿದೆ. ಪ್ರತಿವರ್ಷ ಹೆಚ್ಚು ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣಗೊಳ್ಳುತ್ತಿರುವುದು ಈ ಭಾಗದಲ್ಲಿ ಹೆಚ್ಚುತ್ತಿದೆ.
ಈ ಭಾಗದ ಒಟ್ಟು 1,294 ಪ್ರೌಢ ಶಾಲೆಗಳಲ್ಲಿ ವಿವಿಧ ವಿಷಯಗಳ 4,080 ಶಿಕ್ಷಕರ ಹುದ್ದೆ ಖಾಲಿ ಇವೆ. ಇನ್ನು ಕನ್ನಡ, ಇಂಗ್ಲಿಷ್ ವಿಷಯ ಶಿಕ್ಷಕರ ಹುದ್ದೆಗಳೇ ಅಧಿಕವಾಗಿ ಖಾಲಿ ಉಳಿದಿರುವುದು ಮಾತ್ರ ಭಾಷಾ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ. ಆದರೂ ಸರ್ಕಾರ ಕನ್ನಡ, ಇಂಗ್ಲಿಷ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡುತ್ತಿಲ್ಲ.
ಕಳೆದ ವರ್ಷ ಪರೀಕ್ಷೆ-1ರ ಎಸ್ಎಸ್ಎಸ್ಸಿ ಫಲಿತಾಂಶ ಪ್ರಕಟವಾದಾಗ ಈ ಭಾಗದ ಏಳು ಜಿಲ್ಲೆಗಳಲ್ಲಿ ಬರೋಬ್ಬರಿ 46 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ನಪಾಸು ಆಗಿದ್ದರು. ಇನ್ನು ಇಂಗ್ಲಿಷ್ ವಿಷಯದಲ್ಲಿಯೂ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಇದು ಶಿಕ್ಷಣದ ಗುಣಮಟ್ಟದ ಬಗೆಗೆ ಗಂಭೀರವಾಗಿ ಆಲೋಚಬೇಕಾದ ಸಂಗತಿಯೂ ಹೌದು.
| ಜಿಲ್ಲೆಗಳು | ಕನ್ನಡ ಶಿಕ್ಷಕರ ಹುದ್ದೆ ಖಾಲಿ | ಇಂಗ್ಲಿಷ್ ಶಿಕ್ಷಕರ ಹುದ್ದೆ ಖಾಲಿ |
| ಬೀದರ್ | 111 | 77 |
| ಬಳ್ಳಾರಿ | 91 | 100 |
| ಕಲಬುರಗಿ | 116 | 101 |
| ಕೊಪ್ಪಳ | 116 | 106 |
| ವಿಜಯನಗರ | 18 | 40 |
| ಯಾದಗಿರಿ | 81 | 99 |
| ರಾಯಚೂರು | 155 | 158 |
| ಒಟ್ಟು | 688 | 681 |
ರಾಜ್ಯದಲ್ಲಿ 58,706 ಶಿಕ್ಷಕರ ಹುದ್ದೆ ಖಾಲಿ :
ರಾಜ್ಯದಲ್ಲಿ ಒಟ್ಟು 41,088 ಸರ್ಕಾರಿ ಪ್ರಾಥಮಿಕ 5,024 ಸರ್ಕಾರಿ ಪ್ರೌಢ ಶಾಲೆಗಳಿವೆ. ಆ ಪೈಕಿ ಸರ್ಕಾರಿ ಪ್ರಾಥಮಿಕ 45,572 ಹಾಗೂ ಪ್ರೌಢ ಶಾಲೆಯ 12,134 ಸೇರಿ ಒಟ್ಟು 58,706 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬುದು ಶಿಕ್ಷಣ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಖಾಲಿ ಇರುವ ಶಿಕ್ಷಕರ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗಿದೆ. ನೇಮಕ ಯಾವಾಗ ಎಂಬ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಅವರು, ʼರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ ಪದವೀಧರ ಪ್ರಾಥಮಿಕ ಶಿಕ್ಷಕರ (6-8ನೇ ತರಗತಿ) ವೃಂದದ 15,000 ಹುದ್ದೆಗಳಿಗೆ 2022ರಲ್ಲಿ ಅಧಿಸೂಚಿಸಲಾಗಿತ್ತು. ಈ ಹುದ್ದೆಗಳಿಗೆ ಎದುರಾಗಿ ಒಟ್ಟು 13,352 ನಿಯಮಾನುಸಾರ ಅರ್ಹರಾಗಿರುತ್ತಾರೆ. ಈ ಪೈಕಿ ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ನೇಮಕಾತಿ ಅಧಿಸೂಚನೆ/ ನಿಯಮಗಳಂತೆ ಎಲ್ಲಾ ಷರತ್ತು ಮಾನದಂಡಗಳನ್ನು ಪೂರೈಸಿರುವ 12,403 ಅಭ್ಯರ್ಥಿಗಳಿಗೆ ಇದುವರೆಗೆ ಕೌನ್ಸಿಲಿಂಗ್ ಮೂಲಕ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಶಾಲಾ ಕರ್ತವ್ಯದ ಮೇಲೆ ಹಾಜರುಪಡಿಸಿಕೊಳ್ಳಲಾಗಿದೆʼ ಎಂದು ಉತ್ತರಿಸಿದರು.
ʼ2024 ಅಕ್ಟೋಬರ್ 7ರ ಸರ್ಕಾರದ ಆದೇಶದಂತೆ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಖಾಲಿಯಿರುವ ಪ್ರಾಥಮಿಕ ಶಾಲೆಗಳ 4,882 ಹಾಗೂ ಪ್ರೌಢಶಾಲೆಗಳ 385 ಹುದ್ದೆಗಳನ್ನು ಸೇರಿ ಒಟ್ಟು 5,267 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಅನುಮತಿ ನೀಡಲಾಗಿದೆʼ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ : ಪಲ್ಸ್ ಪೋಲಿಯೋ ಅಭಿಯಾನ | ಲಸಿಕೆಯಿಂದ ಮಗು ವಂಚಿತವಾಗದಂತೆ ಕ್ರಮವಹಿಸಿ : ಡಿಸಿ ಶಿಲ್ಪಾ ಶರ್ಮಾ
ʼಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣದ ಅಭ್ಯುದಯಕ್ಕೆ ಸರ್ಕಾರ ವಿಶೇಷ ಗಮನ ಕೊಡಬೇಕು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದ ಕಲಿಕಾ ಗುಣಮಟ್ಟ ಸುಧಾರಣೆಯಾಗಬೇಕಾದರೆ ಶಿಕ್ಷಕರ ಖಾಲಿ ಹುದ್ದೆಗಳಿಂದ ನಲಗುತ್ತಿರುವ ಈ ಭಾಗದ ಜಿಲ್ಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿಗೆ ಮುಂದಾಗಬೇಕು. ಅದರಿಂದ ಫಲಿತಾಂಶ ಸುಧಾರಣೆಯೂ ಆಗಲಿದೆʼ ಎಂಬುದು ಜನರ ಆಗ್ರಹವಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




