ಮಳೆ, ಪ್ರವಾಹದಿಂದ ಬೆಳೆ ಹಾನಿಯಾದ ಜಿಲ್ಲೆಯ 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ ಮಾಡಲಾಗಿದೆ. ಉಳಿದ ಪರಿಹಾರ ಮೊತ್ತ ನಾಲ್ಕೈದು ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ‘ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆಗಳು ಮರು ಸಂಪರ್ಕಗೊಂಡಿವೆ. ಜನರಿಗೆ ಸಾರಿಗೆ ಸಂಪರ್ಕದಲ್ಲಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ’ ಎಂದರು.
ಪ್ರತಿ ಟನ್ ಕಬ್ಬಿಗೆ ₹2,750 ಹಾಗೂ ರಾಜ್ಯ ಸರ್ಕಾರದಿಂದ ₹50 ಮತ್ತು ಸಕ್ಕರೆ ಕಾರ್ಖಾನೆಯಿಂದ ₹50 ಹೆಚ್ಚುವರಿಯಾಗಿ ಸೇರಿಸಿ ₹2,850 ರೂ ನೀಡುವ ಬಗ್ಗೆ ರೈತ ಮುಖಂಡರ ಜೊತೆ ಚರ್ಚಿಸಲಾಗಿದೆ. ರೈತ ಮುಖಂಡರ ಜೊತೆ ಒಮ್ಮತದ ನಿರ್ಧಾರ ಇನ್ನೂ ಮೂಡಿ ಬಂದಿಲ್ಲ’ ಎಂದರು.
‘ಬೆಳಗಾವಿ ದರ ₹3,200 ನೀಡುವಂತೆ ರೈತರ ಬೇಡಿಕೆ ಇಟ್ಟಿದ್ದಾರೆ. ಆದರೆ ಬೆಳಗಾವಿ ಕಬ್ಬಿನ ರಿಕವರಿ ದರ ಅತಿ ಹೆಚ್ಚಾಗಿದ್ದು ಬೀದರ್ ಕಬ್ಬಿನ ರಿಕವರಿ ದರ ಕಡಿಮೆಯಾಗಿರುವ ಹಿನ್ನೆಲೆ ಕಾರ್ಖಾನೆ ಮಾಲೀಕರು ಬೆಳಗಾವಿ ದರಕ್ಕೆ ಒಪ್ಪುತ್ತಿಲ್ಲ. ಶೀಘ್ರವೇ ರೈತ ಮುಖಂಡರ ಜೊತೆಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.

ನ.14 ಮತ್ತು 15 ರಂದು ಏಕತಾ ನಡಿಗೆ (ಯುನಿಟಿ ಮಾರ್ಚ್)ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಮಂತ್ರಾಲಯದ ಮೇರಾ ಯುವ ಭಾರತ್ ಬೀದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನ.14 ರಂದು ಬೆಳಿಗ್ಗೆ 8 ಗಂಟೆಗೆ ಭೂಮರೆಡ್ಡಿ ಕಾಲೇಜಿನಿಂದ ಮೈಲೂರ್ ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ ಭಗತ್ ಸಿಂಗ್ ವೃತ್ತ, ಹರಳಯ್ಯ ವೃತ್ತ, ಗುದುಗೆ ಆಸ್ಪತ್ರೆಯಿಂದ ನೆಹರೂ ಕ್ರೀಡಾಂಗಣದವರೆಗೆ ನಡಿಗೆ ನಡೆಯಲಿದ್ದು, ನಂತರ 10 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ.
ನ.15 ರಂದು ಬರೀದ್ ಶಾಹಿ ಮೈದಾನದಿಂದ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ರೋಟರಿ ವೃತ್ತ, ಬ್ರಿಮ್ಸ್ ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಗುದುಗೆ ಆಸ್ಪತ್ರೆಯಿಂದ ರಂಗಮಂದಿರದವರೆಗೆ ನಡಿಗೆ ನಡೆಯಲಿದ್ದು , ಬಳಿಕ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮುಖ್ಯಕಾರ್ಯಕ್ರಮ ನಡೆಯಲಿದೆ .ಈ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡದ ಆರೋಪ : ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿ ಅಮಾನತು
ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರ ಕುಮಾರ್ ಗೋರ್ಮೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಶಿವಕುಮಾರ ಸ್ವಾಮಿ, ಚನ್ನಬಸವಣ್ಣಾ ಬಳತೆ, ರವೀಂದ್ರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





