ವಿದ್ಯಾರ್ಥಿಗಳಲ್ಲಿ ಹೊಸ ಕಲಿಕಾ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಔರಾದ್ ತಾಲೂಕಿನ ಯನಗುಂದಾ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಪ್ರಕೃತಿ ಮಡಿಲಲ್ಲಿ ವಿದ್ಯಾರ್ಥಿಗಳನ್ನು ಕಾಲ್ನಡಿಗೆ ಮಾಡಿಸಿರುವುದು ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸುವಂತೆ ಮಾಡಿತು.
ಶಿಕ್ಷಣವು ಮಕ್ಕಳಿಗೆ ಜೀವನ ಕಲಿಸುವಂತಾಗಬೇಕು, ಇತ್ತೀಚಿಗೆ ಮಕ್ಕಳು ಮೊಬೈಲ್ ಬಳಕೆ ಅತಿಯಾಗಿ ಸಾಧಾರಣ ಚಟುವಟಿಕೆಗಳಿಂದ ವಂಚಿತರಾಗುತ್ತಿರುವುದು ಕಳವಳಕಾರಿ ಸಂಗತಿ. ತತ್ವಜ್ಞಾನಿ ರೂಸೋ ಅವರು ಮರಳಿ ನಿಸರ್ಗಕ್ಕೆ ಎನ್ನುವ ಸಂದೇಶ ನೀಡಿದ್ದಾರೆ. ಅದರಂತೆ ಯನಗುಂದಾ ಶಾಲಾ ಶಿಕ್ಷಕರು ಪ್ರತಿವರ್ಷ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕಗಳ ಜೊತೆಗೆ ನಿಸರ್ಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನಿಸರ್ಗದಲ್ಲಿ ಮಡಿಲಲ್ಲಿ ನಡೆದಾಡುವುದರಿಂದ ಮಾನಸಿಕವಾಗಿಯು ಮತ್ತು ದೈಹಿಕವಾಗಿಯು ಪ್ರಯೋಜನವಾಗಲಿದೆ. ಮಾನಸಿಕ ಒತ್ತಡ ಕಡಿಮೆ ಮಾಡುವ ಮೂಲಕ ನಮ್ಮಗೆ ಪರಿಶುದ್ಧ ಗಾಳಿ ಹಾಗೂ ವಿವಿಧ ಪಕ್ಷಿ, ಪ್ರಾಣಿ, ಸಸ್ಯ, ಮರ ಹೊಲದಲ್ಲಿನ ವಿವಿಧ ಬೆಳೆಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದು ಶಾಲೆಯ ಮುಖ್ಯಗುರು ಬಸವರಾಜ ಮಠಪತಿ ಮಾಹಿತಿ ನೀಡಿದ್ದರು.
ನಮ್ಮ ಶಾಲೆಯಲ್ಲಿ ಕಲಿಕೆಯ ಜೊತೆಗೆ ವಿವಿಧ ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ರಚನಾತ್ಮಕ, ಕ್ರಿಯಾಶೀಲ, ಸೃಜನಶೀಲತೆ ಮೂಡಿಸಲಾಗುತ್ತಿದೆ. ಮಕ್ಕಳಿಗಾಗಿ ಪಥಸಂಚಲನ, ಮಡಬಾತ್, ಪರಿಸರ ಪ್ರಜ್ಞೆ ಹಾಗೂ ಪ್ರಕೃತಿ ಮಡಿಲಲ್ಲಿ ವನಭೋಜನ, ಸ್ವಚ್ಛ ಭಾರತ ಮಿಷನ್ ಜಾಗೃತಿ ಕಾರ್ಯಕ್ರಮ ಸಂಘಟಿಸುವ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಶಿಕ್ಷಕ ಲಕ್ಷ್ಮರಡ್ಡಿ ಗಂಗಾಪೂರೆ ತಿಳಿಸಿದ್ದಾರೆ.

ʼನಮ್ಮ ಗುರುಗಳು ನಮಗೆ ನಿಸರ್ಗದ ಮಡಿಲಲ್ಲಿ ಓಡಾಡಲು ನಮ್ಮನ್ನು ಕರೆದುಕೊಂಡು ಹೋಗಿರುವುದು ನಮಗೆ ತುಂಬಾ ಖುಷಿಯಾಗಿದೆ.ಇದರಿಂದ ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ ಹೊಸತನ ಕಲಿಕೆಗೆ ಪ್ರೇರಣೆಯಾಗಿದೆʼ ಎಂದು ವಿದ್ಯಾರ್ಥಿ ಅರ್ಪಿತ ಈಶ್ವರ್ ಅವರು ನುಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಲ್ಲಿಕಾರ್ಜುನ ಟಂಕಸಾಲೆ, ಎಂ.ಡಿ ಸಿರಾಜ್, ಮುಸ್ತಫಾ ಆಜಾದ್ ಖುರ್ರಮ್ ಮುರ್ತುಜಾ, ತೇಜಸ್ವಿ ಚಾಂದಕವಠೆ ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು.





