ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ರಂಭಾಪುರಿ ಶ್ರೀಗಳು ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಕಾರ್ಯಕ್ರಮ ಕೈಬಿಡಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.
‘ಬಸವಕಲ್ಯಾಣವು ಶರಣರು ತತ್ವಕ್ಕಾಗಿ ಪ್ರಾಣ ಕೊಟ್ಟ ನೆಲ. ಈ ಭೂಮಿಯಲ್ಲಿ ಶರಣರ ಸರ್ವ ಸಮಾನತೆ ತತ್ವಕ್ಕೆ ವಿರುದ್ಧವಾದ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ನಮ್ಮದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪರಂಪರೆಯೇ ಹೊರತು ದರ್ಬಾರ್ ಪರಂಪರೆ ಅಲ್ಲ. ಹೀಗಾಗಿ ದಸರಾ ದರ್ಬಾರ್ ಸಂಘಟಿಸುವ ಯಾವ ಅವಶ್ಯಕತೆಯೂ ಇಲ್ಲ. ಆಡಂಬರ, ಬಂಗಾರದ ಕಿರೀಟ ಧರಿಸುವುದು, ಎತ್ತರದಲ್ಲಿ ಕೂರುವುದು, ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದು ನಮ್ಮ ಪರಂಪರೆ ಅಲ್ಲ. ನಮ್ಮದು ಸರಳ, ಜ್ಞಾನವೇ ರತ್ನ ಎನ್ನುವ, ಎನಗಿಂತ ಕಿರಿಯರಿಲ್ಲ ಎನ್ನುವ, ತತ್ವವನ್ನು ಮೆರೆಸುವ ಪರಂಪರೆ’ ಎಂದು ಹೇಳಿದ್ದಾರೆ.
‘ಬಸವಕಲ್ಯಾಣಕ್ಕೆ ಎಲ್ಲರಿಗೂ ಸ್ವಾಗತವಿದೆ. ಆದರೆ, ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಗೆ ಚ್ಯುತಿ ಉಂಟಾಗುವಂತಹ ಕಾರ್ಯಕ್ರಮ ಸಂಘಟಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸಂಘಟಕರು ಕೂಡಲೇ ದಸರಾ ದರ್ಬಾರ್ ಕೈಬಿಡಬೇಕು. ಇಲ್ಲವಾದಲ್ಲಿ ಬಸವ ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : BREAKING NEWS | ಸಚಿವ ಕೆಎನ್ ರಾಜಣ್ಣ ರಾಜೀನಾಮೆ





