ಬಸವಾದಿ ಶರಣರ ವಚನಗಳು ನಾವು ದಿನನಿತ್ಯ ಪಠಣ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಬಸವಕಲ್ಯಾಣದಲ್ಲಿ ನ.29, 30ರಂದು ನಡೆಯಲಿರುವ 46ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2025ರ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ʼವಚನ ಕಂಠಪಾಠ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿ, ವಚನ ಪಠಣ ಮಾಡುವುದರ ಜೊತೆ ಬಸವಾದಿ ಶರಣರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣʼ ಎಂದು ನುಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನಿಧ್ಯ ವಹಿಸಿ ಮಾತನಾಡಿ, ʼವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಶರಣರು ತಮ್ಮ ಅನುಭಾವದಿಂದ ವಚನಗಳು ಬರೆದಿದ್ದಾರೆ. ನಮ್ಮ ಜೀವನದ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆʼ ಎಂದರು.
ʼಚಿಕ್ಕ ವಯಸ್ಸಿನ ಮಕ್ಕಳಲ್ಲಿ ವಚನ ಪ್ರಜ್ಞೆ ಬೆಳೆದರೆ ಅವರ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂಬ ಉದ್ದೇಶದಿಂದ ಡಾ.ಬಸವಲಿಂಗ ಪಟ್ಟದ್ದೇವರು ಅನೇಕ ವರ್ಷಗಳಿಂದ ವಚನ ಕಂಠಪಾಠ ಸ್ಪರ್ಧೆಯನ್ನು ನಡೆಸುಕೊಂಡು ಬರುತ್ತಿದ್ದಾರೆ. ಅದರ ಪರಿಣಾಮವಾಗಿ ರಾಜ್ಯದ ಅನೇಕ ಜಿಲ್ಲೆಗಳ ಸ್ಪರ್ಧಾಳುಗಳು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿʼ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮಿ, ಅತ್ತಿವೇರಿ ಬಸವಶ್ರೀ ಮಾತಾಜಿ, ಬಸವದೇವರು, ಪ್ರಭುಲಿಂಗ ದೇವರು, ಶಿವಬಸವ ದೇವರು, ಸುಗುಣಾತಾಯಿ ಅವರು ಸಮ್ಮುಖ ವಹಿಸಿದ್ದರು.
ಸುಶೀಲಾದೇವಿ ಬಿ.ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ್ ಅವರು ಬಸವಗುರು ಪೂಜೆ ನೆರವೇರಿಸಿದರು. ಪತ್ರಕರ್ತ ದೇವಯ್ಯ ಗುತ್ತೇದಾರ ಅವರು ಅಧ್ಯಕ್ಷತೆ ವಹಿಸಿದರು. ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಪ್ರಮುಖರಾದ ವಿಜಯಲಕ್ಷ್ಮಿ ಗಡ್ಡೆ, ಬಸವರಾಜ ಮೂರುಡೆ, ಶಿವಪುತ್ರ ದುರ್ಗೆ, ಲಕ್ಷ್ಮಿಪುತ್ರ ನಿಂಬಾಳಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಉತ್ತರ ಪ್ರದೇಶ | ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ
ಆಕಾಶ ಖಂಡಾಳೆ ಅವರು ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಜಗನ್ನಾಥ ಪಾಟೀಲ ವಂದಿಸಿದರು.





