ಮಹಿಳೆಯರ ಉದ್ಯಮಶೀಲತೆ ಹೆಚ್ಚಿಸಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಕ್ಕ ಕೆಫೆ ನೆರವಾಗಲಿದೆ. ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಅಕ್ಕ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.
ʼಸಂಪೂರ್ಣವಾಗಿ ಮಹಿಳೆಯರಿಂದ ಕಾರ್ಯನಿರ್ವಹಿಸುವ ಅಕ್ಕ ಕೆಫೆ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ. 12 ಲಕ್ಷ ಸರ್ಕಾರದ ನೆರವು ಹಾಗೂ ಕೆಫೆ ನಡೆಸಿಕೊಂಡು ಹೋಗಲು ಮಹಿಳಾ ಸ್ವಸಹಾಯ ಸಂಘಗಳ ಬಂಡವಾಳ ಹಾಕಿ ಕೆಫೆ ನಡೆಸಿಕೊಂಡು ಹೋಗುವುದು. ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡುವುದು ಮತ್ತು ಮುಖ್ಯ ವಾಹಿನಿಗೆ ತರುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆʼ ಎಂದರು.
ʼಮೊದಲಿನಿಂದಲೂ ಮಹಿಳೆಯರು ಶೋಷಣೆಗೆ ಒಳಗಿದವರು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕೆಳ ಹಂತದಲ್ಲಿದ್ದವು. ಆದರೆ, ಇಂದು ಮಹಿಳೆಯರು ಪುರುಷರಷ್ಟೇ ಸಮಾನರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಕೊಡುಗೆ ಹಾಗೂ ಸಾಧನೆ ಅಪಾರವಾಗಿದೆʼ ಎಂದರು.

ʼತಮ್ಮ ಸರ್ಕಾರ ಯಾವುದೇ ಮಧ್ಯವರ್ತಿಗಳಿಲ್ಲದೆ ಗೃಹ ಲಕ್ಷ್ಮೀ ಯೋಜನೆಯಡಿ ನೇರವಾಗಿ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಹಾಕುವುದರ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಗೆ ಪ್ರತಿ ವರ್ಷ 1.26 ಕೋಟಿ ಮಹಿಳೆಯರಿಗೆ 30 ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಕ್ಕೆ 600 ಕೋಟಿ ಟಿಕೆಟ್ ಮಹಿಳೆಯರಿಗೆ ಉಚಿತವಾಗಿ ನೀಡಲಾಗಿದೆ. ಕೆಫೆಯಲ್ಲಿ ಗುಣಮಟ್ಟದ ಮತ್ತು ರುಚಿಕರವಾದ ಆಹಾರ ಹಾಗೂ ಸ್ವಚ್ಛತೆಯಿಂದ ನೋಡಿಕೊಳ್ಳಬೇಕುʼ ಎಂದರು.
ಬೀದರ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ʼಅಕ್ಕ ಕೆಫೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಹಾಗೂ ಉದ್ಯಮಶೀಲತೆ ಹೆಚ್ಚಿಸುವುದಾಗಿದೆ. ಕೆಫೆಯಲ್ಲಿ ವಿಶೇಷ ಹಾಗೂ ವಿವಿಧ ಬಗೆಯ ಭೋಜನಾ ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ 60 ಹಾಗೂ ರಾಜ್ಯ ಸರ್ಕಾರದಿಂದ ಶೇ 40ರಷ್ಟು ಹಣ ಇದಕ್ಕೆ ನೀಡಲಾಗುತ್ತದೆʼ ಎಂದರು.
ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿ, ʼಅಕ್ಕ ಕೆಫೆ ಮೂಲಕ ಮಹಿಳೆಯರನ್ನು ಇನ್ನಷ್ಟು ಆರ್ಥಿಕ ಸದೃಢರಾಗಿಸಲು ಹಾಗೂ ಮಹಿಳಾ ಉದ್ಯಮಶೀಲತೆ ಹೆಚ್ಚಿಸುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆ. ಹುಮನಾಬಾದ್ ಪಟ್ಟಣದಲ್ಲಿ ಎರಡನೇ ಕೆಫೆ ಸ್ಥಾಪಿಸಲಾಗುತ್ತಿದ್ದು, ಆರಂಭದ ಹಂತದಲ್ಲಿದೆ. ಈ ಕೆಫೆಯಲ್ಲಿ ಆನ್ಲೈನ್ ಯುಪಿಆಯ್ (ಯುಪಿಐ) ಮೂಲಕ ಕೂಡ ಪಾವತಿ ಮಾಡಬಹುದಾಗಿದೆʼ ಎಂದರು.
ಇದನ್ನೂ ಓದಿ : 238 ಗ್ರಾಮ ಪಂಚಾಯತಿಗಳಿಗೆ ‘ಗಾಂಧಿ ಗ್ರಾಮ’ ಪುರಸ್ಕಾರ
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮಾನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಬೀದರ ತಾಲೂಕು ಪಂಚಾಯತ್ ಇಓ ಮಾಣಿಕರಾವ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು, ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.





