ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ತ್ವರಿತವಾಗಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಆಗ್ರಹಿಸಿದೆ.
ಈ ಸಂಬಂಧ ಎಐಕೆಎಸ್ ಜಿಲ್ಲಾ ಮಂಡಳಿಯ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ತಾಲೂಕು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ʼರಾಜ್ಯದಲ್ಲಿ ಹವಾಮಾನ ವೈಪರಿತ್ಯಯಿಂದಾಗಿ ರೈತರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ, ಪ್ರವಾಹದಿಂದಾಗಿ ರೈತರು ಬೆಳೆದಿದ್ದ ಫಸಲು ನೆಲಕಚ್ಚಿದೆ. ಬೆವರು ಸುರಿಸಿ ಬೆಳೆದಿದ್ದ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಚಿಂತೆಗೀಡಾಗಿದ್ದಾರೆʼ ಎಂದರು.
‘ಮುಂಗಾರು ಬೆಳೆ ಹಾನಿಯಿಂದಾಗಿ ರೈತರು ಮುಂದಿನ ಬದುಕು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ನಿರಂತರ ಮಳೆಯಿಂದಾಗಿ ಹಿಂಗಾರು ಬಿತ್ತನೆಯೂ ಸರಿಯಾಗಿ ಆಗದಿರುವುದಕ್ಕೆ ನಿರೀಕ್ಷಿತ ಫಸಲು ಬರುವ ಸಾಧ್ಯತೆ ಇಲ್ಲ. ಬಿತ್ತನೆ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಖರ್ಚು ಮಾಡಿದ ರೈತ ಕಂಗಲಾಗಿದ್ದಾನೆ. ಸರ್ಕಾರ ಕೂಡಲೇ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಪಾವತಿಸಿ ರೈತರ ನೆರವಿಗೆ ಧಾವಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ಅಖಿಲ ಭಾರತ ಕಿಸಾನ್ ಸಭಾದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಮದಕಟ್ಟಿ, ಸಿಪಿಐ ಕಾರ್ಯದರ್ಶಿ ರಾಮಯ್ಯ ಮಠಪತಿ, ಇಬ್ರಾಹಿಂ ಸಾಬ್, ಸಿಂಧು ಮಾನೆ, ರವೀಂದ್ರ ನಲಕಟ್ಟೆ, ಮೋತಿರಾಮ್ ಸೂರ್ಯವಂಶಿ, ನಂದಾಬಾಯಿ ಭಕ್ಷಿ, ಶಿವರಾಜ್ ಬಕ್ಕೆ, ಮೋಹನ್ ಬಿರಾದಾರ್, ವಿಶ್ವನಾಥ, ಮಹಾದೇವಿ ಕಾಂಬಳೆ, ಬಾಬುರಾವ್, ಸಾವನಕುಮಾರ್ ಹಾಗೂ ಮಹಮ್ಮದ್ ಸಾಬ್ ಸೇರಿದಂತೆ ಮತ್ತಿತರರಿದ್ದರು.





