ಬಸವಕಲ್ಯಾಣದ ಅನುಭವ ಮಂಟಪ, ಮಹಾಮನೆ, ತ್ರಿಪುರಾಂತ ಈ ಎಲ್ಲ ಶಬ್ದಗಳು ಏಕಕಾಲದಲ್ಲಿ ಬೆರಗು ಹಾಗೂ ಸಂವೇದನೆಗಳು ಹುಟ್ಟಿಸುತ್ತವೆʼ ಎಂದು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ʼ ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ವಚನಕಾರರಲ್ಲಿ ಕಲ್ಯಾಣ ಸಾಂಸ್ಕೃತಿಕ ವ್ಯಾಖ್ಯಾನ ಪಡೆದ ಊರು. ಅಕ್ಕ, ಅಲ್ಲಮ, ಬಸವಣ್ಣ ಸೇರಿ ಹಲವು ವಚನಕಾರರು ಕಲ್ಯಾಣದ ಪರಿಕಲ್ಪನೆ ಬೌದ್ಧಿಕ, ವೈಚಾರಿಕ, ಅನುಭಾವಿಕ ನೆಲೆಗಳಲ್ಲಿ ಕಟ್ಟಿಕೊಟ್ಟಿದ್ದಾರೆʼ ಎಂದರು.
ʼಬಹುದೊಡ್ಡ ಮಹಾರಾಜರಿದ್ದವರು ಕಾಯಕ ಜೀವಿಗಳಾಗಿ, ಶಿವಶರಣರಾಗಿ ಕಲ್ಯಾಣದ ಬೀದಿಯಲ್ಲಿ ಸ್ವಾತಂತ್ರ್ಯದ ತಾತ್ವಿಕತೆ ತಿಳಿಸಿದ್ದರು. ಲಿಂಗ ತಾರತಮ್ಯ ಹಾಗೂ ಜಾತಿಯತೆ ವಿರುದ್ಧ ದೊಡ್ಡ ದನಿಯಾದ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ದುಡಿಯುವರ ವರ್ಗದ ಸಮಾಜವನ್ನು ನಿರ್ಮಿಸಿದ್ದರು. ಕಾರ್ಲ್ ಮಾರ್ಕ್ಸ್ ಪರಿಕಲ್ಪನೆ ಅಂದಿನ ಕಾಲದಲ್ಲಿಯೇ ಬಸವಣ್ಣ ಅನುಷ್ಠಾನಕ್ಕೆ ತಂದಿದ್ದರುʼ ಎಂದರು.

ಬೀದರ ವಿಶ್ವವಿದ್ಯಾಲಯದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಪಠ್ಯಕ್ಕಿರುವ ಮಹಾಂತೇಶ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕತೆಯ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʼಉದಾರವಾದಿ ಮಾರುಕಟ್ಟೆ ಅನುಸರಿಸುವ ನೀತಿಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಅಪಾಯ ಎದುರಾದದ್ದು ರೈತರಿಗೆ. ರೈತನ ಬದುಕು ಹಸನು ಮಾಡಲು ಬೇಕಾದ ಉಳುಮೆ ಬೀಜ, ಕೀಟನಾಶಕ, ರಸಗೊಬ್ಬರ ಮಾರುಕಟ್ಟೆ ತಂತ್ರಗಾರಿಕೆಯಿಂದ, ಕಂಪನಿಯ ಲಾಭಕೋರತನದಿಂದ ರೈತನನ್ನು ಸಾವಿನ ಮನೆಗೆ ದೂಡುತ್ತಿವೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಭಾರತೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭದಲ್ಲಿ ನೆಲ, ನೀರು, ಕಾಡಿಗೆ ವಿಶಿಷ್ಟ ಸ್ಥಾನವಿದೆ. ಭೂಮಿ ಅನ್ನ ಕೊಡುವ ಜೊತೆಗೆ ಎಲ್ಲ ಜೀವಿಗಳು ಜೀವಿಸುವ ತಾಣವಾಗಿದೆ. ಆಧುನಿಕ ಕಾಲಘಟ್ಟದಲ್ಲಿ, ಜಾಗತೀಕರಣದ ಸಂದರ್ಭದಲ್ಲಿ ನೆಲವನ್ನು ಸರಕಾಗಿ ಪರಿಗಣಿಸಲಾಗಿದೆ. ಉಳುಮೆ ಮಾಡುವವರು ನಶಿಸಿ ಹೋದರೆ ಸಹಜವಾಗಿ ಬಂಡವಾಳಶಾಹಿಗಳ ವಶಕ್ಕೆ ಭೂಮಿ ಹೋಗುವಂತೆ ಪ್ರಭುತ್ವಗಳು ತಂತ್ರಗಾರಿಕೆ ಅಡಗಿರುತ್ತದೆʼ ಎಂದರು.
ʼಕಥೆಗಾರ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕತೆ ಲಾಭದ ಲೆಕ್ಕಾಚಾರ ಇರುವ ಮಾರುಕಟ್ಟೆಗೆ ಮಾನವಿಯತೆಯ ಗುಣ ಇರುವುದಿಲ್ಲ. ರೈತರ ಬದುಕು ಮಾರುಕಟ್ಟೆಯಲ್ಲಿ ಅಮೌಲೀಕರಣಗೊಂಡ ಬಗೆ, ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮವನ್ನು ಮಾರುಕಟ್ಟೆ ಬಳಸಿಕೊಳ್ಳುವ ವಿಧಾನ ಈ ಕತೆ ಧ್ವನಿಸುತ್ತದೆʼ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ : ಜೂ.17ರಂದು ಕಲಬುರ್ಗಿ ವಿಭಾಗ ಯುವ ಕವಿಗೋಷ್ಠಿ: ಸಂಗಪ್ಪಾ ತೌಡಿ, ಅಜಿನ್ ನೇಳಗಿ ಆಯ್ಕೆ
ಐಕ್ಯುಎಸಿ ಸಂಯೋಜಕ ಪವನ ಪಾಟೀಲ, ಗಂಗಾಧರ ಸಾಲಿಮಠ, ರೋಷನ್ ಬಿ ಯದಲಾಪುರ, ನೀಲಮ್ಮ ಮೇತ್ರೆ, ನಾಗರಾಜ ನಾಸೆ, ಕೃಷ್ಣ ಗೌಳಿ, ಸಾಯಿರಾಜ ಪಾಟೀಲ, ಸಚಿನ್ ಬಿಡವೆ, ಎಂಡಿ ಜಬಿ, ಇಮ್ತಿಯಾಜ್ ಮೊದಲಾದವರು ಉಪಸ್ಥಿತರಿದ್ದರು. ಸ್ನೇಹಾ ರಾಜಪೂತ್ ಸ್ವಾಗತಿಸಿದರು. ಪೃಥ್ವಿ ಪಾಟೀಲ ನಿರೂಪಿಸಿದರು. ಮಹೇಶ್ವರಿ ಬಿರಾದಾರ ವಂದಿಸಿದರು.





