ರಾಜ್ಯದ ಬೆಳೆ ಸಮೀಕ್ಷೆದಾರರಿಗೆ (ಪಿಆರ್) ಕಾಯಂಗೊಳಿಸಬೇಕು ಮತ್ತು ಜೀವವಿಮೆ ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬಸವಕಲ್ಯಾಣ ಶಾಸಕ ಶರಣು ಸಲಗರ ಅವರಿಗೆ ಮನವಿ ಸಲ್ಲಿಸಿದರು.
ʼರಾಜ್ಯದಲ್ಲಿ 7-8 ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮೀಕ್ಷೆ ವೇಳೆ ಜಮೀನಿನಲ್ಲಿ ಹಾವು, ಚೇಳು ಕಚ್ಚಿರುತ್ತವೆ ಹಾಗೂ ಕಾಡು ಹಂದಿಗಳು ಕಾಟ ವಿಪರೀತವಾಗಿದೆ. ಆದರೂ ರೈತರ ಏಳಿಗೆಗಾಗಿ ಹಲವು ಜೀವ ಕೈಯಲ್ಲಿ ಹಿಡಿದು ಬೆಳೆ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆʼ ಎಂದರು.
ʼರೈತರಿಗೆ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿದಂತೆ ಹಲವು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕಲು ಅತ್ಯಂತ ನಿಷ್ಠೆ, ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಯಾರೂ ನಮ್ಮ ಸಂಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಈಗಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಬೆಳೆ ಸಮೀಕ್ಷೆದಾರರಿಗೆ ಜೀವ ವಿಮೆ, ಸೇವಾ ಭದ್ರತೆ ನೀಡಿ ಕಾಯಂಗೊಳಿಸಬೇಕೆಂದು ಬರುವ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಪರವಾಗಿ ಧ್ವನಿಯೆತ್ತಬೇಕುʼ ಎಂದು ಶಾಸಕರಿಗೆ ಮನವಿ ಮಾಡಿದರು.
ಶಾಸಕ ಶರಣು ಸಲಗರ ಅವರು ಸಕರಾತ್ಮಕವಾಗಿ ಸ್ಪಂದಿಸಿ, ʼಬೆಳೆ ಸಮೀಕ್ಷೆದಾರರ ಬಗ್ಗೆ ನನಗೆ ಕಳಕಳಿ ಇದೆ. ಹಲವು ಕಷ್ಟಗಳ ಮಧ್ಯೆಯೂ ಸಮೀಕ್ಷೆ ನಡೆಸಿ ರೈತರ ಹಿತ ಕಾಪಾಡುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಮಾತಾಡುವೆʼ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬೀದರ್ | 2026ರ ಜನವರಿ ಒಳಗೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆಗೊಳಿಸಿ : ಲಕ್ಷ್ಮಣ ದಸ್ತಿ
ಈ ಸಂದರ್ಭದಲ್ಲಿ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾಧ್ಯಕ್ಷ ಮೋಹನ ಮಾನೆ, ಜಿಲ್ಲಾ ಕಾರ್ಯದರ್ಶಿ ಲೋಕೇಶ ಕಾಂಬ್ಳೆ, ಭಾಲ್ಕಿ ತಾಲೂಕಾಧ್ಯಕ್ಷ ಏಕನಾಥ ಮೇತ್ರೆ, ಹುಲಸೂರು ತಾಲೂಕಾಧ್ಯಕ್ಷ ಪರಮೇಶ್ವರ ಬಿರಾದಾರ, ಬಸವಕಲ್ಯಾಣ ತಾಲೂಕಾಧ್ಯಕ್ಷ ಶಂಕರಲಿಂಗ, ಜಿಲ್ಲಾ ಖಜಾಂಚಿ ಮಹೇಶ ಗೋರ್ಟೆ, ದಿಲೀಪ ಗೋರ್ಟಾ, ಬಸವರಾಜ ಎಳ್ಳುರೆ, ವಿಕಾಸ ಮತ್ತಿತರರಿದ್ದರು.





