ಗದಗ ನಗರದಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸ್ಯಾಟ್ಲೈಟ್ ಮೀಡಿಯಾ ಅಸೋಸಿಯೇನ್ ಆಗ್ರಹಿಸಿದೆ.
ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಬೀದರ್ ಉಪ ವಿಭಾಗಾಧಿಕಾರಿ ಮುಹಮ್ಮದ್ ಶಕೀಲ್ ಅವರಿಗೆ ಸಲ್ಲಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಮರಕಲೆ ಮಾತನಾಡಿ, ʼಮತದಾರರ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವರದಿ ಮಾಡಲು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರ ಜನ ಸಂಪರ್ಕ ಕಚೇರಿಗೆ ಹೋಗಿದ್ದ ನ್ಯೂಸ್ ಫಸ್ಟ್ ವರದಿಗಾರ ಸುರೇಶ್ ಕಡ್ಲಿಮಟ್ಟಿ ಅವರ ಮೇಲೆ ಹಲ್ಲೆ ನಡೆಸಲಾಗಿದೆʼ ಎಂದು ತಿಳಿಸಿದರು.
ʼವಿಡಿಯೋ ಚಿತ್ರಿಕರಿಸಿ ವಾಪಸ್ ಬರುವಾಗ ವರದಿಗಾರನ ಕ್ಯಾಮೆರಾ ಕಸಿಯಲು ಯತ್ನಿಸಲಾಗಿದೆ. ಸಂಕನೂರ ವರದಿಗಾರನ ಕೈ, ಕೊರಳಪಟ್ಟಿ ಹಿಡಿದು ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಗುತ್ತದೆʼ ಎಂದು ಹೇಳಿದರು.
ಸಂಕನೂರ ಕೂಡಲೇ ಕ್ಷಮೆಯಾಚಿಸಬೇಕು. ಎಂಎಲ್ಸಿ ಎಸ್.ವಿ.ಸಂಕನೂರ ಹಾಗೂ ಅವರ ಬೆಂಬಲಿಗರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ನಾಗಮಾರಪಳ್ಳಿ ಶಾಲೆಗೆ ತಾಲೂಕು ಪಂಚಾಯತ್ ಇಒ ಭೇಟಿ
ಅಸೋಸಿಯೇಷನ್ ಗೌರವಾಧ್ಯಕ್ಷ ರಾಜಕುಮಾರ ಸ್ವಾಮಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ನಾಗರಾಳ, ಉಪಾಧ್ಯಕ್ಷರಾದ ಎಲ್.ಆರ್. ಕೃಷ್ಣ, ಸಂಜುಕುಮಾರ ಬುಕ್ಕಾ, ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ್, ಅನಿಲಕುಮಾರ ದೇಶಮುಖ, ಓಂಕಾರ ಮಠಪತಿ, ನಂದಕುಮಾರ ಕರಂಜೆ, ವಿಶ್ವಕುಮಾರ ಕಲ್ಲಾ, ಲಿಂಗರಾಜ ಮರಕಲೆ, ಶಿವಾನಂದ ಅಮರಗೋಳ, ದುರ್ಗಪ್ಪ ಹೊಸಮನಿ, ಶಿವಯ್ಯ ಮಠಪತಿ, ಕಲ್ಲಪ್ಪ ಹಳ್ಳದಕೇರಿ, ಅಮರೇಶ ಹಿರೇಮಠ, ಮಹೇಶ ಸಜ್ಜನಶೆಟ್ಟಿ, ಆಸಿಫ್ ಚಿದ್ರಿ, ಭರತ ಮರಕಲೆ, ಶರಣಯ್ಯ ಸ್ವಾಮಿ, ದೇವರಾಜ ಇದ್ದರು.





