ಕನ್ನಡ ನಾಡು ಕಂಡ ಒಬ್ಬ ಅಪರೂಪದ ಶಬ್ದ ಗಾರುಡಿಗ ದ.ರಾ. ಬೇಂದ್ರೆ ಅವರಾಗಿದ್ದು, ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟಿದ್ದರು ಎಂದು ಹಿರಿಯ ರಂಗಕರ್ಮಿ ಅನಂತ ಕೃಷ್ಣ ದೇಶಪಾಂಡೆ ನುಡಿದರು.
ಔರಾದ್ ಪಟ್ಟಣದ ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಮೂಡಲ ಬೆಳಕು-ಬೇಂದ್ರೆ ಜೀವನ ದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೇಂದ್ರೆ ಅವರ ಭೌತಿಕ ಮತ್ತು ಬೌದ್ಧಿಕ ವ್ಯಕ್ತಿತ್ವ ಅನಾವರಣಗೊಳಿಸಿದರು.
ʼಹಣೆಯಲ್ಲಿ ತಿಲಕ, ಕಣ್ಣಿಗೆ ಕನ್ನಡಕ, ತಲೆ ಮೇಲೆ ಟೋಪಿ, ಕೈದಾಗ ಛತ್ರಿ, ಜೊತೆಗೆ ಕೋಟು, ಪಂಚೆ ಹಾಕಿ ಥೇಟ್ ಬೇಂದ್ರೆ ಅವರಂತೆ ವೇಷ ತೊಟ್ಟು ಅವರ ಕಾವ್ಯಗಳು ತನ್ಮೂಲಕ ಹೇಳಿಕೊಟ್ಟ ಹಿರಿಯ ರಂಗಕರ್ಮಿ ಅನಂತ ಕೃಷ್ಣ ದೇಶಪಾಂಡೆ ಗಡಿ ಜನರಿಗೆ ಸಾಕ್ಷಾತ ದ.ರಾ ಬೇಂದ್ರೆ ಅವರ ಧಾಟಿಯಲ್ಲಿ ಮಾತನಾಡಿ ಗಮನ ಸೆಳೆದರು.
ʼಬೇಂದ್ರೆ ಅವರು ಉತ್ಸಾಹದ ಚಿಲುಮೆಯಾಗಿ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವನಗಳು ರಚನೆಗೆ ಒತ್ತು ನೀಡಿದರು. ʼರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನʼ ಎಂಬ ಅರಿವು ಮೂಡಿದರು. ನರಬಲಿ ಕವನದಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಬೇಂದ್ರೆ ಕೆಲ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದು, ಆ ಸಮಯದಲ್ಲಿ ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಎಂಬ ಕವಿತೆ ರಚಿಸಿದರುʼ ಎಂದರು.

ʼದೇಶ ಹಾಗೂ ಜನಸಾಮಾನ್ಯರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅವರು ಆಧ್ಯಾತ್ಮ ಹಾಗೂ ಕನ್ನಡದ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ತನ್ನ ʼನಾಕುತಂತಿʼ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ಬೇಂದ್ರೆ ವಿಚಾರಗಳು ಜಾತಿ, ಮತ, ಧರ್ಮ, ಪ್ರದೇಶ ಮೀರಿ ಜನರನ್ನು ಇಂದಿಗೂ ಆಕರ್ಷಿಸುತ್ತಿವೆʼ ಎಂದು ಅಭಿಮಾನ ವ್ಯಕ್ತಪಡಿಸಿದರು.
ಕಸಾಪ ತಾಲ್ಲೂಕಾಧ್ಯಕ್ಷ ಬಿ.ಎಂ. ಅಮರವಾಡಿ ಮಾತನಾಡಿ, ʼಕನ್ನಡ ಮತ್ತು ಮರಾಠಿ ಸಂಸ್ಕೃತಿಯ ಕೊಂಡಿಯಾದ ಬೇಂದ್ರೆ ಅವರ ವಿಚಾರಗಳು ಸೌಹಾರ್ದತೆ, ಸಾಮರಸ್ಯಕ್ಕೆ ಸದಾ ಆದರ್ಶವಾಗಿವೆ. ಮಾತೃಭಾಷೆ ಮರಾಠಿಯಾಗಿದ್ದರೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಧೀಮಂತ ಕವಿ ನಮ್ಮ ನೆಚ್ಚಿನ ಬೇಂದ್ರೆ ಅಜ್ಜʼ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪಿಎಚ್ಡಿ ಪದವಿ ಹೊಂದಿರುವ ಡಾ.ಶಿವಲಿಂಗ ಹೇಡೆ, ಡಾ.ಚಂದ್ರಕಾಂತ ಮೇತ್ರೆ, ಯುವರತ್ನ ಪ್ರಶಸ್ತಿ ಪುರಸ್ಕೃತ ಸುಧಾಕರ ಕೊಳ್ಳುರ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕು. ಆರಾಧ್ಯ ಅಮರವಾಡಿ ಕುರುಡು ಕಾಂಚಾಣಾ ಗೀತೆ ಪ್ರಸ್ತುತಪಡಿದಳು. ರೇಣುಕಾಸ್ವಾಮಿ ಬೇಂದ್ರೆ ಕುರಿತು ಕವನ ವಾಚನ ಮಾಡಿದರು.
ಇದನ್ನೂ ಓದಿ : ಬೀದರ್ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಪ್ರಕರಣ : ದಲಿತ ಸೇನೆ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಆರ್.ಆರ್.ಕೆ ಸಮಿತಿ ಸದಸ್ಯ ಬಸವಕುಮಾರ್ ಮೀಸೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೀಲಕುಮಾರ್ ದೇಶಮುಖ, ಕಾಲೇಜು ಪ್ರಾಚಾರ್ಯೆ ಡಾ.ಪ್ರೇಮಾ ಹೂಗಾರ, ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ, ಶಿವಶಂಕರ ಟೋಕರೆ, ಡಾ.ವೈಜಿನಾಥ ಬುಟ್ಟೆ, ಗುರುನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಅಂಬಾದಾಸ ನೆಳಗೆ, ಅಮರಸ್ವಾಮಿ ಸ್ಥಾವರಮಠ, ಗೋವಿಂದ ಪಾಟೀಲ್, ಬಾಲಾಜಿ ಹಲಬರ್ಗೆ, ಉತ್ತಮ, ಸಿಕಂದರ್ ಚವ್ಹಾಣ, ತುಳಸಿರಾಮ ಮಾನೆ, ಕೈಲಾಸಪತಿ ಕೇದಾರೆ, ರವಿ ಡೋಳೆ ಸೇರಿದಂತೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಇದ್ದರು.





