ದ್ವಿಚಕ್ರ ವಾಹನದ ಮೇಲೆ ಮೂವರು ತೆರಳುತ್ತಿದ್ದ ಅಪಘಾತ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ಮುಸ್ತಾಪುರ ಸಮೀಪ ಶನಿವಾರ ಮಾಧ್ಯಾಹ್ನ ನಡೆದಿದೆ.
ಚಿಟಗುಪ್ಪ ತಾಲೂಕಿನ ಹಳ್ಳಿಖೇಡ(ಕೆ) ವಾಡಿ ಗ್ರಾಮದವರಾದ ಸಾಯಿಕಿರಣ ಮಂಜುನಾಥ ಕಮಲಾಪುರೆ (20), ಜಗನ್ನಾಥ ರಾಜಕುಮಾರ (22) ಮೃತ ಯುವಕರು. ಘಟನೆಯಲ್ಲಿ ಗಾಯಗೊಂಡ ಕೃಷ್ಣಾ ರಾಜಕುಮಾರ ಅವರನ್ನು ಹುಮನಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಯಿಕಿರಣ ಕಮಲಾಪುರೆ ಅವರು ಕೆಲಸ ನಿಮಿತ್ತ ತಮ್ಮ ಬಜಾಜ್ ಪಲ್ಸರ್ ಬೈಕ್ ಮೇಲೆ ಸ್ನೇಹಿತ ಕೃಷ್ಣಾ ಅವರೊಂದಿಗೆ ಹುಮನಾಬಾದ್ಗೆ ತೆರಳಿದರು. ಅಲ್ಲಿ ಇನ್ನೋರ್ವ ಸ್ನೇಹಿತ ಜಗನಾಥ ಭೇಟಿಯಾದ ಬಳಿಕ ಮೂವರು ಒಂದೇ ಬೈಕ್ ಮೇಲೆ ಹಳ್ಳಿಖೇಡ(ಕೆ) ವಾಡಿ ಗ್ರಾಮದ ಕಡೆ ಹೊರಟಿದ್ದರು. ಅತಿವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಸೈನ್ ಬೋರ್ಡ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸವಾರರು ತೆಗ್ಗಿನಲ್ಲಿ ಬಿದ್ದರು. ಗಂಭೀರ ಗಾಯಗೊಂಡ ಸಾಯಿಕಿರಣ ಹಾಗೂ ಜಗನಾಥ ಸ್ಥಳದಲ್ಲಿಯೇ ಕೊನೆಯುಸಿರೆಳೆದರು.
ಇದನ್ನೂ ಓದಿ : ಊರಾಗ ಏನ ಧಂದೆ ಇಲ್ಲಾ, ಶಾರದಾಗ ದುಡಿಯಾಕ ಹೋಗ್ಯಾನ!
ಚಿಟಗುಪ್ಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.





