ಕೃಷಿಯೇತರ ಜಮೀನಿನ (ಎನ್ಎ) ನಿವೇಶನಗಳ ಮಾರಾಟದ ಅನುಮತಿಗಾಗಿ ₹10 ಲಕ್ಷ ನಗದು ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ ಸೇರಿದಂತೆ ಮೂವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ, ಸದಸ್ಯ ಚಂದ್ರಕಾಂತ ರೆಡ್ಡಿ ಹಾಗೂ ಇವರ ಆಪ್ತ ಸಿದ್ದು ಹೂಗಾರ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ನಗರದ ಚಿಕ್ಕಪೇಟೆಯಲ್ಲಿ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇ 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ, ಅವುಗಳ ಮಾರಾಟಕ್ಕೆ ಅನುಮತಿ ಕೊಡಲು ಶ್ರೀಕಾಂತ ಹಾಗೂ ಚಂದ್ರಕಾಂತ ಅವರು ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ₹10 ಲಕ್ಷ ಮುಂಗಡ ಕೊಡುವುದರ ಬಗ್ಗೆ ಮಾತುಕತೆಯಾಗಿತ್ತು. ಬೀದರ್ನ ಪ್ರತಾಪ ನಗರದ ದಾಲ್ಮಿಲ್ ಸಮೀಪ ಶ್ರೀಕಾಂತ ಹಾಗೂ ಚಂದ್ರಕಾಂತ ಅವರ ಆಪ್ತ ಸಿದ್ದು ಹೂಗಾರ ಎಂಬಾತ ₹10 ಲಕ್ಷ ನಗದು ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ, ನಗದು ಹಣದೊಂದಿಗೆ ವಶಕ್ಕೆ ಪಡೆಯಲಾಯಿತು. ಆನಂತರ ಶ್ರೀಕಾಂತ ಹಾಗೂ ಚಂದ್ರಕಾಂತ ಅವರನ್ನೂ ವಶಕ್ಕೆ ಪಡೆಯಲಾಗಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅದಾನಿ ಬಂಧನ ಏಕಿಲ್ಲ, ಅವರನ್ನು ರಕ್ಷಿಸುತ್ತಿರುವವರು ಯಾರು: ಸಿದ್ದರಾಮಯ್ಯ ಪ್ರಶ್ನೆ
ರಿಯಲ್ ಎಸ್ಟೇಟ್ ಉದ್ಯಮಿ ಸತೀಶ ನೌಬಾದೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಕಲಬುರಗಿ ಲೋಕಾಯುಕ್ತ ಎಸ್ಪಿ ಉಮೇಶ ಬಿ.ಕೆ. ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಹಣಮಂತರಾಯ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸಂತೋಷ ರಾಠೋಡ್, ಬಾಬಾಸಾಹೇಬ್ ಪಾಟೀಲ, ಅರ್ಜುನಪ್ಪ, ಸಿಬ್ಬಂದಿ ವಿಷ್ಣುರಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪ, ವಿಜಯಶೇಖರ, ಅಡೆಪ್ಪ, ಕಿಶೋರಕುಮಾರ, ಕುಶಾಲ, ಭರತ, ಶುಕ್ಲೋಧನ, ಸುವರ್ಣಾ ಪಾಲ್ಗೊಂಡಿದ್ದರು.





