ʼಇಂದು ದೇಶದಲ್ಲಿ ಮನುವಾದ, ಅಸಮಾನತೆ, ಸಂವಿಧಾನ ವಿರುದ್ಧ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ಸರ್ಕಾರಗಳಿಂದಲೇ ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಭಾನುಪ್ರತಾಪ ಸಿಂಗ್ ಹೇಳಿದರು.
ʼಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಬೀದರ್ ಜಿಲ್ಲಾ ಘಟಕದಿಂದ ನಾಗಪುರದ ದೀಕ್ಷಾಭೂಮಿ ಕಾರ್ಯಕ್ರಮದ ಅಂಗವಾಗಿ ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬಹುಜನ ಜಾಗೃತಿ ಸಮಾವೇಶ ಹಾಗೂ ರಾಜ್ಯಮಟ್ಟದ ಬುದ್ಧ, ಭೀಮ ಗೀತೆಗಳ ಭಜನೆ ಸಂಗೀತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ʼಶಾಂತಿ, ಸಮಾನತೆ, ಬಂಧುತ್ವ ಮರು ನಿರ್ಮಾಣ ಮಾಡಲು ದೇಶದ ಬಹುಜನರು ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿಸಿದ ತಥಾಗತ ಗೌತಮ ಬುದ್ಧನ ಬೌದ್ಧ ಧರ್ಮ ಸ್ವೀಕರಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ಮನುವಾದ ದೇಶದಿಂದ ಶಾಶ್ವತವಾಗಿ ನಿರ್ನಾಮ ಮಾಡಲು ಸಾಮೂಹಿಕ ಹೋರಾಟದ ಅವಶ್ಯಕತೆ ಇದೆʼ ಎಂದರು.
ʼಬಹುಜನರು ದೇಶವನ್ನು ಗೌರವಿಸುವಾಗ ಭಾರತ ಅಥವಾ ಇಂಡಿಯಾ ಎಂದು ಮಾತ್ರ ಹೇಳಬೇಕು. ಹಿಂದುಸ್ತಾನ ಪದ ಬಳಸಬಾರದು. ಸಂವಿಧಾನದಲ್ಲಿ ಸಹ ಅವಕಾಶ ಇಲ್ಲ ಎಂದು ಹೇಳಿದ ಅವರು ಡಾ.ಅಂಬೇಡ್ಕರ್ ರವರು ಸಾಕಷ್ಟು ನೋವು ಸಹಿಸುಕೊಂಡು ನಮ್ಮೆಲರಿಗೆ ಸಂವಿಧಾನದ ಮೂಲಕ ಮುಕ್ತಿ ನೀಡಿದ್ದಾರೆ. ಸಂವಿಧಾನ ಸಂಪೂರ್ಣ ಅನುಷ್ಠಾನ ಆಗಬೇಕಾದರೆ ಬಹುಜನರು ರಾಜಕೀಯವಾಗಿ ಮುಂದೆ ಬರಬೇಕಿದೆʼ ಎಂದರು.
ಈಚೆಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಮನುವಾದಿ ಹಿನ್ನೆಲೆಯ ರಾಕೇಶ ಕಿಶೋರ್ ಎಂಬ ವಕೀಲನೊಬ್ಬ ಶೂ ಎಸೆದಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಮನುವಾದಿಗಳ ದೊಡ್ಡ ಷಡ್ಯಂತ್ರವಿದೆ. ಇದಕ್ಕೆ ಭಾರತೀಯ ಪ್ರತಿಯೊಬ್ಬ ನಾಗರಿಕರೂ ಖಂಡಿಸಲೇಬೇಕುʼ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಭಂತೆ ಜ್ಞಾನ ಸಾಗರ ಸಾನಿಧ್ಯ ವಹಿಸಿದರು. ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕಾಂಚೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡರಾದ ವೈಜಿನಾಥ ಸೂರ್ಯವಂಶಿ, ನ್ಯಾಯವಾದಿ ಬಿ.ಕೃಷ್ಣಪ್ಪ, ವಿಶ್ವನಾಥ ದೀನೆ, ವಿಜಯಕುಮಾರ್ ಸೋನಾರೆ, ದಯಾನಂದ ನೌಲೆ, ಡಾ.ಅಮೃತ ಎಸ್.ಮೊಳಕೇರೆ, ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ಪ್ರಕಾಶ ಠಾಕೂರ್, ಮಹೇಶ ಗೋರನಾಳಕರ್, ಬಬ್ರವಾನ್ ಬೆಳಮಗಿ, ಸಂಜುಕುಮಾರ ಡಾಕುಳಗಿ, ಕಂಟೆಪ್ಪಾ ಪೂಜಾರಿ, ಸುರೇಶ ಜೋಜನಾಕರ್, ರಾಜಕುಮಾರ ಗೂನಳ್ಳಿ, ಮಲ್ಲಿಕಾರ್ಜುನ ಮಹೇಂದ್ರಕುಮಾರ, ರಾಜಕುಮಾರ ಕಾಂಬಳೆ, ನರಸಿಂಗ್ ಸಾಮ್ರಾಟ, ಘಾಳೆಪ್ಪಾ ಮೈಲೂರೆ, ಗೋಪಲರಾವ ಹೊಸಮನಿ, ಸತೀಶಕುಮಾರ ದೀನೆ ಮತ್ತಿತರರಿದ್ದರು.
ಇದನ್ನೂ ಓದಿ : ಬೀದರ್ | ಮಾಧ್ಯಮಗಳ ಪ್ರಾಮಾಣಿಕತೆ-ಬದ್ಧತೆಯಿಂದ ಸಾಮಾಜಿಕ ಏಳಿಗೆ ಸಾಧ್ಯ : ಡಾ.ಪ್ರಹ್ಲಾದ ಚೆಂಗಟಿ
ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿಯ ಅರ್ಜುನ ಕಾಂಚೆ ಸ್ವಾಗತ ಗೀತೆ ನಡೆಸಿಕೊಟ್ಟರು. ಸೂರ್ಯಕಾಂತ ಬಡಿಗೆರ್ ಸ್ವಾಗತಿಸಿದರು. ಕರ್ನಾಟಕ ದಲಿತ ರಕ್ಷಣಾ ವೆದಿಕೆ ಅಧ್ಯಕ್ಷ ಅಂಬಾದಾಸ ಗಾಯಕವಾಡ ನಿರೂಪಿಸಿದರು. ರೇಖಾ ಕಾಂಚೆ ವಂದಿಸಿದರು.





