ಕೇಂದ್ರ ಸರ್ಕಾರವು ಗೊಂಡಕುರುಬ, ಕುರುಬಗೊಂಡ ಎರಡೂ ಪರ್ಯಾಯ ಪದಗಳು ಎಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಗೊಂಡ ಸಮಾಜದ ಮುಖಂಡ ಮಾಳಪ್ಪ ಅಡಸಾರೆರವರ ನೇತೃತ್ವದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕೇಂದ್ರ ಸಚಿವರುಗಳಾದ ಭಗವಂತ ಖೂಬಾ ಹಾಗೂ ಪ್ರಲ್ಹಾದ್ ಜೋಷಿರವರನ್ನು ಮಂಗಳವಾರ ಬೆಳಿಗ್ಗೆ ನವದೆಹಲಿಯಲ್ಲಿ ಭೇಟಿಯಾದ ನಿಯೋಗ, ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಬರುವ ಗೊಂಡ ಸಮಾಜವು ಗೊಂಡಕುರುಬ, ಕುರುಬಗೊಂಡ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹಾಗಾಗಿ ಗೊಂಡಕುರುಬ, ಕುರುಬಗೊಂಡ ಎಂಬ ಎರಡು ಪದಗಳು ಒಂದೇ ಎಂದು ಪರಿಗಣಿಸಬೇಕು” ಎಂದು ಮನವಿ ಮಾಡಿತು.
ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಗೊಂಡ ಸಮಾಜದ ಜನರಿದ್ದು, ಕೆಲವು ಕಡೆಗಳಲ್ಲಿ ಗೊಂಡಕುರುಬ ಎನ್ನಲಾಗುತ್ತಿದೆ. ಇನ್ನೂ ಕೆಲವು ಕಡೆ ಕುರುಬಗೊಂಡ ಎಂದು ಕರೆಯಲಾಗುತ್ತದೆ. ಎರಡೂ ಪದಗಳು ಗೊಂಡ ಸಮಾಜದ ಪರ್ಯಾಯ ಪದಗಳಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಗೊಂಡ ಸಮಾಜದ ನಿಯೋಗ ಮನವಿ ಸಲ್ಲಿಸಿದ್ದು, ಸರ್ಕಾರ ಈವರೆಗೂ ಈ ವಿಷಯದಲ್ಲಿ ಆದೇಶ ಹೊರಡಿಸಿಲ್ಲ.
ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಭಾಗದಲ್ಲಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಎರಡು ಪರ್ಯಾಯ ಪದಗಳೆಂದು ಪರಿಗಣಿಸಿ, ಶೀಘ್ರದಲ್ಲೇ ಆದೇಶ ಹೊರಡಿಸಬೇಕೆಂದು ಬರೆದಿದ್ದ ಮನವಿ ಪತ್ರವನ್ನು ಗೊಂಡ ಸಮಾಜದ ನಿಯೋಗ ಕೇಂದ್ರ ಸಚಿವರಿಗೆ ಸಲ್ಲಿಸಿತು.
ಈ ಸುದ್ದಿ ಓದಿದ್ದೀರಾ? ಮಳೆ ಹಾನಿಯಿಂದ ಮನೆ ಬಿದ್ದರೆ ಹಕ್ಕು ಪತ್ರ ನೋಡದೆ 5 ಲಕ್ಷ ರೂ. ಪರಿಹಾರ ನೀಡಿ: ಸಿಎಂ ಸಿದ್ದರಾಮಯ್ಯ ಸೂಚನೆ
“ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸುವ ವಿಶ್ವಾಸವಿದೆ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಷ್ಟು ಬೇಗ ಆದೇಶ ಹೊರಬರುವ ಸಾಧ್ಯತೆಯಿದೆ” ಎಂದು ನಿಯೋಗದ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಗೊಂಡ ಸಮಾಜದ ಮುಖಂಡ ಮಾಳಪ್ಪ ಅಡಸಾರೆ ಇದ್ದರು.




