ಬೀದರ್ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರ ಜಮೀನುಗಳು ಜಲಾವೃತಗೊಂಡಿವೆ.
ಶುಕ್ರವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಖಡಕ್ ಬಿಸಿಲಿನೊಂದಿಗೆ ಮೋಡ ಬಯಲಾಯಿತು. ಪುನಃ ರಾತ್ರಿಯಿಂದ ಬಿರುಸಿನ ಮಳೆ ಆರಂಭವಾಯಿತು.
ಇಂದು (ಶನಿವಾರ) ಬೆಳಿಗ್ಗೆಯಿಂದ ದಟ್ಟ ಕಾರ್ಮೋಡ ಕವಿದಿದ್ದು, ಜಿಟಿ ಜಿಟಿ ಮಳೆ, ಕೆಲವೊಮ್ಮೆ ಜೋರು ವರ್ಷಧಾರೆ ಆಗುತ್ತಿದೆ. ಇದರಿಂದಾಗಿ ವಾತಾವರಣ ಸಂಪೂರ್ಣ ತಂಪಾಗಿದ್ದು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಿದರು. ಬೈಕ್ ಸವಾರರು ಹೊರಗಡೆ ಹೋಗಲು ಯೋಚಿಸುವಂತಾಗಿದೆ.
ಮಳೆಗೆ ನೀರಿನ ಹರಿವು ಹೆಚ್ಚಾದ ಪರಿಣಾಮ ಕಮಲನಗರ ತಾಲೂಕಿನ ಕೋರಿಯಾಳ-ಬಸನಾಳ ಗ್ರಾಮಗಳ ಮಧ್ಯೆದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಜನರು ಸೇತುವೆ ಮೇಲಿಂದ ತೆರಳಲು ತೊಂದರೆಯಾಗಿದೆ. ಹೊಸ ಸೇತುವೆ ನಿರ್ಮಿಸಬೇಕೆಂದು ಎಂದು ಬಸವನಾಳ ಗ್ರಾಮದ ರೈತ ಸದಾನಂದ ಪಾಟೀಲ್ ಆಗ್ರಹಿಸಿದರು.

ಸತತ ಮಳೆಯಿಂದ ಜಿಲ್ಲೆಯ ಹಲವೆಡೆ ರೈತರ ಜಮೀನುಗಳಲ್ಲಿ ನೀರು ನಿಂತಿದೆ. ಇದರಿಂದ ಸೋಯಾಅವರೆ, ಉದ್ದು, ಹೆಸರು ಸೇರಿದಂತೆ ಇತರೆ ಬೆಳೆ ಹಾನಿಯಾಗುತ್ತದೆ ಎಂದು ಆತಂಕಗೊಂಡಿದ್ದಾರೆ. ಇನ್ನು ಕೆಲವು ಕಡೆ ಕಟಾವಿಗೆ ಬಂದ ಹೆಸರು ಬೆಳೆ ಮಳೆಯಿಂದ ಹಾನಿಯಾಗುವ ಸಾಧ್ಯತೆಯಿದ್ದು, ರೈತರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಲೋಕೇಶ ಗೊಂಡ ಹೇಳುತ್ತಾರೆ.
ಇದನ್ನೂ ಓದಿ : ಬೀದರ್ | ಈದಿನ ಫಲಶೃತಿ: ವಿಕಲಚೇತನ ಸಹೋದರಿಯರ ಮನೆಗೆ ದೌಡಾಯಿಸಿದ ಅಧಿಕಾರಿಗಳು; ಮಾಸಾಶನದ ಭರವಸೆ





