ʼಹತ್ತು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೆಸರು, ಉದ್ದು, ತೊಗರಿ ಬೆಳೆ ಮಾಂಜ್ರಾ ನದಿ ಪ್ರವಾಹದಿಂದ ಪೂರ್ತಿ ಬರ್ಬಾದ್ ಆಗಿದೆ. ಬಿತ್ತನೆ, ಗೊಬ್ಬರಕ್ಕಾಗಿ ₹2 ಲಕ್ಷ ಖರ್ಚಾಗಿದೆ, ₹6 ಲಕ್ಷಕ್ಕೂ ಅಧಿಕ ಮೌಲ್ಯದ ಇಳುವರಿ ನೀರು ಪಾಲಾಗಿದೆ. ಬೆಳೆ ಸತ್ಯನಾಶ ಆದ್ಮೇಲೆ ನಮ್ಮ ಜಿಂದಗಿ ಕೂಡ ಹೋದ್ಹಾಂಗೇʼ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತ ಅಶೋಕ ಭುಯ್ಯಾ
ಆಗಸ್ಟ್ ತಿಂಗಳಲ್ಲಿ ಜಿಲ್ಲಾಯಾದ್ಯಂತ ಸುರಿದ ವ್ಯಾಪಕ ಮಳೆಯಿಂದ ಜಿಲ್ಲೆಯ ಜಲಾಶಯ, ನದಿಗಳು ಬಹುತೇಕ ಭರ್ತಿಯಾಗಿ ಮೈದುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಿಂದ ಹರಿಯುವ ಮಾಂಜ್ರಾ ನದಿ ಪ್ರವಾಹ, ಜಿಲ್ಲೆಯ ಔರಾದ್, ಕಮಲನಗರ, ಹುಲಸೂರ, ಬೀದರ್ ಹಾಗೂ ಭಾಲ್ಕಿ ತಾಲೂಕಿನ ರೈತರ ಬದುಕು ನುಚ್ಚು ನೂರು ಮಾಡಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಾರಂಜಾ ಜಲಾಶಯ, ಚುಳುಕಿನಾಲಾ ನೀರಿನ ಪ್ರವಾಹ ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದೆ.

ಭಾರಿ ಮಳೆಯಿಂದ ಹಾನಿಗೀಡಾದ ಕೆಲ ಪ್ರದೇಶಗಳಿಗೆ ʼಈದಿನ.ಕಾಮ್ʼ ತಂಡ ಗ್ರೌಂಡ್ ರಿಪೋರ್ಟ್ಗೆ ತೆರಳಿದ ವೇಳೆ ಹಲವು ಗ್ರಾಮಗಳ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಉದ್ದು, ಹೆಸರು, ಸೋಯಾಬಿನ್, ತೊಗರಿ, ಹತ್ತಿ ಬೆಳೆಗಳು ಪ್ರವಾಹದಿಂದ ಕೊಚ್ಚಿಹೋದ ಬಗ್ಗೆ ತೋರಿಸಿ, ರೈತನ ದುಸ್ಥಿತಿ ಬಗ್ಗೆ ವಿವರಿಸಿದರು.
ಇನ್ನೇನು ಕಟಾವಿನ ಹಂತದಲ್ಲಿದ್ದ ಹೆಸರು, ಉದ್ದು ಭಾರಿ ಪ್ರಮಾಣದಲ್ಲಿ ಬಂದ ಪ್ರವಾಹದ ಹೊಡೆತಕ್ಕೆ ಕೊಚ್ಚಿಹೋಗಿದೆ. ನದಿ ಪಾತ್ರದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದ್ದ ಐದಾರು ಅಡಿ ಎತ್ತರದ ಕಬ್ಬಿನ ತೋಟ, ಕೃಷಿ ಬೆಳೆಗಳ ಹೊಲಗಳ ಸುತ್ತಲೂ ಅಪಾರ ಪ್ರಮಾಣದ ನೀರು ನುಗ್ಗಿ ಜಲಾವೃತಗೊಂಡಿದೆ. ಜಮೀನಿನಲ್ಲಿ ಅಳವಡಿಸಲಾಗಿದ್ದ ಮೋಟಾರ್, ಪೈಪ್ಲೈನ್, ವಿದ್ಯುತ್ ಕಂಬ ನೀರಿನಲ್ಲಿ ಮುಳುಗಿ ತೇಲುತ್ತಿವೆ.
ಔರಾದ್ ತಾಲೂಕಿನ ಬಾಬಳಿ, ಧುಪತಮಹಾಗಾಂವ್, ಕೌಠಾ(ಬಿ), ಮಣಗೆಂಪುರ ಗ್ರಾಮಗಳಿಗೆ ಭೇಟಿ ನೀಡಿದಾಗ ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಹೆಸರು, ಸೋಯಾಬಿನ್, ತೊಗರಿ ಬೆಳೆಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿರುವ ದೃಶ್ಯಗಳು ಕಂಡು ಬಂದವು.

ʼಐದು ಎಕರೆಯಲ್ಲಿ ಹೆಸರು ಬೆಳೆದಿದ್ದೆ, ಕಟಾವು ಮಾಡಿ ಮಷೀನ್ ಮೂಲಕ ರಾಶಿಯೂ ಮಾಡಲಾಗಿತ್ತು. ಇನ್ನೇನು ಚೀಲ ತುಂಬಿ ಮನೆಗೆ ಕೊಂಡೊಯ್ಯಬೇಕು ಎನ್ನುವಷ್ಟ್ರರಲ್ಲಿ ಶುರುವಾದ ಧಾರಾಕಾರ ಮಳೆ ಮೂರು ದಿನಕಾಲ ಎಡೆಬಿಡದೆ ಸತತ ಸುರಿಯಿತು. ಮನೆಗೆ ತರಲಾಗದೆ ರಾಶಿ ಕಣದಲ್ಲೇ ಮುಚ್ಚಿಟ್ಟಿದ್ದ ಹೆಸರು ಕಾಳು ಸಂಪೂರ್ಣ ತೊಯ್ದು ಹಾಳಾಯ್ತು. ಏನಿಲ್ಲಾಂದ್ರೆ ₹5 ಲಕ್ಷ ಮೌಲ್ಯದ 50 ಕ್ವಿಂಟಾಲ್ ಹೆಸರು ಪೂರ್ತಿ ಕೊಳೆತು ಹಾಳಾಗಿದ್ದು ಬರಸಿಡಿಲು ಬಡಿದಂತಾಗಿದೆʼ ಎಂದು ಮಳೆ ಅವಾಂತರ ಬಗ್ಗೆ ವಿವರಿಸಿದ ರೈತ ಶಿವರಾಜ ಪರಶೆಟ್ಟೆ, ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ʼಇರೋ ಎರಡು ಎಕರೆ ಜಮೀನಿನಲ್ಲಿ ಹೆಸರು ಬೆಳೆದಿದ್ದೆ, ಜಮೀನು ಆದಾಯವೇ ನಮ್ಮ ಕುಟುಂಬಕ್ಕೆ ಆಧಾರ. ಆದರೆ, ಈಗ ಮಾಂಜ್ರಾ ನದಿಯ ನೀರಿನ ಹರಿವು ಹೆಚ್ಚಳದಿಂದ ಜಮೀನು ಜಲಾವೃತವಾಗಿದೆ. ಬೀಜ ಗೊಬ್ಬರಕ್ಕೆ ಹಾಕಿದ ಖರ್ಚು ಬಾರದಂತಹ ಸ್ಥಿತಿ ಇದೆ. ಫಲವತ್ತಾದ ಮಣ್ಣು ಕೊಚ್ಚಿಹೋಗುತ್ತಿರುವ ಕಾರಣ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ನೀಡುವ ಅಲ್ಪ ಬೆಳೆ ಪರಿಹಾರದಿಂದ ಬದುಕು ದೂಡುವುದೂ ಕಷ್ಟ ಎಂಬಂತಾಗಿದೆʼ ಎಂದು ಇಡೀ ಜಮೀನು ತುಂಬೆಲ್ಲ ನೀರು ನಿಂತಿರುವುದನ್ನು ತೋರಿಸುತ್ತಾ ರೈತರೊಬ್ಬರು ತಮ್ಮ ನೋವು ಹೇಳತೊಡಗಿದರು.
ಎರಡು ದಿನದಿಂದ ಮಳೆ ಬಿಡುವು ಕೊಟ್ಟರೂ ನೀರಿನ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ರಸ್ತೆ ಪಕ್ಕದ ಕೆಲ ರೈತರು ಮಳೆ, ಪ್ರವಾಹ ನೀರಿನಿಂದ ರಕ್ಷಿಸಿಕೊಂಡಿದ್ದ ಹೆಸರಿನ ಬೆಳೆಯನ್ನು ಕಾರ್ಮಿಕರಿಂದ ಕಟಾವು ಮಾಡಿಸುವ ಭರದಲ್ಲಿ ತೊಡಗಿದ್ದಾರೆ. ಎಲ್ಲೆಡೆ ಜಮೀನಿನಲ್ಲಿ ಮೊಳಕಾಲುದ್ದ ಕೆಸರು ಇರುವುದರಿಂದ ಟ್ರ್ಯಾಕ್ಟರ್, ರಾಶಿ ಮಾಡುವ ಮಷೀನ್ ಹೋಗಲಾಗದೇ ರಸ್ತೆ ಮೇಲೆ ನಿಂತ ಮಷೀನ್ಗೆ ಬೆಳೆ ತಂದು ಹಾಕಿ ರಾಶಿ ಮಾಡಿಕೊಳ್ಳುವ ಗಡಿಬಿಡಿಯಲ್ಲಿ ರೈತರು ನಿರತರಾಗಿದ್ದರು.

ಜಿಲ್ಲೆಯಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಲ್ಲಿ ಅತಿ ಹೆಚ್ಚು ಔರಾದ್, ಕಮಲನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಔರಾದ್, ಕಮಲನಗರ, ಭಾಲ್ಕಿ ಹಾಗೂ ಬೀದರ್ ತಾಲೂಕಿನಲ್ಲಿಯೇ ಮಳೆ-ಪ್ರವಾಹದಿಂದ ಅಧಿಕ ಬೆಳೆ ಹಾನಿಯಾಗಿದೆ. ಮಳೆಯ ಆರ್ಭಟಕ್ಕೆ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ್ದ ಸೇತುವೆ, ರಸ್ತೆಗಳು ಬಹುತೇಕ ಭಾಗ ಕಿತ್ತು ಹೋಗಿವೆ. ಕೃಷಿ, ತೋಟಗಾರಿಕೆ ಬೆಳೆ ನೀರು ಪಾಲಾಗಿದೆ. ನಿರೀಕ್ಷಿತ ಫಸಲು ಕಳೆದುಕೊಂಡ ರೈತನಿಗೆ ದಿಕ್ಕು ತೋಚದಂತಾಗಿದೆ.
ಎಕರೆಗೆ ₹25 ಸಾವಿರ ಪರಿಹಾರ ಕೊಡಿ :
ʼಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ವ್ಯಾಪಕ ವರ್ಷಧಾರೆಗೆ ರೈತರು ಬೆಳೆದಿದ್ದ ಮುಂಗಾರು ಬೆಳೆ ಸಂಪೂರ್ಣ ನೆಲಕಚ್ಚಿದೆ. ಇನ್ನು ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ನೀರು ಹರಿಸಿದ್ದರಿಂದ ಮಾಂಜ್ರಾ ನದಿ ಪ್ರವಾಹ ಹೆಚ್ಚಳವಾಗಿ ಜಮೀನು ಮುಳುಗಡೆಯಾಗಿವೆ. ಕಾರಂಜಾ, ಚುಳುಕಿನಾಲಾ ಜಲಾಶಯಗಳ ಸುತ್ತಲಿನ ಪ್ರದೇಶದಲ್ಲಿ ಬೆಳೆ ನೀರಿನ ರಭಸಕ್ಕೆ ನಾಶವಾಗಿದೆ. ಸಾಲ ಶೂಲ ಮಾಡಿ ಬಿತ್ತನೆ, ಗೊಬ್ಬರಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ರೈತನಿಗೆ ಇದೀಗ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕುʼ ಎಂದು ರೈತ ಪ್ಯಾರುಸಾಬ್ ಒತ್ತಾಯಿಸಿದರು.

ʼಪ್ರಕೃತಿ ವಿಕೋಪ ಸಂದರ್ಭದಲ್ಲಿ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಬೆಳೆ ವಿಮೆ ಮೂಲಕ ರೈತರು ಸ್ಥಿರ ಆದಾಯ ಪಡೆದುಕೊಳ್ಳಲಿ ಎಂದು ಸರ್ಕಾರ ವಿಮಾ ಯೋಜನೆ ಜಾರಿಗೊಳಿಸಿದೆ. ಆದರೆ ಬೆಳೆ ವಿಮೆ ನೋಂದಣಿ ಹಾಗೂ ಪಾವತಿಗೆ ಇರುವ ತಾಂತ್ರಿಕ ತೊಡಕುಗಳಿಂದ ಅನೇಕ ರೈತರಿಗೆ ʼಬೆಳೆ ವಿಮೆʼ ಕೈಸೇರುತ್ತಿಲ್ಲʼ ಎಂದು ರೈತ ಮುಖಂಡ ವಿಶ್ವನಾಥ ಧರಣೆ ಆಕ್ರೋಶ ವ್ಯಕ್ತಪಡಿಸಿದರು.
ʼಬೆಳೆ ವಿಮೆ ಎಂಬುದೇ ರೈತರ ಪಾಲಿಗೆ ಒಂದು ದೊಡ್ಡ ವಂಚನೆ. ಇದರಲ್ಲಿ ಪಾರದರ್ಶಕತೆ ಇಲ್ಲ, ವಿಮಾ ಕಂಪನಿಗಳು ರೈತರಿಂದ ಪ್ರೀಮಿಯಂ ಹಣ ಪಡೆದುಕೊಂಡು ಲಾಭ ಮಾಡಿಕೊಳ್ಳುತ್ತವೆ. ಆದರೆ, ರೈತರಿಗೆ ಸರಿಯಾಗಿ ಪರಿಹಾರ ನೀಡುವುದಿಲ್ಲ, ವಿಮಾ ಯೋಜನೆಯಿಂದ ರೈತರಿಗೆ ಅನಾನುಕೂಲವೇ ಆಗಿದೆ’ ಎಂದು ಬೇಸರ ಹಾಕಿದರು.
ʼಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ಗೆ ₹50 ಸಾವಿರ ಪರಿಹಾರ ಒದಗಿಸಬೇಕು. ರಾಜ್ಯ ಸರ್ಕಾರ ಪರಿಹಾರ ಹಣ ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಹಿಂಗಾರು ಹಂಗಾಮಿಗೆ ಕಡಲೆ, ಗೋಧಿ, ಕುಸುಬೆ, ಜೋಳದ ಬೀಜಗಳನ್ನು ಉಚಿತವಾಗಿ ವಿತರಿಸಬೇಕುʼ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ.

ಸಚಿವರು ಏನಂತಾರೆ?
ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 4.21 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ಸುರಿದ ಸತತ ಮಳೆಗೆ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ಗೂ ಅಧಿಕ ಬೆಳೆ ಹಾನಿಯಾಗಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಿಯಮಾವಳಿಯಂತೆ ಸಮೀಕ್ಷೆ ನಡೆಸಿದ್ದು, ಪ್ರಾಥಮಿಕ ಅಂದಾಜು ಪ್ರಕಾರ ಮಳೆಯಿಂದ ₹500 ಕೋಟಿಯಷ್ಟು ಹಾನಿಯಾಗಿದೆ. ಈ ಕುರಿತುಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಧಾರಾಕಾರ ಮಳೆಯಾಗಿಹಾನಿಗೀಡಾದ ಬೆಳೆ, ಮನೆ, ಮೂಲಸೌಕರ್ಯಕ್ಕೆ ₹100 ಕೋಟಿ ವಿಶೇಷ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇದನ್ನೂ ಓದಿ : ಹವಾಮಾನ | ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತತ್ಕ್ಷಣದ ಪರಿಹಾರವಾಗಿ ₹50 ಕೋಟಿ ಅನುದಾನ ನೀಡಿದ್ದಾರೆ. ಇನ್ನೂ ₹100 ಕೋಟಿ ಹೆೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಪೌರಾಡಳಿ ಸಚಿವ ರಹೀಂ ಖಾನ್ ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




