ಔರಾದ್ ತಾಲ್ಲೂಕಿನಲ್ಲಿ ಅಕ್ಟೋಬರ್ 7ರಂದು ನಡೆದ ಆರ್ಎಸ್ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ನೌಕರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಲಿತ ಸೇನೆ ಮುಖಂಡರು ಕಲಬುರಗಿಯ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ದಲಿತ ಸೇನೆಯ ತಾಲೂಕಾಧ್ಯಕ್ಷ ಸುನೀಲ ಮಿತ್ರಾ, ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ, ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾಧ್ಯಕ್ಷ ಆನಂದ ಕಾಂಬಳೆ, ದಲಿತ ಸೇನೆಯ ಉಪಾಧ್ಯಕ್ಷ ಉಮಾಕಾಂತ ಸೋನೆ ಅವರು ಲಿಖಿತ ದೂರು ಸಲ್ಲಿಸಿದ್ದಾರೆ. ಅದರ ಪ್ರತಿಗಳನ್ನು ಪ್ರತ್ಯೇಕವಾಗಿ ಶಿಕ್ಷಣ ಸಚಿವರಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಅವರಿಗೂ ಸಲ್ಲಿಸಿದ್ದಾರೆ.
ʼಯಾವುದೇ ಸರ್ಕಾರಿ ನೌಕರರು ರಾಜಕೀಯ ಹಾಗೂ ಧಾರ್ಮಿಕ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಆದರೆ ತಾಲೂಕಿನ ಕೆಲ ಶಿಕ್ಷಕರು ಆರ್ಎಸ್ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು, ಅಂತಹ ಶಿಕ್ಷಕರ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇದು ಸರ್ಕಾರದ ಸೇವಾ ನಿಯಮಗಳ ವಿರುದ್ಧವಾಗಿದೆʼ ಎಂದು ದೂರಿದರು.
ಆರ್ಎಸ್ಸ್ ಪಥ ಸಂಚಲನದಲ್ಲಿ ಔರಾದ್ ತಾಲೂಕಿನ ಶಿಕ್ಷಕರಾದ ಶಾಲಿವಾನ್ ಉದಗಿರೆ, ಮಹಾದೇವ ಚಿಟಗಿರೆ ಹಾಗೂ ಪ್ರಕಾಶ ಬರದಾಪುರೆ ಭಾಗವಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಅವರ ವಿರುದ್ಧ ಸರ್ಕಾರದ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಶೌಚಾಲಯ ನಿರ್ಮಿಸದೆ ಅನುದಾನ ದುರ್ಬಳಕೆ : ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹ





