ಪ್ರತಿ ಟನ್ ಕಬ್ಬಿಗೆ ₹3,100 ದರ ಕೊಡಲೇಬೇಕೆಂದು ಆಗ್ರಹಿಸಿ ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಾರ್ಯಾಲಯ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತ್ರತ್ವದ ತಂಡ ಶನಿವಾರ ಭೇಟಿ ನೀಡಿ ಹೋರಾಟ ರೈತರ ಹೋರಾಟಕ್ಕೆ ಬೆಂಬಲಿಸಿತು.
ಬಳಿಕ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ʼರಾಜ್ಯದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ಬೆಳಗಾವಿಯಲ್ಲಿ ಆರಂಭಿಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಟನ್ ಕಬ್ಬಿಗೆ 3100 ಬೆಲೆ ನಿಗದಿಪಡಿಸಿದೆ. ಅದರಂತೆ ಬೀದರ್ ಜಿಲ್ಲೆಯಲ್ಲಿಯೂ ಬೆಲೆ ನೀಡಬೇಕು. ಆದರೆ ರಿಕವರಿ ಕಡಿಮೆ ನೆಪವೊಡ್ಡಿ ಬೆಲೆ ನೀಡದಿರುವುದು ಕಬ್ಬು ಬೆಳಗಾರರಿಗೆ ಮೋಸ ಮಾಡಿದಂತೆ ಆಗುತ್ತದೆʼ ಎಂದರು.
ಜಿಲ್ಲಾಡಳಿತವು ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮೂರು ಸಭೆಗಳು ವಿಫಲವಾಗಿರುವ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯ ಬಂದಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ರೈತರಿಗೆ ಮೋಸ ಆಗದಂತೆ ಬೆಲೆ ನೀಡಿ ನ್ಯಾಯ ಒದಗಿಸಬೇಕು. ಈ ಹೋರಾಟಕ್ಕೆ ರಾಜ್ಯ ಘಟಕ ಸಂಪೂರ್ಣವಾಗಿ ಬೆಂಬಲಿಸುತ್ತದೆʼ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ʼಈ ಬಾರಿ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆದಿದ್ದ ಉದ್ದು, ಹೆಸರು, ತೊಗರಿ, ಸೋಯಾಬಿನ್ ಸೇರಿ ಇತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಒಂದಿಷ್ಟು ಕಬ್ಬು ಬೆಳೆ ಕೈಗೆ ಬಂದಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಕಾರ್ಖಾನೆ ಮಾಲೀಕರು ಕಬ್ಬಿಗೆ ಬೆಂಬಲ ನೀಡಲು ಒಪ್ಪದಿರುವುದು ನೋವಿನ ಸಂಗತಿʼ ಎಂದರು.
ʼಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಲೆ ಜಿಲ್ಲೆಯ ರೈತರಿಗೂ ದೊರಕಬೇಕು. ಆದರೆ, ಜಿಲ್ಲಾಡಳಿತ, ಕಾರ್ಖಾನೆ ಮಾಲೀಕರು ಅದಕ್ಕೆ ಒಪ್ಪದೆ ತಾರತಮ್ಮ ಮಾಡುತ್ತಿದ್ದಾರೆ. ರಾಜ್ಯದ ಇತರೆ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಕಬ್ಬಿಗೆ ಉತ್ತಮ ಬೆಲೆ ಕೊಡುತ್ತಿದ್ದಾರೆ. ಬೀದರ್ ಜಿಲ್ಲೆಯ ರೈತರಿಗೆ ಮಾತ್ರ ಈ ರೀತಿಯ ಅನ್ಯಾಯ ಆಗುತ್ತಿದೆ. ಕೂಡಲೇ ಜಿಲ್ಲಾಡಳಿತ ರೈತರೊಂದಿಗೆ ಮಾತುಕತೆ ನಡೆಸಿ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯದ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೀದರ್ ಬಂದ್ಗೆ ಕರೆ ನೀಡಿ ಬೃಹತ್ ರೈತ ಸಮಾವೇಶ ನಡೆಸಲಾಗುವುದುʼ ಎಂದು ತಿಳಿಸಿದರು.
ರೈತರ ಹೋರಾಟಕ್ಕೆ ಜನಪ್ರತಿನಿಧಿಗಳ ಸಾಥ್ :
ಕಬ್ಬಿಗೆ ಸೂಕ್ತ ಬೆಲೆ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಹುಮನಾಬಾದ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಎಂಎಲ್ಸಿ ಅರವಿಂದ ಕುಮಾರ್ ಅರಳಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಿಜೆಪಿ ಮುಖಂಡರಾದ ರಾಜಶೇಖರ್ ನಾಗಮೂರ್ತಿ, ಜಗನಾಥ ಚಿಲ್ಲಾಬಟ್ಟೆ, ಈಶ್ವರ ಸಿಂಗ್ ಠಾಕೂರ್ ಮತ್ತಿತರರು ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿ ಮಾತನಾಡಿದರು.

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮಾತನಾಡಿ, ʼರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುವೆ. ಬೀದರ್ ಜಿಲ್ಲೆಯ ರೈತರ ಬೇಡಿಕೆಗೆ ಸ್ಪಂದಿಸಿ ಟನ್ ಕಬ್ಬಿಗೆ 3100 ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಮನವಿ ಮಾಡುವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ಸ್ವಾಮಿ, ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ, ಮುಖಂಡರಾದ ಗೋಪಾಲ್, ಸೈಯದ್ ಖಾಸೀಮ ಅಲಿ, ಶಂಕರೆಪ್ಪಾ ಮರಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ ಪಾಟೀಲ್ ಅತಿವಾಳ, ಬಾಬುರಾವ ಹೊನ್ನಾ, ಶಿವರಾಯ ಮುದಾಳೆ, ಖಾಶೆಪ್ಪಾ ಬೇಲೂರ. ಧುಳಪ್ಪಾ. ರುದ್ರಸ್ವಾಮಿ, ಸಂತೋಷ ಗುದಗೆ, ಮಲ್ಲಿಕಾರ್ಜುನ ಸಂಗಮ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿ, ವಿಠಲರಾವ, ನಾಗಶೆಟ್ಟಿ, ಭೀಮರಾವ, ಖಮರ ಪಟೇಲ್, ವಿಜಯ ರೇಡ್ಡಿ, ನಾಗಶೇಟ್ಟಿ ಚೆನ್ನಮಲ್ಲ, ಮುಖೀಮೊದ್ದಿನ ನಂದಗಾಂವ, ಖಾನ್ಸಾಬ್ ನಾರಾಯಣಪುರ, ಸಂಜು ಪಾಟೀಲ್ ಹುಣಜಿ, ಬಾಬುರಾವ ಪಾಟೀಲ್, ಶಿವಕಾಂತ ಖಂಡೆ, ಸುರೇಶ ಪಾಟೀಲ್, ಬಸವರಾಜ ಅಷ್ಟೂರ, ಸೋಮನಾಥ ಏಳಕೂರ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿತರಿದ್ದರು.





