- ರಾಜ್ಯ ಸರ್ಕಾರ ರೈತ ವಿರೋಧಿ ಕಾಯಿದೆ ಹಿಂಪಡೆಯಬೇಕು.
- ಸಹಕಾರ ಬ್ಯಾಂಕ್ನಿಂದ ಎಲ್ಲ ರೈತರಿಗೆ ಶೂನ್ಯ ಬಡ್ಡಿಯಲ್ಲಿ 5 ಲಕ್ಷ ರೂ ಸಾಲ ನೀಡಬೇಕು
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದುರಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರಕಾರ ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡತವೆಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಒತ್ತಾಯಿಸಿದೆ.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಆವರಣದಿಂದ ತಹಸೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ ಅವರಿಗೆ ಸಲ್ಲಿಸಿದರು.
“ಮುಂಗಾರಿನಲ್ಲಿ ಸಕಾಲಕ್ಕೆ ಮಳೆಯಾಗದೇ ಉದ್ದು, ಹೆಸರು, ಸೋಯಾ ಅವರೆ ಸೇರಿ ವಿವಿಧ ಬೆಳೆಗಳು ನಾಶವಾಗಿವೆ. ಇದರಿಂದ ಸಾಲಸೋಲ ಮಾಡಿ ಉಳಿಮೆ, ಬಿತ್ತನೆ ಕೈಗೊಂಡ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಸರಕಾರ ಬೀದರ್ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
“ಬೆಳೆ ವಿಮೆ ಕಂತು ಪಾವತಿಸಿದ ರೈತರ ಖಾತೆಗೆ ಬೆಳೆಹಾನಿ ಪರಿಹಾರ ಜಮಾ ಮಾಡಬೇಕು. ರಾಜ್ಯ ಸರಕಾರ ಕಬ್ಬಿಗೆ ಎಸ್ಎಪಿ ದರ ನಿಗದಿಪಡಿಸಬೇಕು ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್, ರೈತರ ಹೊಲಗಳಿಗೆ ರಸ್ತೆ, ಕಾಡು ಪ್ರಾಣಿಗಳಿಂದ ಬೆಳಗಳಿಗೆ ರಕ್ಷಣೆ, ಸಹಕಾರ ಬ್ಯಾಂಕ್ನಿಂದ ಎಲ್ಲ ರೈತರಿಗೆ ಶೂನ್ಯ ಬಡ್ಡಿಯಲ್ಲಿ 5 ಲಕ್ಷ ರೂ ಸಾಲ, ರೈತ ಸಮ್ಮಾನ ಯೋಜನೆ ಮುಂದುವರೆಸುವುದು, ತೆಲಂಗಾಣ ಮಾದರಿಯಲ್ಲಿ ರೈತರ ಪ್ರತಿ ಎಕರೆಗೆ 10 ಸಾವಿರ ರೂ, ಜಿಲ್ಲೆಯ ರೈತರ ಜೀವನಾಡಿ ಬಿಎಸ್ಎಸ್ಕೆ ಸರಕಾರ ಸುಪರ್ದಿ ಪಡೆದು ಮುನ್ನೆಡುಸುವುದು, ರೈತ ವಿರೋಧಿ ಕಾಯಿದೆ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ವಿಳಂಬ ಮಾಡಿದರೇ ಬೀದಿಗೀಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೋರುತ್ತಿದೆ ಸರ್ಕಾರಿ ಶಾಲಾ ಮಾಳಿಗೆ; ಆತಂಕದಲ್ಲಿ ಮಕ್ಕಳು
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್, ಕಮಲನಗರ ತಾಲೂಕು ಅಧ್ಯಕ್ಷ ವಿಠಲರಾವ ಪಾಟೀಲ್, ನಗರ ಅಧ್ಯಕ್ಷ ಪ್ರವೀಣಕುಮಾರ ಕುಲಕರ್ಣಿ ಹಾಗೂ ಪ್ರಮುಖರಾದ ಶೇಷರಾವ ಕಣಜಿ, ಸುವರ್ಣ ಬಳತೆ, ಮಹಾನಂದಾ ದೇಶಮುಖ, ಸುಧಾಕರ ಬೋಬಡೆ, ಬಾಲಾಜಿ ಬಿರಾದಾರ್, ಶಾಂತವೀರ ಪಾಟೀಲ್, ಬಾಬುರಾವ ಭಾಸಗೆ, ಭವರಾವ ಪಾಟೀಲ್, ಪ್ರದೀಪ ಶೇರಿಕಾರ್, ಶಿವಯೋಗಿ ಸ್ವಾಮಿ, ಉಮಾ ಮಾಶೆಟ್ಟೆ, ರೇಖಾ ಪಾಟೀಲ್, ಲಕ್ಷö್ಮಣ ಈಶ್ವರೆ,ಗೋರಖ ಬಿರಾದಾರ್, ಬಾಬುರಾವ ರಾಮದೆ, ಮಾಣಿಕಪ್ಪ ಪಾವಡಶೆಟ್ಟಿ ಸೇರಿದಂತೆ ಹಲವರು ಇದ್ದರು.





