ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಇರುವ ಜಿಲ್ಲೆಯ ಏಕೈಕ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕೋಟ್ಯಾಂತರ ವೆಚ್ಚದಿಂದ ನಿರ್ಮಿಸಲಾದ ಹಾಸ್ಟೆಲ್ ಎರಡು ವರ್ಷ ಕಳೆದರೂ ಉದ್ಘಾಟನೆ ಕಾಣದೆ ಪಾಳು ಬಿದ್ದಿದೆ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ.
2021-22ರಲ್ಲಿ ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ಘೋಡಂಪಳ್ಳಿ ಗ್ರಾಮದ ಹೊರವಲಯದಲ್ಲಿ 10 ಎಕರೆ ಪ್ರದೇಶದಲ್ಲಿ ಕಾಲೇಜು ಮತ್ತು ಶಿಕ್ಷಣ ಇಲಾಖೆಯಿಂದ ವಸತಿಯುಕ್ತ ಸರ್ಕಾರಿ ಪದವಿ ಕಾಲೇಜ ಆರಂಭಿಸಲಾಗಿದೆ. ಒಟ್ಟು ₹25 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಸಜ್ಜಿತವಾಗಿ ಅತ್ಯಾಧುನಿಕವಾಗಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅದೇ ಆವರಣದಲ್ಲಿ ಬಾಲಕರ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 2.82 ಕೋಟಿಯಲ್ಲಿ ಇಡೀ ಕ್ಯಾಂಪಸ್ಗೆ ಕಾಂಪೌಂಡ್ ಸಹ ನಿರ್ಮಿಸಲಾಗಿದೆ. ಆದರೆ, ಹಾಸ್ಟೆಲ್ ಸೌಲಭ್ಯ ಮಾತ್ರ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ದಕ್ಕಿಲ್ಲ.
ಕಾಲೇಜು ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದಿಂದ ಬರುವ ಬಡ, ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ವಸತಿ ಸಮೇತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಹೆಸರಿಗೆ ವಸತಿಯುಕ್ತ ಪದವಿ ಕಾಲೇಜು ಎಂದು ನಾಮಫಲಕ ಹಾಕಿದ್ದರೂ ಹಾಸ್ಟೆಲ್ ಬಾಗಿಲು ಮಾತ್ರ ಇನ್ನೂ ತೆರೆದಿಲ್ಲ. ಶಿಕ್ಷಣ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳೇನೊ ರೂಪಿಸಿ, ಅದಕ್ಕಾಗಿ ಕೋಟಿಗಟ್ಟಲೆ ಅನುದಾನವೂ ಸುರಿಯುತ್ತದೆ. ಅಧಿಕಾರಿಗಳಿಗೆ ಅದರ ಸದ್ಬಳಕೆ ಮಾಡಿಕೊಳ್ಳಲು ವ್ಯವಸ್ಥೆ ತೋರುವ ಆಸಕ್ತಿ, ಕಾಳಜಿ ಮಾತ್ರ ವಿರಳ ಎನ್ನಬಹುದು.

ಈ ಭವ್ಯ ಕಾಲೇಜು ಕಟ್ಟಡದ ಸುತ್ತಲೂ ಹೊಲಗದ್ದೆಗಳಿವೆ. ಮುಖ್ಯರಸ್ತೆಯಿಂದ ಕಾಲೇಜಿಗೆ ತೆರಳಲು ಸೂಕ್ತ ರಸ್ತೆ, ಬಸ್ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಕಾಲೇಜಿನಲ್ಲಿ ಸಕಲ ಸೌಕರ್ಯಗಳಿದ್ದರೂ ಅದರ ಬಳಕೆ ಇಲ್ಲದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಪ್ರವೇಶಕ್ಕೆ ಆಸಕ್ತಿ ತೋರುತ್ತಿಲ್ಲ. ಕಾಲೇಜಿನ ಸಿಬ್ಬಂದಿ ದಾಖಲಾತಿ ಹೆಚ್ಚಿಸಲು ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಕಾಲೇಜಿನ ಬಗ್ಗೆ ತಿಳಿಸುತ್ತಿದ್ದಾರೆ. ಆದರೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಇಳಿಮುಖ ಆಗುತ್ತಿದೆ.
ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿಎಸ್ಪಿ ಮೂರು ಕೋರ್ಸ್ ಮಾತ್ರ ಇರುವುದು. ಬಿಎ-60, ಬಿಕಾಂ-42 ಹಾಗೂ ಬಿಎಸ್ಸಿ-44 ಮೂರು ವಿಭಾಗ ಸೇರಿ ಒಟ್ಟು 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ 286 ಇರುವ ಮಕ್ಕಳ ಸಂಖ್ಯೆ 114ಕ್ಕೆ ಕುಸಿದಿದೆ. 10 ಖಾಯಂ ಬೋಧಕ, 7 ಅತಿಥಿ ಬೋಧಕ ಸೇರಿ ಒಟ್ಟು 17 ಜನ ಬೋಧಕ ಸಿಬ್ಬಂದಿ ಇದ್ದಾರೆ. ಬೋಧಕೇತರ ಹುದ್ದೆಗೆ ಒಬ್ಬರೂ ಖಾಯಂ ಇಲ್ಲ. ಹೀಗಾಗಿ ಹೊರಗುತ್ತಿಗೆ ಆಧಾರದಲ್ಲಿ ಮೂವರು ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಕಚೇರಿಯ ಕೆಲಸ ಕಾರ್ಯಗಳಿಗೆ ಬೋಧಕ ಸಿಬ್ಬಂದಿ ಮೇಲೆ ಹೊರೆಯಾಗುತ್ತಿದೆ. ಕಾಲೇಜಿನಲ್ಲಿ ಖಾಲಿಯಿರುವ ಬೋಧಕ-ಬೋಧಕೇತರ ಹುದ್ದೆ ಭರ್ತಿ ಮಾಡಬೇಕು ಎಂಬುದು ಇಲ್ಲಿನ ಪ್ರಾಧ್ಯಾಪಕರ ಅಭಿಪ್ರಾಯ.

ʼಘೋಡಂಪಳ್ಳಿ ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ಪದವಿ ಕಾಲೇಜಿಗೆ ತೆರಳಲು ರಸ್ತೆ, ಬಸ್ ವ್ಯವಸ್ಥೆ ಇಲ್ಲ. ಕಾಲೇಜಿನ ಆವರಣದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ವಿದ್ಯಾರ್ಥಿ ನಿಲಯಗಳು ಬಳಕೆಯಿಲ್ಲದೆ ಹಾಳಾಗುತ್ತಿವೆ. ಕಟ್ಟಡಗಳ ಸುತ್ತಲೂ ಮುಳ್ಳು-ಕಂಟಿ ಬೆಳೆದಿದೆ. ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ನಿರಾಶಕ್ತಿ ತೋರುತ್ತಿದ್ದಾರೆ. ಕೋಟ್ಯಾಂತರ ವೆಚ್ಚದಿಂದ ನಿರ್ಮಿಸಿದ ನಿಲಯ ಕಟ್ಟಡ ನಿರುಪಯುಕ್ತವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಸತಿ ನಿಲಯಗಳು ಶೀಘ್ರದಲ್ಲಿ ಆರಂಭಿಸಬೇಕುʼ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಆಗ್ರಹಿಸಿದ್ದಾರೆ.
ʼಎರಡು ವರ್ಷಗಳ ಹಿಂದೆ ಕಾಲೇಜು ಆವರಣದಲ್ಲಿ ನಿರ್ಮಿಸಲಾದ ವಿದ್ಯಾರ್ಥಿ ನಿಲಯಗಳು ಆರಂಭಿಸದಿರುವುದರಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ. ವಸತಿ ನಿಯಲಯನ್ನು ಬಿಸಿಎಂ ಇಲಾಖೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸುವಂತೆ 2025ರ ನವೆಂಬರ್ ತಿಂಗಳಲ್ಲಿ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಪತ್ರ ನೀಡಿ ತಿಳಿಸಲಾಗಿದೆ. ಅಧಿಕಾರಿಗಳು ವಸತಿ ನಿಲಯಗಳನ್ನು ಬಿಸಿಎಂ ಇಲಾಖೆ ಸುಪರ್ದಿಗೆ ಪಡೆದು ಆರಂಭಿಸಿದರೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗುತ್ತದೆʼ ಎಂದು ಕಾಲೇಜಿನ ಪ್ರಾಚಾರ್ಯ ವೇದಪ್ರಕಾಶ ಆರ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ : ಬೀದರ್ | ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ವ್ಯಕ್ತಿ ಸಾವು!
ʼಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಘೋಡಂಪಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ನಿಲಯಗಳನ್ನು ನಮ್ಮ ಇಲಾಖೆ ವ್ಯಾಪ್ತಿಗೆ ಪಡೆಯಬೇಕೆಂಬ ಆದೇಶವನ್ನು ಕಾಲೇಜಿನ ಪ್ರಾಚಾರ್ಯರು ನೀಡಿದ್ದಾರೆ. ಶೀಘ್ರದಲ್ಲಿಯೇ ಕಾಲೇಜಿನ ಭೇಟಿ ನೀಡಿ ವಿದ್ಯಾರ್ಥಿ ನಿಲಯಗಳು ಸುಸ್ಥಿತಿಯಲ್ಲಿ ಇರುವುದನ್ನು ಪರಿಶೀಲಿಸಿ, ಸರ್ಕಾರದ ನಿಯಮಾನುಸಾರ ಅನುಸಾರ ತಾತ್ಕಾಲಿಕವಾಗಿ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದುʼ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸುನೀತಾ ಶಿವಾನಂದ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




