ಅತಿವೃಷ್ಟಿ ಭಾದಿತ ಬೀದರ್ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆಯಾಗಿ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಘಟಕದಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಶುಕ್ರವಾರ 6ನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘ, ಎಐಟಿಯುಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಸರ್ವೋದಯ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಎಐಕೆಎಸ್ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೀದರ್ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಎದುರುಗಡೆ ಅ.12ರಿಂದ ಅಹೋರಾತ್ರಿ ಧರಣಿ ಮುಂದುವರೆದಿದೆ.
ʼಜೂನ್ ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿ ಪ್ರತಿ ಎಕರೆಗೆ 30 ಸಾವಿರಗಳಂತೆ ಪರಿಹಾರ ಪ್ರತಿ ಹೆಕ್ಟೇರ್ಗೆ 60 ಸಾವಿರ ಪರಿಹಾರ ನೀಡಬೇಕು. ರೈತರ ಎಲ್ಲ ತರಹದ ಸಹಕಾರಿ ಸಂಘಗಳ, ಸರ್ಕಾರಿ ಬ್ಯಾಂಕ್ ಹಾಗೂ ಇತರೆ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಬೇಕುʼ ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಿದ ರೈತ ಮುಖಂಡರು, ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೆಗೆ ಧರಣಿ ಮುಂದುವರೆಯಲಿದೆʼ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರ ಬೇಡಿಕೆಗಳೇನು?
ರೈತರಿಗೆ ಸಾಲ ವಸೂಲಾತಿಯ ನೋಟಿಸನ್ನು ಕೊಡುವುದನ್ನು ನಿಲ್ಲಿಸಬೇಕು. 60 ವರ್ಷ ಪೂರೈಸಿದ ರೈತ ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ 10 ಸಾವಿರ ಗೌರವ ಧನವನ್ನು ನಿಗದಿಪಡಿಸಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸುವುದು ಮತ್ತು ನಿವೃತ್ತಿ ನೌಕರರ ಉಪಧನ 38 ಕೋಟಿ ಕೊಡುವುದು, ಕಾರ್ಖಾನೆ ನೌಕರರ ಬಾಕಿ ಸಂಬಳವನ್ನು ಬಿಡುಗಡೆ, ಕಬ್ಬಿನ ದರ ಪ್ರತಿ ಟನ್ಗೆ 3 ಸಾವಿರ ನಿಗದಿಪಡಿಸುವುದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ʼಕನಿಷ್ಠ ಬೆಂಬಲ ಬೆಲೆಯ ಕುರಿತು ಸಂಸತ್ತಿನಲ್ಲಿ ಕಾನೂನು ಅಂಗೀಕರಿಸುವುದು. ಸರ್ವೆ ನಂಬರ್ ಹಾನಿಯನ್ನು ಆಧರಿಸಿ ಅತಿವೃಷ್ಟಿಯಿಂದ ಆಗಿರುವ ಹಾನಿಯಾದ ಬೆಳೆಯ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವುದು. ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ ಒಂದು ಕಿಲೋ ಸಕ್ಕರೆ ಮತ್ತು ಪ್ರತಿ ಷೇರುದಾರರಿಗೆ 5 ಕೆ.ಜಿ, ಸಕ್ಕರೆಯನ್ನುವಿತರಿಸಬೇಕು. ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸುವ ಮೊದಲು ಪ್ರತಿಟನ್ಗೆ ದರ ನಿಗದಿಪಡಿಸುವುದುʼ ಎಂದರು.

ʼಪ್ರತಿ ಗ್ರಾಮಗಳಲ್ಲಿ ನರೇಗಾ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭಿಸಬೇಕು. ಹಿಂಗಾರು ಬಿತ್ತನೆಗೆ ಬೀಜ ಮತ್ತು ಗೊಬ್ಬರವನ್ನು ಸರ್ಕಾರವೇ ಪೂರೈಸಬೇಕು. ರೈತರ ಹೊಲಗಳ ಕುರಿತು ಫೋಡಿ ಮುಕ್ತ ಗ್ರಾಮಗಳನ್ನಾಗಿ ಘೋಷಿಸುವುದು. ಕಾರಂಜಾ ಯೋಜನೆ ಅಡಿಯಲ್ಲಿ ಭೂಮಿ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ಒದಗಿಸುವುದು. ರೈತರ ಪಹಣಿ ಪತ್ರಿಕೆಗಳಲ್ಲಿ ತಪ್ಪುತಪ್ಪಾಗಿ ಹೆಸರುಗಳನ್ನು ನಮೂದಿಸಿರುವುದನ್ನು ಕಂದಾಯ ಇಲಾಖೆ ಸರಿಪಡಿಸಬೇಕುʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ರೈತರ ಜಮೀನಿನಲ್ಲಿರುವ ಮನೆಗಳಿಗೆ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವುದು. ಬಗರ್ ಹುಕಂ ಅರ್ಜಿ ನಮೂನೆ 50, 53, ಮತ್ತು 57ನ್ನು ವಿಲೇವಾರಿ ಮಾಡಿ ಮತ್ತು ಹಕ್ಕು ಪತ್ರಗಳನ್ನು ಸಾಗುವಳಿದಾರರಿಗೆ ಕೊಡಬೇಕು. ಮನೆ, ನಿವೇಶನ ಇಲ್ಲದವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು ಸೇರಿ ಒಟ್ಟು 18 ಹಕ್ಕೊತ್ತಾಯದ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೀದರ್| ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ : ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ್ ಹೊನ್ನಾ, ಮಾರುತಿ ಬೌದ್ಧೆ, ನಜೀರ ಅಹ್ಮದ ಚೊಂಡಿ, ಕೋಂಡಿಬಾರಾವ್ ಪಾಂಡ್ರೆ, ಎಂ.ಡಿ.ಶಫಾಯತ್ ಅಲಿ, ಶೀಲಾ ಸಾಗರ್, ಚಂದ್ರಕಲಾ, ಶಾಂತಮ್ಮ ಮೂಲಗೆ, ಸಂತೋಷಕುಮಾರ ಗುದಗೆ, ಪೀಟರ್ ಚಿಟಗುಪ್ಪ, ವಿಜಯಕುಮಾರ್ ಬಾವಗೆ, ಅರುಣ ಪಟೇಲ್, ಗುಂಡೇರಾವ್ ಕುಲಕರ್ಣಿ, ನಾಗಶೆಟ್ಟಪ್ಪ ಲಂಜವಾಡೆ, ಜೈಶೀಲಕುಮಾರ್, ಬಸವರಾಜ ಅಷ್ಟೂರ್, ಚಂದ್ರೇಖರ ಪಾಟೀಲ್ ಹೊಚಕನಳ್ಳಿ, ಕಾಶಿನಾಥ ಭೂರೆ ಮತ್ತಿತರರು ಇದ್ದರು.





