ಬೀದರ್ ಮಹಾನಗರ ಪಾಲಿಕೆಯಲ್ಲಿ ಕಾಣಿಸಿಕೊಂಡಿರುವ ಅವ್ಯವಸ್ಥೆ ಮತ್ತು ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ವಿ. ಬಿರಾದಾರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಗರಸಭೆಯ ಕಚೇರಿಯಲ್ಲಿ ಇ-ಖಾತಾ ಸೇರಿದಂತೆ ಹಲವು ಕೆಲಸಗಳು ತಿಂಗಳಗಳಿಂದ ನಿಲುಗಡೆಯಾಗಿವೆ ಎಂದು ಆರೋಪಿಸಲಾಗಿದೆ. ನಾಗರಿಕರು ತಮ್ಮ ನಿವೇಶನಗಳ ದಾಖಲೆಗಾಗಿ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ʼಕಳೆದ ತಿಂಗಳು ಮಹಾನಗರ ಪಾಲಿಕೆಯ ಆಯುಕ್ತರಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಆದರೆ ಅವರಿಗೆ ಇನ್ನೂ ಸಹಿ ಮಾಡುವ ಅಧಿಕಾರ ನೀಡಿಲ್ಲವೆಂಬ ಮಾಹಿತಿ ಕಚೇರಿಯೊಳಗಿನಿಂದ ತಿಳಿದು ಬಂದಿದೆ. ಇದು ಆಡಳಿತದ ವೈಫಲ್ಯ ಮತ್ತು ಸಾರ್ವಜನಿಕರಿಗೆ ಅನ್ಯಾಯʼ ಎಂದು ಹೇಳಿದರು.
ನಗರಸಭೆಯ ವಿವಿಧ ಹಂತಗಳ ನೌಕರರ ವರ್ತನೆ ಜನರಲ್ಲಿ ಅಸಮಾಧಾನವನ್ನು ಹುಟ್ಟಿಸಿದೆ. ಸಾಮಾನ್ಯ ನಾಗರಿಕ ವೇಷದಲ್ಲಿ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದರೆ ನಿಜಸ್ಥಿತಿ ಗೊತ್ತಾಗುತ್ತದೆ. ನಗರಸಭೆಯು ಪೌರಾಡಳಿತ ಇಲಾಖೆಯ ಅಡಿಯಲ್ಲಿ ಬರುವುದರಿಂದ, ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ; ಚಾಟಿ ಏಟು ತಿಂದ ಶಾಸಕ ಶರಣು ಸಲಗರ
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ ರೊಟ್ಟೆ ಸೇರಿದಂತೆ ಮತ್ತಿತರರಿದ್ದರು.





