ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ರವರಿಗೆ ಮನವಿ ಸಲ್ಲಿಸಿ, ಜಿಲ್ಲೆಯ ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ದೊಡ್ಡ ಕಾರ್ಖಾನೆಗಳಿಲ್ಲದೆ ಕೃಷಿಯೇ ಪ್ರಮುಖ ವೃತ್ತಿಯಾಗಿದ್ದು, ತಾಂತ್ರಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಹಳ್ಳಿಗಳ ಕಾರ್ಮಿಕರು ನಗರ, ಪಟ್ಟಣಗಳಿಗೆ ವಲಸೆ ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಿಜವಾದ ಕಾರ್ಮಿಕರು ಕಲ್ಯಾಣ ಮಂಡಳಿಯೊಡನೆ ನೋಂದಣಿಯಾಗದೇ ಉಳಿದಿದ್ದು, ಕೆಲವರು ಮಾತ್ರ ಆನ್ಲೈನ್ ಮೂಲಕ ಸೌಲಭ್ಯ ಪಡೆದಿದ್ದಾರೆ ಎಂದು ಸಂಘವು ದೂರಿದೆ.
ಕಾರ್ಮಿಕ ಇಲಾಖೆ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಮಂಜೂರಾದರೂ, ಇನ್ನೂ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗದಿರುವುದರ ಬಗ್ಗೆ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಬೀದರ್ ಜಿಲ್ಲೆಯಲ್ಲಿ ಸ್ವಂತ ಕಾರ್ಮಿಕರ ಕಚೇರಿ ನಿರ್ಮಿಸಬೇಕು. ಕಾರ್ಮಿಕರು ಸೇರುವ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಹೊಸ ನೋಂದಣಿ ಮತ್ತು ನವೀಕರಣ ಅರ್ಜಿಗಳನ್ನು ಕಾರ್ಮಿಕ ಕಚೇರಿಯಲ್ಲೇ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಅತಿವೃಷ್ಟಿಯಿಂದ ಕೆಲಸವಿಲ್ಲದ ಕಾರ್ಮಿಕರಿಗೆ ಪರಿಹಾರ ಧನ ಘೋಷಿಸಬೇಕುʼ ಎಂದು ಬೇಡಿಕೆಯಿಟ್ಟರು.
ಇದನ್ನೂ ಓದಿ : ಬೀದರ್ | ಇಂದಿನಿಂದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ : ಸಚಿವ ಈಶ್ವರ ಖಂಡ್ರೆ
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಡಿ. ಶಫಾಯತ್ ಅಲಿ, ತಾಲೂಕಾ ಕಾರ್ಯದರ್ಶಿ ಪ್ರಭು ತಗಣಿಕರ್ ಬಗದಲ್ ಹಾಗೂ ಸದಸ್ಯೆ ಜೈಶೀಲ ಉಪಸ್ಥಿತರಿದ್ದರು.





