ಬೀದರ್ ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಷ ಮುಕ್ತಗೊಳಿಸಲು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹೇಳಿದರು.
ಬೀದರ್ ನಗರದ ಜಿಲ್ಲಾ ಕನ್ನಡ ಭವನದಲ್ಲಿ ಸಮಿತಿ ವತಿಯಿಂದ ಶುಕ್ರವಾರ ದುಶ್ಚಟಗಳ ನಿಯಂತ್ರಣ ಕುರಿತಾಗಿ ನಡೆದ ಸಂಘ-ಸಂಸ್ಥೆಗಳು ಹಾಗೂ ಸಮಾಜದ ಗಣ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ʼಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಯುವಕರ ಸಮಿತಿ ರಚಿಸಲು ನಿರ್ಧರಿಸಲಾಗಿದೆʼ ಎಂದು ತಿಳಿಸಿದರು.
ʼಗುಟ್ಕಾ, ಸಿಗರೇಟ್, ಸಾರಾಯಿ ಸೇವನೆ, ಅತಿಯಾದ ಮೊಬೈಲ್ ಬಳಕೆ ಹಾಗೂ ಭಿಕ್ಷಾಟನೆ ಸಮಾಜದ ಪಿಡುಗುಗಳಾಗಿವೆ. ಯುವಕರೇ ದೇಶದ ಸಂಪತ್ತು ಆಗಿದ್ದು, ಮಾದಕ ವಸ್ತುಗಳು ಹಾಗೂ ಮೊಬೈಲ್ ವ್ಯಸನದಿಂದ 25–30 ವರ್ಷದೊಳಗಿನ ಯುವಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಣ ವ್ಯರ್ಥ ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು, ಕುಟುಂಬಕ್ಕೂ ಭಾರವಾಗುತ್ತಿದ್ದಾರೆʼ ಎಂದು ಕಳವಳ ವ್ಯಕ್ತಪಡಿಸಿದರು.
ʼಯುವಕರು ರೋಗಪೀಡಿತರಾದರೆ ದೇಶ ಬಲಹೀನವಾಗುತ್ತದೆ. ಯುವಕರನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ದೇಶವನ್ನು ಶಕ್ತಿಶಾಲಿ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಮಾಜದಲ್ಲಿ ಕೆಟ್ಟದ್ದನ್ನು ನಿಲ್ಲಿಸಿ ಒಳ್ಳೆಯದನ್ನು ಹರಡುವುದು, ಪ್ರೀತಿ–ವಿಶ್ವಾಸ–ಸಹೋದರತ್ವದ ವಾತಾವರಣ ನಿರ್ಮಿಸುವುದು ಸಮಿತಿಯ ಉದ್ದೇಶವಾಗಿದೆʼ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿ, ʼದುಶ್ಚಟಗಳ ವಿರುದ್ಧ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಎಲ್ಲರೂ ಕೈಜೋಡಿಸಿದರೆ ಬರುವ ದಿನಗಳಲ್ಲಿ ಬೀದರ್ ನಶೆ ಹಾಗೂ ಭಿಕ್ಷಾಟನೆ ಮುಕ್ತವಾಗಲಿದೆʼ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಮಿತಿ ಕೈಗೊಂಡಿರುವ ಅಭಿಯಾನ ಉತ್ತಮ ಬೆಳವಣಿಗೆʼ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಬೀದರ್ | ವಿವಾಹೇತರ ಸಂಬಂಧ ಶಂಕೆ : ಪತ್ನಿಯನ್ನು ಕೊಂದ ಪತಿ
ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕರಪತ್ರ ವಿತರಣೆ, ಮನೆ-ಮನೆಗೆ ಭೇಟಿ ಮುಂತಾದ ಜಾಗೃತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಜಶೇಖರ ಸೇಡಂಕರ್, ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಹಾವಶೆಟ್ಟಿ ಪಾಟೀಲ, ಶರಣಪ್ಪ ಮಿಠಾರೆ ಮತ್ತಿತರರು ಸಲಹೆ ನೀಡಿದರು.





