ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಕಾರ್ಯ ಸಲ್ಲದು. ಆರ್ಎಸ್ಎಸ್ ಸಂಘಟನೆ ಮಾಡುವ ತಾರತಮ್ಯ ನೀತಿಗೆ ನಮ್ಮ ಬೆಂಬಲವಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಇಂದು ದೇಶದಲ್ಲಿ ಉದಾರಿಕರಣ, ಜಾಗತಿಕರಣದಿಂದ ಎಲ್ಲವೂ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ದಲಿತರ, ಹಿಂದುಳಿದವರ ಮತ್ತು ಶೋಷಿತರ ಹಕ್ಕುಗಳನ್ನು ಕಸಿಯುವ ವ್ಯವಸ್ಥಿತ ಷಡ್ಯಂತ ನಡೆಯುತ್ತಿದೆʼ ಎಂದರು.
ʼಆರ್ಎಸ್ಎಸ್ ಮುಖಂಡ ಮೋಹನ ಭಾಗವತ್ ಅವರು ವಿಷಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ, ದಲಿತರ, ರೈತರ ಮತ್ತು ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ಇದು ಹೀಗೆ ಮುಂದುವರೆದರೆ ಸಂವಿಧಾನ ಅಪಾಯಕ್ಕೆ ಸಿಲುಕುವ ಸಂಭವವಿದೆ. ʼಯಾವುದೇ ಸರ್ಕಾರಗಳಿರಲಿ ಅಖಂಡ ರಾಷ್ಟ್ರದ ಪರಿಕಲ್ಪನೆ ಹೊಂದಬೇಕೆ ವಿನಃ ವಿಭಜಿಸುವ ಕಾರ್ಯಕ್ಕೆ ಮುಂದಾಗಬಾರದುʼ ಎಂದು ಹೇಳಿದರು.
ʼಸಂವಿಧಾನದ ನಿಜಾಂಶಗಳು ಜನತೆಗೆ ತಲುಪುತ್ತಿಲ್ಲ. ಪ್ರಧಾನಮಂತ್ರಿಗಳ ಮಾತು ಕೇಳುತ್ತಿದ್ದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ದಲಿತ ಸಂಘರ್ಷ ಸಮಿತಿಯು ಜನತೆಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದೆ. ಆರ್ಎಸ್ಎಸ್ ಮತ್ತು ಡಿಎಸ್ಎಸ್ ಮಾಡುವ ಕಾರ್ಯಗಳ ಕುರಿತು ಚರ್ಚೆ ಆಗಬೇಕಾಗಿದೆ ಎಂದರಲ್ಲದೆ, ಬೀದರನಿಂದಲೇ ದಲಿತ ಸಂಘರ್ಷ ಸಮಿತಿಯ ಸದಸ್ಯತ್ವಕ್ಕೆ ಚಾಲನೆ ನೀಡುತ್ತಿದ್ದೇವೆ. ಜಾತಿ ಮತ ಪಂಥಗಳ ಭೇದವಿಲ್ಲದೆ ಸದಸ್ಯರಾಗಬಹುದು. 1 ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ’ ಎಂದು ಶಂಕರ್ ತಿಳಿಸಿದರು.

ದಲಿತ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ ಮಾತನಾಡಿ, ʼಸಂವಿಧಾನಾತ್ಮಕವಾಗಿ ನೊಂದಾಯಿತ ಸಂಘಟನೆ ಅಲ್ಲದಿದ್ದರೂ ಆರ್ಎಸ್ಎಸ್ ಸಂಘಟನೆ ಜನರಿಗೆ ಭಾವನಾತ್ಮಕವಾಗಿ ಉದ್ರೇಕಕ್ಕೆ ತಳ್ಳುತ್ತ ದೇಶದ ಮುಖ್ಯ ಅಂಶಗಳ ಕಡೆಗೆ ವಿಮುಖರನ್ನಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯು ನ್ಯಾಯ ಸಮಾನತೆ, ಸಮಸಮಾಜದ ಪರಿಕಲ್ಪನೆ ಇಟ್ಟುಕೊಂಡು ದುಡಿಯುತ್ತಿದೆʼ ಎಂದರು.
ಇದನ್ನೂ ಓದಿ : ನ.30ರಂದು ಕಲಬುರಗಿಯಲ್ಲಿ ʼಈ ದಿನʼ ಓದುಗರ ಸಮಾವೇಶ; ʼಜೈ ಹಿಂದ್-ಜಯ ಕರ್ನಾಟಕʼ ವಿಶೇಷ ಸಂಚಿಕೆ ಬಿಡುಗಡೆ
ಪತ್ರಕರ್ತ ಎನ್.ನಾಗರಾಜ್, ದಸಂಸ ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ ಹಾಗೂ ಪ್ರಮುಖರಾದ ರಾಜಕುಮಾರ ಬನ್ನೇರ್, ನಾಗಣ್ಣ ಬಡಿಗೇರ್, ರಾಮಣ್ಣ ಕಲದೇವನಹಳ್ಳಿ, ರಂಜಿತಾ ಜೈನೂರ್, ಜಗದೇವಿ ಭಂಡಾರಿ, ದೈವಶೀಲಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





