ʼನಾಲ್ಕು ಎಕರೆ ಜಮೀನು ಲಾವಣಿ ಪಡೆದು ಸೋಯಾಬಿನ್ ಬೆಳೆದಿದ್ದೇನೆ. ಇನ್ನೇನು ವಾರದಲ್ಲಿ ಕಟಾವಿಗೆ ಬರುತ್ತಿತ್ತು. ಒಂದು ಲಕ್ಷಕ್ಕೂ ಅಧಿಕ ಆದಾಯದ ನಿರೀಕ್ಷೆಯಲ್ಲಿದ್ದೆ. ಸತತ ಮಳೆ, ಮಾಂಜ್ರಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ. ಪ್ರವಾಹ ನಿಂತರೂ ʼಒಂದು ದಾಣಿ ಸೋಯಾ ಮನೆಗೆ ತರುವ ಭರವಸೆ ಇಲ್ಲ. ಈ ಬಾರಿʼ ಬೆಳೆಯೊಂದಿಗೆ ನಮ್ಮ ಜಿಂದಗಿಯೂ ಕೊಚ್ಚಿಕೊಂಡು ಹೋದಂತಾಗಿದೆʼ ಎಂದು ಸಂಕಟ ಬಿಚ್ಚಿಡುತ್ತಾರೆ ರೈತ ಮಾರುತಿ ಬೊಂಪಳ್ಳಿ.
ಜಿಲ್ಲೆಯ ಯಾವುದೇ ಮೂಲೆಗೆ ಹೋದರೂ ಈ ಮೇಲೆ ರೈತರೊಬ್ಬರು ಹೇಳಿದಂತೆ ತಮ್ಮ ಒಡಲ ಸಂಕಟ ಬಿಚ್ಚಿಡುವುದು ಸಾಮಾನ್ಯವಾಗಿ ಕಾಣಬಹುದು.

ಹೌದು, ಬೀದರ್ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಪ್ರವಾಹ ರೈತರು ಬದುಕು ಅಕ್ಷರಶಃ ದುರ್ಬಲಗೊಳಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದಿರುವ ಸೋಯಾಬಿನ್ ಬೆಳೆ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.
ಕಷ್ಟಪಟ್ಟು ಬೆಳೆದಿದ್ದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳು ಮಳೆಯಿಂದ ಹಾನಿಯಾಗಿ ನಷ್ಟವಾಗಿದ್ದರೂ ಸೋಯಾಬಿನ್ ಬೆಳೆಯಿಂದ ಸ್ವಲ್ಪವಾದರೂ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಪ್ರವಾಹ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ರೈತರ ಪರಿಸ್ಥಿತಿ ಸುಧಾರಿಸುವ ಬದಲು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಹದಗೆಡುತ್ತಲೇ ಇದೆ. ಹೆಚ್ಚಿನ ಇಳುವರಿ ಬರಬಹುದೆಂಬ ಆಸೆಯಿಂದ ವಿಪರೀತ ಎನ್ನುವಷ್ಟು ದುಡಿದರೂ ಕೊನೆಗೆ ರೈತರ ಬೆವರು ನೀರುಪಾಲಾಗುತ್ತಿದೆ. ʼದೇಶದ ಬೆನ್ನೆಲುಬುʼ ಎಂದೆಲ್ಲ ನಿತ್ಯ ಸ್ಮರಿಸುವ ರಾಜಕಾರಣಿಗಳು ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣದೆ ಕಂಗಾಲಾದ ʼಅನ್ನದಾತʼನ ಒಡಲ ಸಂಕಟ ಕೇಳೋಕೆ ಪುರಸೊತ್ತಿಲ್ಲ ಎಂಬಂತಾಗಿದೆ.
ʼಕೆಲ ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದ ಉದ್ದು, ಹೆಸರು ಸಂಪೂರ್ಣ ನೀರುಪಾಲಾಗಿತ್ತು. ಇದೀಗ ಸೋಯಾಬಿನ್ ಬೆಳೆ ಕಟಾವಿಗೆ ಬಂದಿದೆ. ಆದರೆ, ನಿರಂತರ ಮಳೆಯಿಂದ ಜಲಾವೃತಗೊಂಡಿದ್ದು, ಬೆಳೆಯಲು ಖರ್ಚು ಮಾಡಿರುವ ಹಣವೂ ವಾಪಸ್ ಬರುವ ಲಕ್ಷಣ ಕಾಣಿಸುತ್ತಿಲ್ಲ. ಪದೇ ಪದೇ ಅತಿವೃಷ್ಟಿ-ಅನಾವೃಷ್ಟಿ ತುತ್ತಾಗಿ ಬದುಕು ಬರ್ಬಾದ್ ಆಗ್ತಿದೆʼ ಎಂದು ರೈತರು ಆಳಲು ತೋಡಿಕೊಂಡರು.
ʼಜಿಲ್ಲಾದ್ಯಂತ ಈ ಬಾರಿ ಮೇ ತಿಂಗಳಿಂದ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ. ಮುಂಗಾರು ಮಳೆ ಉತ್ತಮವಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಿತ್ತು. ಬಿಟ್ಟೂಬಿಡದೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ತಗ್ಗು ಪ್ರದೇಶದ ಹೊಲ ಗದ್ದೆಗಳಲ್ಲಿ ನೀರು ಹರಿಯುತ್ತಿದ್ದು, ಸೋಯಾಬಿನ್ ಕಾಯಿಗಳಿಂದ ಮೊಳಕೆ ಹೊರಗೆ ಬರುತ್ತಿವೆ. ಈ ಸಲ ಸೋಯಾ ರಾಶಿ ಮಾಡುತ್ತೇವೆ ಎಂಬ ಭರವಸೆಯಂತೂ ಇಲ್ಲ. ಸರ್ಕಾರ ಕೂಡಲೇ ಈ ಭಾಗದ ರೈತರ ಒಡಲ ಸಂಕಟ ಆಲಿಸಿ ತತ್ಕ್ಷಣ ಎಕರೆ ₹25 ಸಾವಿರ ಪರಿಹಾರ ಘೋಷಿಸಬೇಕು ಎಂದು ರೈತ ಸುಭಾಷ ವಡಗಾಂವ್ ಆಗ್ರಹಿಸುತ್ತಾರೆ.

ʼದುಬಾರಿ ಬೆಲೆಗೆ ಬೀಜ ಖರೀದಿಸಿ 10 ಎಕರೆ ಸೋಯಾ, 5 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಕಳೆ ತೆಗೆಯಲು, ಔಷಧಿ ಸಿಂಪಡಣೆ ಸೇರಿದಂತೆ ಒಟ್ಟಾರೆ ಈ ವರ್ಷ ಹೆಚ್ಚಿನ ಖರ್ಚು ಮಾಡಿ ಬೆಳೆದಿದ್ದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯಿತ್ತು. ಭಾರಿ ಮಳೆಯಿಂದಾಗಿ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆʼ ಎಂದು ರೈತ ಬೀರಪ್ಪ ಮೇತ್ರೆ ರಕ್ಷಾಳ ನೋವು ತೋಡಿಕೊಂಡರು.
ʼಮಳೆ ನಿಂತರೂ ಸೋಯಾ ಕೈಗೆ ಬರುವ ಲಕ್ಷಣ ಕಾಣುತ್ತಿಲ್ಲ. ಮಾಂಜ್ರಾ ನದಿ ಸುತ್ತಲಿನ ಪ್ರದೇಶ ಜಮೀನು ಜಲಾವೃತವಾಗಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ʼಬೆಳೆ ಹಾನಿ ಪರಿಹಾರದ ಗ್ಯಾರಂಟಿʼ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರೈತ ಬೆಳೆ ಬೆಳೆಯುವಾಗ, ಬೆಳೆದ ನಂತರವೂ ಕಷ್ಟ-ನಷ್ಟ ಅನುಭವಿಸುತ್ತಾನೆ. ಬೆಳೆದ ಫಸಲು ಕಟಾವು ಮಾಡುವ ಹೊತ್ತಿಗೆ ಬರ ಸಿಡಿಲು ಅಪ್ಪಳಿಸಿ ಮತ್ತೆ ಸಂಕಷ್ಟಕ್ಕೀಡಾಗುತ್ತಾನೆ. ಇವೆಲ್ಲವೂ ಕೃಷಿ ಕ್ಷೇತ್ರದ ಬಿಕಟ್ಟುಗಳು. ಅಧಿಕ ಖರ್ಚು, ಆದಾಯ ಕಡಿಮೆಯಿಂದ ಕೈಬಂದ ಇಳುವರಿ ಸಾಲ ತೀರಿಸಲು ಸಾಕಾಗುತ್ತಿಲ್ಲ. ಗ್ರಾಮೀಣ ಭಾಗದ ಬಹುತೇಕ ಕೃಷಿ ಕುಟುಂಬಗಳು ಸಾಲಗಾರ ಕುಟುಂಬಗಳಾಗಿದ್ದು, ರೈತರ ಬದುಕು ಅಸಹನೀಯಗೊಳಿಸಿವೆ ಎಂಬುದು ನಿಜವೇ ಆಗಿದೆ.

ಕಾರಂಜಾ ಜಲಾಶಯ ಹರಿವು, ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆಯಾದ ಅಪಾರ ಪ್ರಮಾಣದ ನೀರಿನಿಂದ ಜಿಲ್ಲೆಯ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದಿಂದ ಸುಮಾರು ಎರಡ್ಮೂರು ಕಿ.ಮೀ. ದೂರದ ಜಮೀನಿಗೆ ನೀರು ನುಗ್ಗಿ ಬೆಳೆಗಳು ಸಂಪೂರ್ಣ ನೀರುಪಾಲಾಗಿವೆ. ಜಿಲ್ಲೆಯ ನಾನಾ ಕಡೆ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ನಿರಂತರ ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲ ದಿನಗಳ ಹಿಂದೆಯೂ ವ್ಯಾಪಕ ಮಳೆಯಾಗಿ ಒಂದು ಲಕ್ಷಕ್ಕೂ ಅಧಿಕ ಬೆಳೆ ಹಾನಿಯಾಗಿ ಸಾವು-ನೋವು ಸಂಭವಿಸಿತು. ಇಷ್ಟೆಲ್ಲ ನಡೆದರೂ ರಾಜ್ಯದ ಮುಖ್ಯಮಂತ್ರಿಯಾಗಲಿ, ಕೃಷಿ, ಕಂದಾಯ ಸಚಿವರಾಗಲಿ ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡಿ ರೈತರ ಸಂಕಟ ಆಲಿಸಲಿಲ್ಲ. ಸಿಎಂ ಖುದ್ದಾಗಿ ಪರಿಶೀಲನೆ ನಡೆಸದಿದ್ದರೂ ಕಂದಾಯ, ಕೃಷಿ, ನೀರಾವರಿ ಸಚಿವರಿಗೆ ವೀಕ್ಷಿಸಲು ನಿರ್ದೇಶಿಸುವ ಸಂವೇದನೆ ತೋರಬಾರದೆ? ಎಂದು ಸಾಮಾಜಿಕ ಚಿಂತಕ ಬಿ.ವಿ.ಜಗದೀಶ್ವರ ಪ್ರಶ್ನಿಸಿದ್ದಾರೆ.
ʼಜಿಲ್ಲೆಯ ಉಸ್ತುವಾರಿ ಸಚಿವ, ಶಾಸಕರು ಮಾತ್ರ ರೈತರ ಸಮಸ್ಯೆಗಳಿಗೆ ಸ್ಪಂದಿಸದರೆ ಸಾಕು ಎನ್ನುವ ಭ್ರಮೆಯಲ್ಲಿರುವ ರಾಜ್ಯದ ಸಿಎಂ, ಕೃಷಿ, ಕಂದಾಯ ಸಚಿವರು ನೊಂದ ರೈತರ ನೋವು ಇನ್ನೆಂದು ಬಲ್ಲಿರಾ? ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಈ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ನೊಂದವರ ಕಣ್ಣೀರು ಒರೆಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ತುರ್ತಾಗಿ ಮಾಡಬೇಕುʼ ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಹಾನಿಯಾಗಿರುವ ಬಗ್ಗೆ ಸರ್ಕಾರ ಶೀಘ್ರದಲ್ಲಿ ವರದಿ ಪಡೆದು ತತ್ಕ್ಷಣ ಪರಿಹಾರ ಘೋಷಿಸಬೇಕು. ಕೈಗೆ ಬಂದ ಅಲ್ಪ ಪ್ರಮಾಣದ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ಗ್ರಾಮೀಣ ಭಾಗದಲ್ಲಿಯೇ ಖರೀದಿ ಕೇಂದ್ರ ಆರಂಭಿಸಬೇಕು. ಆರ್ಥಿಕ ಚೈತನ್ಯ ಕಳೆದುಕೊಂಡ ರೈತರಿಗೆ ಹಿಂಗಾರು ಬಿತ್ತನೆ ಬೀಜ ಉಚಿತ ವಿತರಣೆಗೆ ಮುಂದಾಗಬೇಕು. ಬೆಳೆ ವಿಮೆ ಪರಿಹಾರ ಬಿಡುಗಡೆ, ರೈತರ ಸಾಲಮನ್ನಾ ಮಾಡುವಂತೆ ಎಂದು ರೈತ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಬೀದರ್ | ಮುಂದುವರೆದ ಮಳೆ : ಮುಳುಗಡೆಯಾದ ಸೇತುವೆಗಳು; ಜಲಾವೃತವಾದ ಬೆಳೆ
ಉತ್ತಮ ಇಳುವರಿ ಬಂದಾಗ ಮಳೆ ಬರದೆ ಬೆಳೆ ಹಾಳಾಗುವುದು, ಉತ್ತಮ ಆದಾಯ ಗಳಿಸಬಹುದೆಂಬ ಕನಸು ಕಟ್ಟಿಕೊಂಡ ರೈತರಿಗೆ ಪ್ರವಾಹ ಅಪ್ಪಳಿಸುವುದು ನಿರಂತರ ನಡೆಯುತ್ತಿರುವ ಪ್ರಕ್ರಿಯೆ ಎನ್ನುವಂತಾಗಿದೆ. ರೈತರ ಬೆನ್ನುಬಿಡದ ʼಅತಿವೃಷ್ಟಿ-ಅನಾವೃಷ್ಟಿʼಗಳು ಕೃಷಿ ಕ್ಷೇತ್ರ ತೊರೆದು ಬೇರೆ ಕ್ಷೇತ್ರಕ್ಕೆ ವಲಸೆ ಹೋಗಿ ಪರಿಹಾರ ಕಂಡುಕೊಳ್ಳುವುದು ಹೊಸದೇನಲ್ಲ!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




