ಆರ್ಎಸ್ಎಸ್ ಹಾಗೂ ಅದಕ್ಕೆ ಸಂಬಂಧಿಸಿದ ಮನುವಾದಿ ಸಂಘಟನೆಗಳು ಸಮಾಜವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ಅಸಮಾನತೆಗೆ ಪೋಷಣೆ ನೀಡುತ್ತಿದೆ ಎಂದು ಆರೋಪಿಸಿ ರಾಜ್ಯದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದ ಪ್ರಯುಕ್ತ ಬೀದರ್ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬೀದರ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಕಾಲದಲ್ಲೇ ಆರ್ಎಸ್ಎಸ್ ಸಂಘಟನೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ ಕಾರಣವನ್ನು ನೆನಪಿಸಿ, ಈ ಸಂಘಟನೆ ಸಂವಿಧಾನ ಮೌಲ್ಯಗಳಿಗೆ ವಿರೋಧವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆʼ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ʼವಿಶ್ವ ಹಿಂದೂ ಮಹಾಸಭಾ ಸಂಘಟನೆಗಳೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ಅಂಬೇಡ್ಕರ್ ಅವರು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ ಆರ್ಎಸ್ಎಸ್ ಅಪಾಯಕಾರಿ ಸಂಘಟನೆ ಎಂದು ಘೋಷಿಸಿದರು. ಸಂವಿಧಾನ ಜಾರಿವಾದ ವೇಳೆ ಆರ್ಎಸ್ಎಸ್ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನದಲ್ಲಿ ಏನೂ ಇಲ್ಲ ಎಂದು ಮನುಸ್ಮೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುʼ ಎಂದರು.
ಹಕ್ಕೊತ್ತಾಯಗಳು :
ʼಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಿಯಮ ಮೀರಿ ಆರ್ಎಸ್ಎಸ್ ನಡೆಸಿರುವ ಪಥಸಂಚಲನದ ಮೇಲೆ ಸರಕಾರ ಕಾನೂನು ಬದ್ಧ ಕ್ರಮ ಕೈಗೊಳ್ಳಬೇಕು. ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕುʼ ಎಂದು ಆಗ್ರಹಿಸಿದರು.
ʼಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ʼಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯʼ ಎಂದು ಹೆಸರಿಡಬೇಕೆಂದು ದಸಂಸ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಹೀಗಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು. ಕಲ್ಯಾಣ ನಾಡಿನಲ್ಲಿರುವ ಬೀದರ ವಿಶ್ವವಿದ್ಯಾಲಯಕ್ಕೆ ʼಬಸವೇಶ್ವರ ವಿಶ್ವವಿದ್ಯಾಲಯʼ ಎಂದು ಹೆಸರು ಮಾಡಬೇಕುʼ ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಆರ್ಎಸ್ಎಸ್ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!
ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ ಡಾಕುಳಗಿ, ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ, ವಿಭಾಗ ಸಂಘಟನಾ ಸಂಚಾಲಕ ರಾಕುಮಾರ ಬನ್ನೇರ್, ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕಿ ರಂಜೀತಾ ಜೈನೂರ ಸೇರಿದಂತೆ ಪ್ರಮುಖರಾದ ಝೆರೆಪ್ಪಾ ರಾಂಪೂರೆ, ಬಾಬು ಮಾಲೆ, ಸಂಜಿವಕುಮಾರ ಬ್ಯಾಗಿ, ಗೌತಮ ಸಾಗರ, ಗೋಪಾಲ ಸಾಗರ, ಬಸವರಾಜ ಕಾಂಬಳೆ, ನಾಗೇಶ ಜನವಾಡಾ, ಬಸವರಾಜ ಕೋಳಾರ, ಶ್ರೀಕಾಂತ ಸಾಗರ, ಗೌತಮ ಭೋಸ್ಲೆ, ಅಂಬೇಡ್ಕರ್ ಸಾಗರ, ನರಸಿಂಗ ಸಾಮ್ರಾಟ ಮುಂತಾದವರು ಉಪಸ್ಥಿತರಿದ್ದರು.





