ಬೀದರ್‌ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ‌ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ

Date:

ಬೀದರ್‌ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,100 ಬೆಲೆ ಕೊಡಲೇಬೇಕೆಂದು ಪಟ್ಟು ಹಿಡಿದು ಸಂಯುಕ್ತ ಕಿಸಾನ್‌ ಮೋರ್ಚಾ (ರೈತ ಸಂಘಟನೆಗಳ ಒಕ್ಕೂಟ)ದಿಂದ ಕಳೆದ 8 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಗುರುವಾರ ಮಧ್ಯಾಹ್ನ ಅಂತ್ಯಗೊಂಡಿದೆ.

ಪ್ರತಿ ಟನ್‌ ಕಬ್ಬಿಗೆ ₹2,950 ನೀಡುವುದಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧರಣಿ ಸ್ಥಳಕ್ಕೆ ತೆರಳಿ ಅಧಿಕೃತವಾಗಿ ಘೋಷಿಸಿದ ಬಳಿಕ ರೈತ ಮುಖಂಡರು ಶಾಂತಿಯುತವಾಗಿ ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ನೇತೃತ್ವದಲ್ಲಿ ಈ ಮೂರು ಸಭೆಗಳು ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳು ಮೊದಲು ₹2,850 ನೀಡುವುದಾಗಿ ತಿಳಿಸಿದರು. ಅದಕ್ಕೆ ಒಪ್ಪದ ರೈತರು ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಹುಮನಾಬಾದ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು. ಅಂದು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ ಮತ್ತೊಂದು ಸಭೆ ಮಾಡುವುದಾಗಿ ಭರವಸೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಳಿಕ ನ.13ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಜಿಲ್ಲೆಯ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು, ಕಬ್ಬು ಬೆಳೆಗಾರರು ಹಾಗೂ ರೈತರ ಸಂಘಟನೆಗಳ ಮುಖಂಡರೊಂದಿಗೆ ಮೂರನೇ ಸಭೆ ನಡೆಸಿ ಅಂತಿಮವಾಗಿ ₹2,900 ಕೊಡುವುದಾಗಿ ಹೇಳಿದ ಅವರು, ಕಳೆದ ವರ್ಷಕ್ಕಿಂತ ₹250 ಹೆಚ್ಚಿನ ದರ ರೈತರಿಗೆ ಲಭಿಸಲಿದೆ. ಅಲ್ಲದೇ ₹2,900 ದರದಂತೆ ಕಾರ್ಖಾನೆಗಳು ತಪ್ಪದೇ ಜಮೆ ಮಾಡುವಂತೆ ತಾವು ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಆ ಭರವಸೆಗೂ ಒಪ್ಪದ ರೈತ ಮುಖಂಡರು ಟನ್‌ ಕಬ್ಬಿಗೆ ₹3,100 ಕೊಡಲೇಬೇಕು ಎಂದು ಪಟ್ಟು ಹಿಡಿದು ಸಭೆಯಿಂದ ಹೊರ ಬಂದು ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಚೇರಿ ಎದುರುಗಡೆ ನ.13ರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದರು.

WhatsApp Image 2025 11 17 at 6.53.28 PM 2
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸಚಿವ ರಹೀಂ ಖಾನ್‌ ಅವರು ರೈತರ ಧರಣಿ ಸ್ಳಳಕ್ಕೆ ಭೇಟಿ ನೀಡಿದರು.

ನ.13ರಿಂದ ಆರಂಭವಾದ ರೈತರ ಅಹೋರಾತ್ರಿ ಧರಣಿಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಬೆಂಬಲಿಸಿದರು. ಅಲ್ಲದೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್‌ ಪಾಟೀಲ್‌, ಮಾಜಿ ಸಚಿವ ರಾಜಶೇಖರ್‌ ಪಾಟೀಲ್‌, ಮಾಜಿ ಎಂಎಲ್ಸಿ ಅರವಿಂದಕುಮಾರ್‌ ಅರಳಿ ಸೇರಿದಂತೆ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರು, ಮಠಾಧೀಶರು ಭೇಟಿ ನೀಡಿ ಹೋರಾಟಕ್ಕೆ ಸಹಮತ ಸೂಚಿಸಿದರು.

ರೈತನಿಂದ ಉರುಳು ಸೇವೆ, ರಾಜ್ಯಾಧ್ಯಕ್ಷರ ಭೇಟಿ :

ಬೀದರ್ ಜಿಲ್ಲೆಯಲ್ಲಿ ಪ್ರತಿ ಟನ್‌ ಕಬ್ಬಿಗೆ 3,200 ಬೆಲೆ ನಿಗದಿಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟ ದಿನದಂದು (ನ.15) ಶನಿವಾರ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪಾ ಹುಡಗಿ ಅವರು ಉರುಳು ಸೇವೆ ನಡೆಸಿದರು.

ಬೀದರ್‌ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಿಸಿ‌ ಛತ್ರಪತಿ ಶಿವಾಜಿ ವೃತ್ತದವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕಚೇರಿವರೆಗೆ ಉರುಳು ಸೇವೆ ನಡೆಸಿ ಅವರು ʼಕಬ್ಬು ಬೆಲೆ ನಿಗದಿ ಕುರಿತ ನಮ್ಮ ಬೇಡಿಕೆಯನ್ನು ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಕ್ಷಣ ಈಡೇರಿಸಬೇಕು. ಬೇಡಿಕೆ ಪೂರೈಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ವಿನೂತನ ಪ್ರತಿಭಟನೆ ನಡೆಸಲಾಗುವುದು. ನಮ್ಮ ಹಕ್ಕಿನ ದರ ಸಿಗುವವರೆಗೆ ಧರಣಿ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲʼ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಅದೇ ದಿನ ಕರ್ನಾಟಕ ರಾಜ್ಯ ರೈತ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರದಿದ್ದರೆ ಬೃಹತ್‌ ರೈತ ಸಮಾವೇಶ ನಡೆಸುವುದಾಗಿ ತಿಳಿಸಿದರು.

ಧರಣಿ ಆರಂಭವಾದ ಐದನೇ ದಿನಕ್ಕೆ (ನ.17) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಭೇಟಿ ನೀಡಿ ʼಕಬ್ಬಿನ ಬೆಲೆ ನಿಗದಿ ಕುರಿತು ಜಿಲಾಧಿಕಾರಿಗಳು ಈಗಾಗಲೇ ಮೂರು ಸಭೆಗಳು ನಡೆಸಿ ಅಂತಿಮವಾಗಿ ₹2,900 ನೀಡುವುದಾಗಿ ತಿಳಿಸಿದ್ದಾರೆ. ನಿಮ್ಮ ಬೇಡಿಕೆ ಬಗ್ಗೆ ನಾನು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಒಪ್ಪಲು ಸಿದ್ಧರಿಲ್ಲʼ ಎಂದು ಸಚಿವ ಈಶ್ವರ ಖಂಡ್ರೆಯವರು ರೈತರಿಗೆ ತಿಳಿಸಿದರು.

WhatsApp Image 2025 11 20 at 7.41.45 PM
ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪಾ ಹುಡಗಿ ಅವರು ಉರುಳು ಸೇವೆ ನಡೆಸಿದರು.

ನಾಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಾಳೆ ಬೆಳಿಗ್ಗೆ ಹೆಚ್ಚಿನ ಬೆಲೆ ಘೋಷಿಸಲು ಪ್ರಯತ್ನಿಸುವೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಇನ್ನೊಂದು ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ತಿಳಿಸಿದ್ದೇನೆ. ನನ್ನ ಮೇಲೆ ಭರವಸೆಯಿಟ್ಟು ಧರಣಿ ಕೈಬಿಡುವಂತೆ ಸಚಿವ ಈಶ್ವರ ಖಂಡ್ರೆ ಅವರು ರೈತರಿಗೆ ಮನವೋಲಿಸಿದರು.

ಸಚಿವ ಈಶ್ವರ ಖಂಡ್ರೆಯವರ ಮನವೋಲಿಕೆಗೆ ಒಪ್ಪದ ರೈತ ಮುಖಂಡರು, ʼನೀವು ನಮ್ಮ ಸಮಸ್ಯೆ ಆಲಿಸಿ ನಂತರ ಕಬ್ಬಿಗೆ ಹೆಚ್ಚಿನ ದರ ಘೋಷಿಸಿ ಸಿಹಿ ಸುದ್ದಿ ಕೊಡುತ್ತೀರಿ ಎಂಬ ಭರವಸೆ ಇಟ್ಟುಕೊಂಡಿದ್ದೇವೆ. ಆದರೆ, ಹೆಚ್ಚಿನ ದರ ಘೋಷಿಸದೆ ಧರಣಿ ಕೈಬಿಡುವಂತೆ ನೀವು ಹೇಳಿದರೆ ನಾವೆಲ್ಲಿ ಹೋಗಬೇಕು. ನೀವು ಪಕ್ಕಾ ಸಿಹಿ ಸುದ್ದಿ ಕೊಡುವವರೆಗೂ ನಾವು ಧರಣಿ ಕೈಬಿಡುವ ಮಾತೇ ಇಲ್ಲʼ ಎಂದು ಧರಣಿ ಪುನಃ ಮುಂದುವರೆಸಿದರು.

ಹೋರಾಟದ ಎಚ್ಚರಿಕೆ :

ಜಿಲ್ಲೆಯ ಇಬ್ಬರು ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿದರೂ ಜಿಲ್ಲೆಯ ರೈತರ ಕಬ್ಬಿನ ದರ ನಿಗದಿ ಕಗ್ಗಂಟಾಗಿಯೇ ಉಳಿದಿತ್ತು. ಸಿಎಂ ಅವರೊಂದಿಗೆ ಚರ್ಚಿಸಿ ನಾಳೆ ಬೆಳಿಗ್ಗೆ ತಿಳಿಸುವೆ ಎಂದ ಸಚಿವರು ಎರಡು ದಿನ ಕಳೆದರೂ ಬೆಲೆ ನಿಗದಿ ಘೋಷಣೆ ಬಗ್ಗೆ ಯಾವುದೇ ಸಿಹಿ ಸುದ್ದಿ ಕೊಡಲಿಲ್ಲ. ಮೈಕೊರೆಯುವ ಚಳಿಯಲ್ಲಿಯೂ ಧರಣಿ ಮುಂದುವರೆಸಿದ ರೈತರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆಯಿತು.

ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ವಾರ ಕಳೆದರೂ ಜಿಲ್ಲಾಡಳಿತದಿಂದ ಯಾವುದೇ ಸಕರಾತ್ಮಕವಾದ ಭರವಸೆ ಬರಲಿಲ್ಲ. ಸಚಿವರು ಭೇಟಿ ನೀಡಿದರೂ ಘೋಷಣೆ ಭರವಸೆಯಾಗಿಯೇ ಉಳಿಯಿತು. ಅಂತಿಮವಾಗಿ ನ.21ರಂದು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ರಸ್ತೆ ತಡೆ ನಡೆಸಿ ಹೋರಾಟ ಇನ್ನಷ್ಟು ತೀವ್ರಗೊಳಿಸಿವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ರೈತ ಮುಖಂಡರ ಸಭೆಯಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ರೈತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕಾರ್ಖಾನೆ ಮಾಲೀಕರನ್ನು ಮನವೊಲಿಸಿ ಪ್ರತಿ ಟನ್ ಕಬ್ಬಿಗೆ ₹2,850ಕ್ಕೆ ಹೆಚ್ಚುವರಿಯಾಗಿ ₹50 ಸೇರಿಸಿ ₹2,900 ನೀಡಲು ಒಪ್ಪಿಗೆ ಪಡೆಯಲಾಗಿದೆʼ ಎಂದು ತಿಳಿಸಿದರು.

WhatsApp Image 2025 11 20 at 4.53.53 PM
ಕಬ್ಬಿನ ಬೆಲೆ ನಿಗದಿ ಇಂದು ಗುರುವಾರ ರೈತ ಮುಖಂಡರೊಂದಿಗೆ ಡಿಸಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ ಗುಂಟಿ ಅವರು ನಾಲ್ಕನೇ ಬಾರಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿರುವ ಸರ್ಕಾರದ ₹50 ಸಹಾಯ ಸೇರಿ ಒಟ್ಟಾರೆ ಪ್ರತಿ ಟನ್‌ ಕಬ್ಬಿಗೆ ₹2,950 ರೈತರಿಗೆ ನೀಡುವಂತೆ ಸಚಿವರು ಹೇಳಿದ ಮಾತಿಗೆ ರೈತ ಮುಖಂಡರು ಒಪ್ಪಿಗೆ ಸೂಚಿಸಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದ್ದರು.

ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀಣ ಬರಗಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಕಬ್ಬಿನ ದರ ನಿಗದಿ ಕುರಿತು ತಿಳಿಸಿ, ಪ್ರತಿಭಟನೆ ಕೈಬಿಡುವಂತೆ ಹೇಳಿದರು.‌

ಹೋರಾಟದ ಫಲವಾಗಿ ಸಿಕ್ತು ಹೆಚ್ಚುವರಿ ದರ:

ರಾಜ್ಯದಲ್ಲಿ ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಕಡೆ ಆರಂಭದ ರೈತರ ಹೋರಾಟ ಇತರ ಜಿಲ್ಲೆಗಳಿಗೂ ವ್ಯಾಪಿಸಿತು. ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು ಕಬ್ಬಿಗೆ ನಿಗದಿತ ಬೆಲೆ ಘೋಷಿಸಿದ ಬಳಿಕ ಬೆಳಗಾವಿಯಲ್ಲಿ ರೈತರು ಧರಣಿ ಕೈಬಿಟ್ಟಿದ್ದರು. ಆದರೆ, ಸರ್ಕಾರ ಘೋಷಿಸಿದರೂ ರಿಕವರಿ ಹೆಸರಿನಲ್ಲಿ ಬೆಲೆ ನಿಗದಿಗೆ ಕಾರ್ಖಾನೆ ಮಾಲೀಕರು ಸರ್ಕಾರದ ದರ ಒಪ್ಪಲು ಸಿದ್ದರಿರಲಿಲ್ಲ. ಹೀಗಾಗಿ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ನಿಗದಿಯಾದ ದರ ಬೀದರ್‌ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೀಡದೇ ಇರುವುದನ್ನು ಖಂಡಿಸಿ ರೈತರು ಬೀದರ್‌ನಲ್ಲಿಯೂ ಹೋರಾಟ ರೂಪಿಸಿದರು.

WhatsApp Image 2025 11 20 at 8.34.59 PM
ಮೈಕೊರೆಯುವ ಚಳಿಯಲ್ಲಿ ಟೆಂಟ್‌ನಲ್ಲಿ ಕುಳಿತು ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಾಕಾರರು

ಸರ್ಕಾರ ಘೋಷಿಸಿದಂತೆ ಕಬ್ಬಿನ ನಿಗದಿಯಾದ ₹3,300 ದರ ಬೇರೆ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಬೀದರ್‌ ಜಿಲ್ಲೆಯಲ್ಲಿಯೂ ನೀಡಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಬೆಳಗಾವಿಯಲ್ಲಿ ಕಬ್ಬಿನ ರಿಕವರಿ ಹೆಚ್ಚಿರುವ ಕಾರಣ ಅಲ್ಲಿ ಹೆಚ್ಚಿನ ದರ ಇದೆ. ಬೀದರ್‌ನಲ್ಲಿ ಆ ರಿಕವರಿ ಬರುವುದಿಲ್ಲವೆಂಬ ಕಾರ್ಖಾನೆಯವರ ಮಾತಿನಂತೆ ಜಿಲ್ಲಾಡಳಿತ ತಿಳಿಸಿತು.

ಜಿಲ್ಲಾಡಳಿತದ ಮಾತಿಗೆ ʼನಾವು ಸುತಾರಾಂ ಒಪ್ಪುವುದಿಲ್ಲʼ ಎಂದು ರೈತರು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಡಳಿತ ಸಭೆ ನಡೆಸಿ ಮೊದಲು ₹2,850 ಅಂತ ಹೇಳಿತು, ಬಳಿಕ ₹2,900 ಅಂತ ಮನವೋಲಿಸಲು ಪ್ರಯತ್ನಿಸಿತು. ಈ ಹಿಂದೆ ರೈತರು ₹3,300 ಬೇಡಿಕೆಯಿಟ್ಟ ರೈತರು ₹3,200ಕ್ಕೆ ಒಪ್ಪುವುದಾಗಿ ತಿಳಿಸಿದರು. ಅದರ ಬಳಿಕ ಜಿಲ್ಲಾಡಳಿತ ಮೂರನೇ ₹2,900 ನೀಡುವುದಾಗಿ ಹೇಳಿದಾಗ ರೈತರು ₹3,100 ಆದರೂ ಕೊಡಿ ಎಂದರು. ಅದಕ್ಕೆ ಒಪ್ಪದಿದ್ದಾಗ ರೈತರ ಧರಣಿ ಆರಂಭವಾಯಿತು.

ಕಬ್ಬು ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪ್ರಾರಂಭವಾದ ರೈತರ ಹೋರಾಟ ಕೊನೆಗೂ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಪಟ್ಟು ಬಿಡದೆ ರೈತರು ನಡೆಸಿದ ನಿರಂತರ ಧರಣಿಯಾಗಿ ಜಿಲ್ಲಾಡಳಿತ ಘೋಷಿಸಿದ ಬೆಲೆಗಿಂತ ಕನಿಷ್ಠ ₹100 ಹೆಚ್ಚುವರಿಯಾಗಿ ದೊರೆತಿದೆ. ಅಂದರೆ ಕಳೆದ ವರ್ಷಕ್ಕಿಂತ ಟನ್ ಕಬ್ಬಿಗೆ ₹300‌ ಹೆಚ್ಚುವರಿಯಾಗಿ ಸಿಕ್ಕಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯಾರು ಏನಂದ್ರು?

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ʼರೈತ ಮುಖಂಡರು ಬೀದರನಲ್ಲಿ ಸಕ್ಕರೆ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗವುದು. ಸಕ್ಕರೆ ರಿಕವರಿ ದರ ನಿಗದಿ ಪರಿಶೀಲನೆಗೆ ಪ್ರತಿ ಕಾರ್ಖಾನೆಗೆ ಪದವಿ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕರ ತಂಡವೊಂದನ್ನು ನೇಮಿಸಲಾಗುವುದು. ಅಲ್ಲದೇ ರೈತರು ಸಹ 15 ದಿನಕ್ಕೊಮ್ಮೆ ಕಾರ್ಖಾನೆಗೆ ಭೇಟಿ ನೀಡಿ ರಿಕವರಿ ಪರಿಶೀಲಿಸಬಹುದುʼ ಎಂದು ತಿಳಿಸಿದರು.

ʼಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಕಳೆದ ಒಂದು ವಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಅಹೋರಾತ್ರಿ ಧರಣಿ ನಡೆಸಿದ ಎಲ್ಲ ರೈತರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಅಭಿನಂದನೆ ತಿಳಿಸಿದರು.

ʼಕಬ್ಬಿನ ದರ ಹೆಚ್ಚಳಕ್ಕಾಗಿ ಧರಣಿ ನಡೆಸುತ್ತಿದ್ದ ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಯಿತು. ಸಿಎಂ ಅವರು ಈಗಾಗಲೇ ಘೋಷಿಸಿರುವ ಸರ್ಕಾರದ ₹50 ಸಹಾಯ ಸೇರಿ, ಒಟ್ಟಾರೆ ಟನ್‌ಗೆ ₹2950 ರೈತರಿಗೆ ಲಭ್ಯವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರಾಜಿ ಪ್ರಕ್ರಿಯೆಗೆ ಸಹಕರಿಸಿ ಧರಣಿ ಹಿಂಪಡೆದ ರೈತರಿಗೆ ಅಭಿನಂದನೆ ಸಲ್ಲಿಸುವೆ ಎಂದು ಬೀದರ್ ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Image 2025 11 20 at 8.34.58 PM
ಹುಮನಾಬಾದ್‌ನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ ನಡೆದಿತ್ತು.

ರೈತ ಮುಖಂಡರು ಮಾತನಾಡಿ, ʼಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿ ಕಬ್ಬಿಗೆ ಹೆಚ್ಚುವರಿಯಾಗಿ ಬೆಲೆ ನಿಗದಿಪಡಿಸಿದಕ್ಕೆ ಎಲ್ಲ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ರೈತರ ಇನ್ನಷ್ಟು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ಸಚಿವರು ಸ್ಪಂದಿಸಬೇಕೆಂದು ತಿಳಿಸಿದ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಎಸ್ಪಿ ಪ್ರದೀಪ ಗುಂಟಿ ಅವರನ್ನು ಪ್ರತಿಭಟನಾ ಸ್ಥಳದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಶಿವರಾಜ ಪಾಟೀಲ್‌ ಅತಿವಾಳ, ಬಸವರಾಜ ಅಷ್ಟೂರೆ, ವೀರಾರೆಡ್ಡಿ, ವಿಠಲರಾವ, ಶಿವಾನಂದ, ಓಂಪ್ರಕಾಶ ರೊಟ್ಟೆ ಸೇರಿದಂತೆ ಅನೇಕರು ರೈತ ಮುಖಂಡರು ಇದ್ದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...