ಕಳೆದ ಒಂದು ವಾರದಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಪ್ರತ್ಯೇಕ ಘಟನೆಗಳು ಔರಾದ್ ತಾಲೂಕಿನ ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.
ಪ್ರಕರಣ 1 : ಅಂದು ಅ.14ರ ಮಂಗಳವಾರ. ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದ ವಿದ್ಯಾರ್ಥಿ ರಾಕೇಶ ಗಣಪತಿ (22) ಹೊಟ್ಟೆ ನೋವು ತಾಳಲಾರದೆ ಅಂದು ಸಂಜೆ ಮನೆಯಲ್ಲಿದ್ದ ಇಲಿಯ ಔಷಧಿ ಸೇವಿಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅ.15ರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿ ಬೀದರ್ನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ಪದವಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ 2 : ಅಕ್ಟೋಬರ್ 19ರ ಭಾನುವಾರ ಸಂಜೆ ಹೊತ್ತು. ಔರಾದ್ ತಾಲ್ಲೂಕಿನ ಬೇಲೂರ (ಎನ್) ಗ್ರಾಮದಲ್ಲಿ ಸಚಿನ್ ಕಾಶಿನಾಥ್ (19) ಎಂಬ ವಿದ್ಯಾರ್ಥಿ ಯಾವುದೋ ಕಾರಣಕ್ಕೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹೊಲದ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ತೆರಳಿ ಶವ ಹೊರತೆಗೆದರು. ಮೃತ ವಿದ್ಯಾರ್ಥಿ ಬೀದರ್ನ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ವರ್ಷದ ಇಂಜಿನಿಯರ್ ವ್ಯಾಸಂಗ ಮಾಡುತ್ತಿದ್ದರು.
ಪ್ರಕರಣ 3 : ಔರಾದ್ ತಾಲ್ಲೂಕಿನ ವಡಗಾಂವ (ದೇ) ಗ್ರಾಮದಲ್ಲಿ ಅ.19ರ ಭಾನುವಾರ ಸಂಜೆ ಕಾರ್ತಿಕ ಪ್ರಕಾಶ (19) ಎಂಬ ವಿದ್ಯಾರ್ಥಿ ಗ್ರಾಮದ ಹೊರವಲಯದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿ ಬೀದರ್ನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.
ಈ ಮೇಲಿನ ಪ್ರಕರಣ 1 ಮತ್ತು 2ರ ಜೀವ ಕಳೆದುಕೊಂಡ ಇಬ್ಬರು ವಿದ್ಯಾರ್ಥಿಗಳು ಒಂದೇ ದಿನ, ಅದೇ ಸಮಯಕ್ಕೆ ಪ್ರತ್ಯೇಕ ಕಡೆ ಬಾವಿಯಲ್ಲಿ ಹಾರಿದ್ದಾರೆ. ಇನ್ನು ಇಬ್ಬರು ವಡಗಾಂವ ಗ್ರಾಮದ ಪ್ರೌಢ ಶಾಲೆಯ ಸಹಪಾಠಿಗಳು ಎಂದು ತಿಳಿದು ಬಂದಿದೆ. ಆದರೆ, ಇಬ್ಬರ ಸಾವಿಗೂ ಖಚಿತ ಕಾರಣ ತಿಳಿದು ಬಂದಿಲ್ಲ.
ಈ ಮೇಲಿನ ಮೂರು ಘಟನೆಗಳು ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೂರು ಪ್ರತ್ಯೇಕ ಯುಡಿಆರ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ 4 : ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಅಕ್ಟೋಬರ್ 15ರಂದು ವಿದ್ಯಾರ್ಥಿ ರಾಕೇಶ ಆತ್ಮಹತ್ಯೆ ಮಾಡಿಕೊಂಡ ಮುಂಚೆ ದಿನ ಅದೇ ಗ್ರಾಮದ ಸುಧಾ ಪ್ರಕಾಶ ಎಂಬ 9ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ವಿದ್ಯಾರ್ಥಿ ಹುಮನಾಬಾದ್ ತಾಲ್ಲೂಕಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಸರಾ ರಜೆ ನಿಮಿತ್ತ ಊರಿಗೆ ಬಂದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದು ಪ್ರಕರಣ ದಾಖಲಾಗಿಲ್ಲ.
ಒಂದೇ ತಾಲ್ಲೂಕಿನ ಅಕ್ಕಪಕ್ಕದ ಗ್ರಾಮಗಳಲ್ಲಿ ವಾರದೊಳಗೆ ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಪೋಷಕರು ಕಣ್ಣೀರಿನಲ್ಲಿ ಜೀವನ ಸಾಗಿಸುವಂತಾಗಿದೆ.
ಬದುಕಿನಲ್ಲಿ ಭರವಸೆ ಇರಲಿ :
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಬದುಕಿಗೆ ಭರವಸೆಯೇ ಮುಖ್ಯ. ಯುವ ಸಮುದಾಯ ಬದುಕಿನ ಬಗ್ಗೆ ಭರವಸೆ ಇಟ್ಟುಕೊಳ್ಳಬೇಕು. ಭರವಸೆಯೇ ಯಾವುದೇ ವ್ಯಕ್ತಿಯನ್ನು ಆತ್ಮಹತ್ಯೆ ಯೋಚನೆಯಿಂದ ಪಾರುಮಾಡುವ ಮಂತ್ರ. ಪೋಷಕರು ಮಕ್ಕಳ ಮೇಲೆ ನಿಗಾವಹಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಆತ್ಮಹತ್ಯೆ ಯೋಚನೆ ಸುಳಿಯದಂತೆ ನೋಡಿಕೊಳ್ಳಬೇಕು.
ಶಾಲಾ-ಕಾಲೇಜುಗಳಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಖಿನ್ನತೆ, ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸುವ ವ್ಯವಸ್ಥೆ ಜೊತೆಗೆ ಅವರಿಗೆ ನೆರವು ಒದಗಿಸುವ ಕೆಲಸ ಆಗಬೇಕಿದೆ.
ಇದನ್ನೂ ಓದಿ : ಬರ-ನೆರೆ ಪರಿಹಾರ | ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಆದ ನಷ್ಟವೆಷ್ಟು? ಕೇಂದ್ರ ಸರ್ಕಾರ ಕೊಟ್ಟಿದ್ದೆಷ್ಟು?
ನೆನಪಿಡಿ : ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ…ಆತ್ಮಹತ್ಯೆಗಳಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ-104,





