ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹300 ಹೆಚ್ಚುವರಿ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.
ಈ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಕೋರಿದ್ದಾರೆ.
‘ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ರೈತರು ಸೇರಿದಂತೆ ಎಲ್ಲರಿಗೂ ನೆರವಾಗುತ್ತಿದೆ. ಅದೇ ರೀತಿ ಆರನೇ ಗ್ಯಾರಂಟಿ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹300 ಹೆಚ್ಚುವರಿ ನೀಡಬೇಕು. ಮುಖ್ಯಮಂತ್ರಿಯವರಿಗೆ ರೈತರ ಬಗ್ಗೆ ಕಾಳಜಿ ಇದೆ. ಇದನ್ನು ಇನ್ನಷ್ಟು ಬಲಪಡಿಸಲು ಹೆಚ್ಚುವರಿ ನೆರವು ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಪಾರ ಮಳೆಗೆ ಉದ್ದು, ಹೆಸರು, ಸೋಯಾ, ತೊಗರಿ ಬೆಳೆಗಳು ಹಾಳಾಗಿವೆ. ತಾವು ಕೂಡ ವೈಮಾನಿಕ ಸಮೀಕ್ಷೆ ನಡೆಸಿದ್ದೀರಿ. ರೈತರ ಕಷ್ಟದ ಅರಿವಾಗಿದೆ. ಜಮೀನಿನಲ್ಲಿ ನೀರು ತುಂಬಿರುವುದರಿಂದ ಹಿಂಗಾರು ಬಿತ್ತನೆ ಸಾಧ್ಯವಾಗಿಲ್ಲ. ಕಬ್ಬು ಬೆಳೆಗಾರರಿಗೆ ನೆರವಾಗಲು ಪ್ರತಿ ಟನ್ ಕಬ್ಬಿಗೆ ₹50 ಹೆಚ್ಚುವರಿಯಾಗಿ ಘೋಷಿಸಿದ್ದೀರಿ. ಆರ್ಥಿಕ ಸಂಕಷ್ಟ ನಿವಾರಿಸಲು ಇದು ಸಾಧ್ಯವಾಗುವುದಿಲ್ಲ. ಆದಕಾರಣ ಪ್ರತಿ ಟನ್ ಕಬ್ಬಿಗೆ ₹300 ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.





