ಕರ್ನಾಟಕದ ಬಲಗೈ ಸಮುದಾಯಕ್ಕೆ ಪ್ರವರ್ಗ (ಎ) ಸ್ಥಾನಮಾನ ನೀಡದಿದ್ದರೆ, ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಸಿದರು.
ಬೀದರ್ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ಒಳಮಿಸಲಾತಿ ವರದಿ ಒಳಸಂಚು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,ʼ ಒಂದು ವಾರದೊಳಗೆ ಕ್ಯಾಬಿನೆಟ್ ಸಭೆ ಕರೆಯಬೇಕು, ಇಲ್ಲದಿದ್ದರೆ ಸರ್ಕಾರ ಬಿಳಿಯುವ ಮಟ್ಟದ ಚಳುವಳಿ ಆರಂಭವಾಗಲಿದೆʼ ಎಂದು ಕರೆ ನೀಡಿದರು.
ʼಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ನಾವು ಮುನ್ನುಡಿ ಬರೆದೆವು. ನಾವು ಬೆಂಬಲಿಸದಿದ್ದರೆ ಅವರು ಎರಡು ಬಾರಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಆದರೆ, ನಮ್ಮನ್ನೇ ಪ್ರವರ್ಗ (ಬಿ)ಯಲ್ಲಿ ಸೇರಿಸಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿದ್ದೇವೆʼ ಎಂದರು.
ʼನಾಗಮೊಹನದಾಸ ವರದಿಯು ಬಲಗೈ ಸಮುದಾಯದ 60 ಸಾವಿರ ಜನರ ಸಂಖ್ಯೆಯನ್ನು ಕುಗ್ಗಿಸುವ ಹುನ್ನಾರವಾಗಿದೆ. ನಮ್ಮ ಸಮುದಾಯವನ್ನು ವಿಭಜಿಸುವ, ಕುಗ್ಗಿಸುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ನಾಗಪುರದ ಆರ್ಎಸ್ಎಸ್ ನಿಂದಲೇ ಈ ಕುತಂತ್ರ ನಡೆದಿದೆ. ಆದರೆ ನಾವು ಹೆದರದೆ ಜನ ಹೋರಾಟಕ್ಕೆ ಸಿದ್ಧರಾಗಿದ್ದೇವೆʼ ಎಂದು ಹೇಳಿದರು.
ಸಭೆಯ ಅಧ್ಯಕ್ಷ ಅನೀಲಕುಮಾರ ಬೇಲ್ದಾರ ಮಾತನಾಡಿ, ʼನಮ್ಮ ಸಮುದಾಯದ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ನಾವು ಸಿದ್ಧರಿದ್ದೇವೆ. ಸ್ವಾಮೀಜಿಯವರ ನೇತೃತ್ವದಲ್ಲಿ ಬೀದರ್ನಿಂದ ಬೆಂಗಳೂರುವರೆಗೆ ಹೋರಾಟ ನಡೆಯಲಿದೆʼ ಎಂದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ತೋಟದಲ್ಲಿ ಬೆಳೆದ ₹15 ಲಕ್ಷ ಮೌಲ್ಯದ ಗಾಂಜಾ ಜಪ್ತಿ; ಆರೋಪಿ ಬಂಧನ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶ್ರೀಪತರಾವ ದೀನೆ ಅವರು ಸಂವಿಧಾನ ಪೀಠಿಕೆ ಪಠಿಸಿದರು, ಬಾಬುರಾವ್ ಪಾಸ್ವನ್ ಸ್ವಾಗತಿಸಿದರು, ಪ್ರದೀಪ್ ನಾಟಿಕರ್ ನಿರೂಪಿಸಿದರು. ಒಕ್ಕೂಟದ ರಮೇಶ ಡಾಕುಳಗಿ, ಸಂದೀಪ್ ಕಾಂಟೆ, ಅಂಬದಾಸ್ ಗಾಯಕವಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





